ಭಟ್ಟರ ಶಿಷ್ಯ ನಿಮ್ಹಾನ್ಸ್ ಗೆ ಏಕೆ ಹೋದ?

ಮುಂಗಾರು ಮಳೆ, ಗಾಳಿಪಟ ಚಿತ್ರಗಳಲ್ಲದೆ ಮೊಗ್ಗಿನ ಮನಸು, ಮೇಘವರ್ಷಿಣಿ ಮತ್ತು ಒಲವೇ ಮಂದಾರ ಚಿತ್ರಗಳಲ್ಲಿ ಸಹಾಯಕರಾಗಿ ದುಡಿದ ಅನುಭವಿರುವ ರಮೇಶ್ ಅವರನ್ನು ನಂಬಿಕೊಂಡು ಪ್ರಕಾಶಮೂರ್ತಿ ಎಂಬುವರು ಚಿತ್ರಕ್ಕೆ ದುಡ್ಡು ಹಾಕಿದ್ದಾರೆ.
ನಿಮ್ಹಾನ್ಸ್ ಎಂಬ ಚಿತ್ರ ಹೆಸರು ಗಾಂಧಿನಗರದಲ್ಲಿ ವಿಚಿತ್ರ ಕುತೂಹಲ ಮೂಡಿಸಿದೆ. ನಿರ್ಮಾಪಕರು ತಮ್ಮ ಮೊದಲ ನಿರ್ಮಾಣದಲ್ಲೇ ನಿಮ್ಹಾನ್ಸ್ ಸೇರದಿದ್ದರೆ ಸಾಕು ಎಂದು ಆಡಿಕೊಂಡವರು ಇದ್ದಾರೆ. ಆದರೆ, ಚಿತ್ರತಂಡ ಮಾತ್ರ ಆತ್ಮವಿಶ್ವಾಸದಿಂದ "ನಿಮ್ಹಾನ್ಸ್" ಹೆಸರನ್ನು ಸಮರ್ಥಿಸಿಕೊಂಡಿದೆ. ಇದು ಹುಚ್ಚರ ಕಥೆಯಲ್ಲ. ನಿಮ್ಹಾನ್ಸ್ ಆಸ್ಪತ್ರೆ ಸುತ್ತ ಗಿರಕಿ ಹೊಡೆಯುವ ಚಿತ್ರವೂ ಅಲ್ಲ. ಕಥೆ ನಿಮ್ಹಾನ್ಸ್ ಆಸ್ಪತ್ರೆಯಿಂದಲೇ ಶುರುವಾಗುವುದರಿಂದ ಈ ಟೈಟಲ್ ಇಡಲಾಗಿದೆ ಎಂದು ನಿರ್ದೇಶಕ ರಮೇಶ್ ಹೇಳುತ್ತಾರೆ.
ಇಬ್ಬರು ನಾಯಕಿಯರು ಹಾಗೂ ಒಬ್ಬ ನಾಯಕನಿರುತ್ತಾರೆ. ಹಾಗೆಂದು ತ್ರಿಕೋನ ಪ್ರೇಮಕಥೆಯಲ್ಲ. ತಾರಾಬಳಗದ ಆಯ್ಕೆ ಶುರುವಾಗಿದೆ. ಅದರಲ್ಲಿ ಒಬ್ಬ ಮಿಲನ ಚಿತ್ರ ಖ್ಯಾತಿಯ ಪಾರ್ವತಿ ಮೆನನ್ ಅವರನ್ನು ಕರೆತರುವ ಸಾಧ್ಯತೆಯಿದ್ದರೂ, ಆಕೆ ಯಾವುದೇ ಕನ್ನಡ ಪ್ರಾಜೆಕ್ಟ್ ಸದ್ಯಕ್ಕೆ ಮಾಡುತ್ತಿಲ್ಲ ಎಂದು ಹೇಳಿದ್ದಾಳೆ. . ಅವಿನಾಶ್-ರಾಮಚಂದ್ರ ಎಂಬುವರು ಮೊದಲ ಬಾರಿಗೆ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.
ಶಿಷ್ಯನ ಚಿತ್ರಕ್ಕೆ ಗುರುಗಳ ಗೀತ ಸಾಹಿತ್ಯ ಇಲ್ಲದಿದ್ದರೆ ಹೇಗೆ, ಯೋಗರಾಜ ಭಟ್ಟರು ಬರೆದ ಹಾಡುಗಳ ಜೊತೆಗೆ ಜಯಂತ್ ಕಾಯ್ಕಿಣಿ ಹಾಗೂ ಸುಧೀರ್ ಅತ್ತಾವರ, ಕೆ. ಕಲ್ಯಾಣ್ ಅವರು ಸಹ ಹಾಡು ರಚಿಸಿದ್ದಾರೆ. ನಿಮ್ಹಾನ್ಸ್ ನಿಂದ ಶುರುವಾಗುವ ಕಥೆ ಎಲ್ಲಿ ಕೊನೆಗೊಳ್ಳುತ್ತದೋ ಕಾದು ನೋಡಬೇಕಿದೆ. [ಯೋಗರಾಜ್ ಭಟ್]


Click it and Unblock the Notifications











