ನೈಜ ಕತೆಯಾಧಾರಿತ ಜೇಡರಹಳ್ಳಿ ರೆಡಿ ಫಾರ್ ರಿಲೀಸ್

ಈ ಹಿಂದೆ ಭೂಗತಜಗತ್ತಿನೊಂದಿಗೆ ಸಂಪರ್ಕ ಹೊಂದಿದ್ದ ಆದರೆ ಸದ್ಯಕ್ಕೆ ಹಿಂಸೆಗೆ ಗುಡ್ ಬೈ ಹೇಳಿ ಸಮಾಜಸೇವೆಯಲ್ಲಿ ತಲ್ಲೀನರಾಗಿರುವ ಜೇಡರಹಳ್ಳಿ ಕೃಷ್ಣಪ್ಪ ಅವರ ಜೀವನ ಕತೆಯಾಧಾರಿತ ಚಿತ್ರವೇ 'ಜೇಡರಹಳ್ಳಿ'. ಈ ಚಿತ್ರಕ್ಕೆ ನಿರ್ಮಾಪಕ ಕೂಡ ಅವರೇ. ಈ ಚಿತ್ರದ ಶೂಟಿಂಗ್ ಮುಗಿದಿದ್ದು ಇನ್ನೇನು ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ.
ಇತ್ತೀಚೆಗೆ 'ಜೇಡರಹಳ್ಳಿ' ಚಿತ್ರದ ಧ್ವನಿಸುರುಳಿ ಬಿಡುಗಡೆ ಮಾಡಲಾಯಿತು. ಆಡಿಯೋ ಬಿಡುಗಡೆ ಸಮಾರಂಭಕ್ಕೆ ಫಿಲಂ ಚೇಂಬರ್ ಅಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷ ಸಾ ರಾ ಗೋವಿಂದು ಆಗಮಿಸಿದ್ದರು. ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಸತ್ಯ ಮಾತನಾಡುತ್ತಾ, ಕೃಷ್ಣಪ್ಪ ಹೀರೋ ಆಗಿ ನಟಿಸಿದ ಮೊದಲ ಚಿತ್ರ ಜೇಡರಹಳ್ಳಿ.
ಈ ಚಿತ್ರದಲ್ಲಿ ಅವರು ತುಂಬಾ ಅನುಭವಿ ಕಲಾವಿದನಂತೆ ಅಭಿನಯಿಸಿದ್ದಾರೆ. 'ಜೇಡರಹಳ್ಳಿ' ಚಿತ್ರೀಕರಣವನ್ನು 55 ದಿನಗಳಲ್ಲಿ ಮುಗಿಸಲು ಪ್ಲಾನ್ ಮಾಡಲಾಗಿತ್ತು. ಆದರೆ ಕೃಷ್ಣಪ್ಪನವರ ಸಹಕಾರದಿಂದ ಕೇವಲ 35 ದಿನಗಳಲ್ಲಿ ಚಿತ್ರೀಕರಣ ಮುಗಿಸಿದೆವು ಎಂದು ಹೆಮ್ಮೆಯಿಂದ ಹೇಳಿದರು.
ಚಿತ್ರದ ನಾಯಕ ನಟ ಕೃಷ್ಣಪ್ಪ ಮಾತನಾಡುತ್ತಾ, ಈ ಚಿತ್ರದ ಮೂಲಕ ನಾನು ಸಮಾಜಕ್ಕೆ ಒಂದು ಮುಖ್ಯವಾದ ಸಂದೇಶವನ್ನು ನೀಡುತ್ತಿದ್ದೇನೆ. ಈ ಚಿತ್ರ ನೋಡಿದ ಕೆಲವರಾದರೂ ಹಿಂಸೆಯನ್ನು ತ್ಯಜಿಸಿ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದರು. ಕೃಷ್ಣಪ್ಪನಿಗೆ ಜತೆಯಾಗಿ ಶ್ವೇತಾ, ಧಾಮ ಅಭಿನಯಿಸಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











