ಕನ್ನಡರಾಜ್ಯೋತ್ಸವಕ್ಕೆ ಡಾ.ರಾಜ್ ಅಂಚೆಚೀಟಿ
ಕನ್ನಡ ರಾಜ್ಯೋತ್ಸವದ ಕೊಡುಗೆಯಾಗಿ ಭಾರತೀಯ ಅಂಚೆ ಇಲಾಖೆ ಕನ್ನಡಿಗರ ಕಣ್ಮಣಿ,ವರನಟ ಡಾ.ರಾಜಕುಮಾರ್ ಅವರ ಅಂಚೆಚೀಟಿ ಬಿಡುಗಡೆ ಮಾಡಲಿದೆ. ನವೆಂಬರ್ 1, 2009ರಂದು ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆಯುವ ವರ್ಣರಂಜಿತ ಸಮಾರಂಭದಲ್ಲಿ ಐದು ರು.ಮುಖಬೆಲೆಯ ಡಾ.ರಾಜ್ ಅಂಚೆಚೀಟಿ ಬಿಡುಗಡೆಯಾಗಲಿದೆ. ಐದು ರು.ಮುಖಬೆಲೆಯ 'ಫಸ್ಟ್ ಡೇ ಕವರ್' ಸಹ ಅಂದೇ ಬಿಡುಗಡೆ ಮಾಡಲಿದ್ದಾರೆ.
ಡಾ.ರಾಜಕುಮಾರ್ ಅವರ ಸ್ಮರಣಾರ್ಥ ಈ ಅಂಚೆಚೀಟಿಯನ್ನು ಬಿಡುಗಡೆ ಮಾಡಲಾಗುತ್ತಿದೆ. ಐದು ರು.ಮುಖಬೆಲೆಯ ನಾಲ್ಕು ಲಕ್ಷ ಅಂಚೆಚೀಟಿಗಳನ್ನು ಬಿಡುಗಡೆ ಮಾಡುತ್ತಿರುವುದಾಗಿ ಅಂಚೆ ಇಲಾಖೆ ತಿಳಿಸಿದೆ. ರಾಜ್ ಅವರ ಅಂಚೆಚೀಟಿಯೊಂದಿಗೆ ಸಾಹಿತಿ ಆರ್ ಕೆ ನಾರಾಯಣ್ ಅವರ ಅಂಚೆಚೀಟಿಯೂ ಬಿಡುಗಡೆಯಾಗಲಿದೆ.
ಅಣ್ಣಾವ್ರ ಹುಟ್ಟುಹಬ್ಬ (ಏ.24)ದಂದು ಅಂಚೆಚೀಟಿಯನ್ನು ಬಿಡುಗಡೆ ಮಾಡಲು ರಾಜ್ಯ ಸರಕಾರ ನಿರ್ಧರಿಸಿತ್ತು. ಆದರೆಅಂಚೆ ಇಲಾಖೆ, ನಿಯಮಗಳ ಪ್ರಕಾರ ಗಣ್ಯರು ಮೃತಪಟ್ಟ 10 ವರ್ಷಗಳ ತನಕ ಅಂಚೆಚೀಟಿಯನ್ನು ಹೊರತರುವಂತಿಲ್ಲ ಎಂಬನೆಪವೊಡ್ಡಿತ್ತು. ಪ್ರಧಾನಮಂತ್ರಿಗಳ ಕಚೇರಿಯಿಂದ ಅಂಚೆ ಇಲಾಖೆಗೆ ನಿರ್ದೇಶನ ಬಂದ ಹಿನ್ನೆಲೆಯಲ್ಲಿ ನಿಯಮ ಸಡಿಲಿಸಿ ರಾಜ್ ಅಂಚೆ ಬಿಡುಗಡೆಯಾಗುತ್ತಿದೆ.
ವಿಶೇಷ ಸಂದರ್ಭಗಳಲ್ಲಿ ಅಂಚೆ ಇಲಾಖೆ ಈ ನಿಯಮಗಳನ್ನು ಸಡಿಲಿಸಿ ಗಣ್ಯರ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿದ ಉದಾಹರಣೆ ಇದೆ. ಇಂದಿರಾಗಾಂಧಿ, ರಾಜೀವ್ ಗಾಂಧಿ, ಸಂಜಯ್ ಗಾಂಧಿ, ಮಾಧವರಾವ್ ಸಿಂಧಿಯಾ ಮೃತಪಟ್ಟ ಒಂದು ವರ್ಷದೊಳಗೆ ಇವರ ಅಂಚೆಚೀಟಿಗಳನ್ನು ಹೊರತರಲಾಗಿತ್ತು. ಇದೀಗ ಆ ಸಾಲಿಗೆ ಅಣ್ಣಾವ್ರ ಅಂಚೆಚೀಟಿ ಸೇರ್ಪಡೆಯಾಗುತ್ತಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











