'ಥ್ಯಾಂಕ್ಸ್ ಮಾ' ನಿರ್ದೇಶಕರಿಗೆ ಲಂಕೇಶ್ ಚಿತ್ರಪ್ರಶಸ್ತಿ

ಲಂಕೇಶರ ಹಿರಿಯ ಪುತ್ರಿ ಗೌರಿ ಲಂಕೇಶ್ ಮುಖ್ಯಸ್ಥಿಕೆಯಲ್ಲಿ ನಡೆದ ಈ ಸಮಾರಂಭಕ್ಕೆ ಹಿರಿಯ ಚಿಂತಕ ಕಿ.ರಂ ನಾಗರಾಜ, ದಲಿತ ಹೋರಾಟಗಾರ ಮತ್ತು ಸಂವಾದ ಪತ್ರಿಕೆಯ ಸಂಪಾದಕ ಇಂಧೂಧರ ಹೊನ್ನಾಪುರ, ಸಾಹಿತಿ ಚಂಪಾ, ಪ್ರಗತಿಪರ ಚಿಂತಕ ಮತ್ತು ಲಂಕೇಶ್ ವಾರಪತ್ರಿಕೆಯ ಅಂಕಣಕಾರ ಶಿವಸುಂದರ್ ಮತ್ತುಖ್ಯಾತ ಹೃದಯತಜ್ಞ ಪ್ರಭುದೇವ್ ಆಗಮಿಸಿದ್ದರು.
ಇದೇ ಸಂದರ್ಭದಲ್ಲಿ ಲಂಕೇಶರ 'ಮರೆಯುವ ಮುನ್ನ', 'ನೀಲು ಕಾವ್ಯ', ಸಿನಿಮಾ ಬರಹಗಳ ಸಂಕಲನವಾದ 'ಈ ನರಕ ಈ ಪುಲಕ', ಗೌರಿ ಲಂಕೇಶರ 'ಕಂಡಹಾಗೆ' ಹಾಗೂ ಕುಮಾರ್ ಸಮತಳ ಅವರ "ಜೈಲೆಂಬ ಲೋಕದಲ್ಲಿ" ಪುಸ್ತಕಗಳು ಬಿಡುಗಡೆಯಾದವು.
ಲಂಕೇಶರ ಹಳೆಯ ಸ್ನೇಹಿತರು, ಅಭಿಮಾನಿಗಳು ಮತ್ತು ಕರ್ನಾಟಕದ ಜಾಣ ಜಾಣೆಯರು ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.ಕಾರ್ಯಕ್ರಮವನ್ನು ಲಂಕೇಶ್ ಪತ್ರಿಕೆಯ ಹಿರಿಯ ವರದಿಗಾರ ಸದಾಶಿವಶೆಣೈನಿರೂಪಿಸಿದರು. ತಮ್ಮ ಚುಟುಕು ಮತ್ತು ಹಾಸ್ಯಭರಿತ ಮಾತುಗಳಲ್ಲಿ ಲಂಕೇಶರ ವ್ಯಕ್ತಿತ್ವ ಎದ್ದುಕಾಣುತ್ತಿತ್ತು.
ಲಂಕೇಶ್ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ವರದಿಗಾರರಾದ ಬಿಳಿದಾಳೆ ಪಾರ್ವತೀಶ್, ಬಿ. ಚಂದ್ರೇಗೌಡ, ಕುಮಾರ್ ಬುರಡಿಕಟ್ಟಿ, ಕಲಾವಿದ ಹಾಗೂ ಸಿನಿಮಾ ವರದಿಗಾರ ಅರುಣ್, ಮ್ಯಾನೇಜರ್ ರಾಜು ಮುಂತಾದವರು ಉಪಸ್ಥಿತರಿದ್ದರು.
ಇರ್ಫಾನ್ ಗೆ ಲಂಕೇಶ್ ಚಿತ್ರ ಪ್ರಶಸ್ತಿ
ಕಳೆದ ಐದು ವರ್ಷಗಳಿಂದ ನಿರ್ದೇಶಕಿ ಕವಿತಾ ಲಂಕೇಶ್ ನೀಡುತ್ತಿರುವ ರಾಷ್ಟ್ರ ಮಟ್ಟದ ಚಿತ್ರ ನಿರ್ದೇಶಕ ಪ್ರಶಸ್ತಿಯನ್ನು ಈ ಬಾರಿ ಹಿಂದಿ ಚಿತ್ರ 'ಥ್ಯಾಂಕ್ಸ್ ಮಾ'ದ ನಿರ್ದೇಶಕ ಇರ್ಫಾನ್ ಕಮಲ್ ಅವರಿಗೆ ಸಂದಿದೆ. ಲಂಕೇಶರ 74ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ನೀಡಲಾಯಿತು. ಸಾಮಾಜಿಕ ಪರಿಣಾಮ ಬೀರುವ ಈ ಚಿತ್ರಕ್ಕೆ ಈ ವರ್ಷದ ಪ್ರತಿಷ್ಠಿತ ಲಂಕೇಶ್ ಚಿತ್ರ ಪ್ರಶಸ್ತಿ ಸಂದಿರುವುದು ಸಿನಿಮಾ ಆಸಕ್ತರಿಗೆ ಖುಷಿಕೊಟ್ಟಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಕವಿತಾ ಲಂಕೇಶ್ ರ ಹೊಸ ಚಿತ್ರದಲ್ಲಿ ಶಿವಣ್ಣ


Click it and Unblock the Notifications