ಅಪ್ಪಟ ಪ್ರಣಯಾಧಾರಿತ ಚಿತ್ರ ಬಾಬಾ ತೆರೆಗೆ
ಬಾಬಾ ಚಿತ್ರ ಈ ವಾರ ತೆರೆ ಕಂಡಿದೆ. ಬಾಬಾ ಎಂದ ತಕ್ಷಣ ತಮಿಳು ಸುಪರ್ ಸ್ಟಾರ್ ರಜನಿಕಾಂತ್ ಅವರ ಚಿತ್ರವಲ್ಲ. ಅದೇ ಹೆಸರಿನಲ್ಲಿರುವ ಕನ್ನಡ ಚಿತ್ರ. ಹೊಸ ಮುಖಗಳನ್ನು ಹೊತ್ತು ತೆರೆ ಕಾಣುತ್ತಿರುವ ಬಾಬಾ ಅಪ್ಪಟ ಪ್ರಣಯಾಧಾರಿತ ಚಿತ್ರ.
ಬಾಬಾ ಕಾಲೇಜು ಹುಡುಗರನ್ನು ಗುರಿಯಾಗಿಟ್ಟು ನಿರ್ಮಿಸಿದ ಚಿತ್ರವಾಗಿದೆ. ಚಿತ್ರದಲ್ಲಿ ನಾಯಕ ನಟ ಹತ್ತನೇ ಕ್ಲಾಸ್ ನಲ್ಲಿ ಫೇಲಾದ ಯುವಕ, ರೌಡಿ ಆಗಬೇಕು ಎನ್ನುವುದು ಅತನ ಹೆಬ್ಬಯಕೆ. ಅವನ ಅಸೆ ಏನಾಗುತ್ತೆ ಎನ್ನುವುದು ಸಸ್ಪೆನ್ಸ್ ಎಂದರು ನಿರ್ಮಾಪಕ ಶೋಭಾ ರಾಜಣ್ಣ.
ಬಾಬಾ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿರುವ ಕಾರ್ತೀಕ್ ಇನ್ನು 18ರ ಪೋರ, ನಾಯಕಿ ಪ್ರಜ್ಞಾ 14ರ ಬಾಲೆ, ಇದೀಗ ಅವಳು ಒಂಬತ್ತನೇ ಕ್ಲಾಸ್ ಪಾಸಾಗಿ ಹತ್ತನೇ ಕ್ಲಾಸ್ ಗೆ ಕಾಲಿರಿಸಿದ್ದಾಳೆ. ಈ ಕಾರಣದಿಂದ ಸೆನ್ಸಾರ್ ಮಂಡಳಿ ಭಾರೀ ಸಮಸ್ಯೆ ಒಡ್ಡಿತು. ಇದರಿಂದ ಚಿತ್ರ ಬಿಡುಗಡೆಗೆ ವಿಳಂಬವಾಯಿತು. ಜತೆಗೆ ಚಿತ್ರಕ್ಕೆ ಎ ಪ್ರಮಾಣ ಪತ್ರ ದೊರೆಕಿತು.ಸೆನ್ಸಾರಿನ ತಕರಾರಿನ ನಂತರ ಚಿತ್ರಮಂದಿರಕ್ಕೆ ಕೂಡಾ ನಾವು ಹರಸಾಹಸ ಮಾಡಬೇಕಾಯಿತು. ಈ ಎಲ್ಲ ಅಡ್ಡಿ ಆತಂಕಗಳನ್ನು ದಾಟಿಕೊಂಡು ತೆರೆಗೆ ತರಲಾಗಿದೆ. ಕನ್ನಡ ಚಿತ್ರ ಪ್ರೇಮಿಗಳು ಚಿತ್ರ ನೋಡುವ ಮೂಲಕ ಪ್ರೋತ್ಸಾಹ ನೀಡಬೇಕು ಎಂದು ರಾಜಣ್ಣ ಮನವಿ ಮಾಡಿಕೊಂಡರು.
ಹಿರಿಯ ಛಾಯಾಗ್ರಾಹಕ ಸುಂದರನಾಥ್ ಸುವರ್ಣ ಈ ಚಿತ್ರದಲ್ಲಿ ಛಾಯಾಗ್ರಾಹಕರಾಗಿ ಕೆಲಸ ಮಾಡಿರುವುದು ಚಿತ್ರದ ಹೈಲೈಟ್. ಮತ್ತೆ ಮತ್ತೆ ಕೇಳಬೇಕೆಂಬ ಹಾಡುಗಳಿವೆ ಎನ್ನುವ ರಾಜಣ್ಣ, ಒಳ್ಳೇಯ ಚಿತ್ರ ನಿರ್ಮಾಣ ಮಾಡಿರುವೆ ಎನ್ನುವ ತೃಪ್ತಿಯಿದೆ ಎಂದು ಸಂತೋಷ ವ್ಯಕ್ತಪಡಿಸಿದರು.
ಚೊಚ್ಚಲ ಚಿತ್ರದ ನಿರ್ದೇಶನದ ಹುಮ್ಮಸ್ಸಿನಲ್ಲಿರುವ ತ್ರಿಶೂಲ್ ಭಾರೀ ಉತ್ಸಾಹದಿಂದ ಮಾತಿಗಿಳಿದರು. ಬಾಬಾ ಚಿತ್ರದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಯುವ ಕಲಾವಿದರಿಗೆ ಅವಕಾಶ ಕಲ್ಪಿಸಲಾಗಿದೆ. ಚಿತ್ರವೂ ಅದ್ಭುತವಾಗಿ ಮೂಡಿ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು. ಹಿರಿಯ ನಟ ರಮೇಶ್ ಭಟ್ ನಟಿಸಿರುವುದು ಚಿತ್ರಕ್ಕೆ ಪ್ಲಸ್ ಪಾಯಿಂಟ್. ಕಿರುತೆರೆಯಲ್ಲಿ ಕುರಿಗಳು ಸಾರ್ ಕುರಿಗಳು ಎನ್ನುವ ಏಮಾರಿಸುವ ಕಾರ್ಯಕ್ರಮದಲ್ಲಿ ನೂರಾರು ಜನರನ್ನು ಗೋಳು ಹೊಯ್ದುಕೊಂಡಿದ್ದ ಸುನೀಲ್ ಈ ಚಿತ್ರದಲ್ಲಿ ಹಾಸ್ಯ ಪಾತ್ರದಲ್ಲಿ ನಟಿಸಿದ್ದಾರೆ. ಒಟ್ಟಿನಲ್ಲಿ ಬಾಬಾ ತುಂಬಾ ಸೊಗಸಾಗಿ ಮೊಡಿ ಬಂದಿದೆ.ಹೊಸಬರ ಚಿತ್ರವನ್ನು ಪ್ರೋತ್ಸಾಹಿಸಿ ಎಂದುಹೇಳುವುದನ್ನು ಮರೆಯಲಿಲ್ಲ.
(ದಟ್ಸ್ ಕನ್ನಡ ಸಿನಿ ವಾರ್ತೆ)


Click it and Unblock the Notifications