70ರ ದಶಕದ ಯಶಸ್ವಿ ನಿರ್ದೇಶಕ ಚಾರಿ ಇನ್ನಿಲ್ಲ
*ಮಂದಾಕಿನಿ
ಹಿರಿಯ ಕನ್ನಡ ಚಲನ ಚಿತ್ರ ನಿರ್ದೇಶಕ ಎಸ್. ಕೆ. ಎ . ಚಾರಿ ಏಪ್ರಿಲ್ 7ರಂದು ಚೆನ್ನೈನಲ್ಲಿ ನಿಧನರಾದರು.
70ರ ದಶಕದಲ್ಲಿ ಕನ್ನಡ ಚಿತ್ರೋದ್ಯಮದಲ್ಲಿ ಹೆಸರು ಎಸ್.ಕೆ. ಅನಂತಾಚಾರಿ ತಮ್ಮ ಯಶಸ್ವೀ ಚಿತ್ರಗಳ ಮೂಲಕ ಸುದ್ದಿಯಲ್ಲಿದ್ದರು. 1963ರಲ್ಲಿ ಗೌರಿ ಚಿತ್ರದ ಮೂಲಕ ಚಿತ್ರೋದ್ಯಮವನ್ನು ಪ್ರವೇಶಿಸಿದ ಚಾರಿ- ಒಟ್ಟು 9 ಕನ್ನಡ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಚೆನ್ನೈನಲ್ಲಿ ಇದ್ದುಕೊಂಡು ತಮಿಳು ಚಿತ್ರರಂಗಕ್ಕೂ ಕೊಡುಗೆ ನೀಡಿರುವ ಚಾರಿ 3 ಯಶಸ್ವಿ ತಮಿಳು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಪ್ರಣಯ ರಾಜ ಶ್ರೀನಾಥ್ ಅವರನ್ನು ನಾಯಕ ನಟರನ್ನಾಗಿ ಕನ್ನಡ ಚಿತ್ರೋದ್ಯಮಕ್ಕೆ ಪರಿಚಯಿಸಿದ ಅಗ್ಗಳಿಕೆಯೂ ಅನಂತಾಚಾರಿಗೆ ಸಲ್ಲುತ್ತದೆ. 1969ರಲ್ಲಿ ಮಧುರ ಮಿಲನ ಚಿತ್ರದ ಮೂಲಕ ಶ್ರೀನಾಥ್ ಅನಂತಾಚಾರಿ ನಿರ್ದೇಶನದಲ್ಲಿ ನಾಯಕ ನಟರಾಗಿ ಅಭಿನಯ ಶುರುಮಾಡಿದರು.
ಜಯಲಲಿತಾರನ್ನು ಹಾಕಿಕೊಂಡು ಮಾವನ ಮಗಳು ಹಾಗೂ ಮನೆ ಅಳಿಯ ಚಿತ್ರಗಳನ್ನು ನಿರ್ದೇಶಿಸಿದ ಅವರು- ಕುಂಕುಮ ರಕ್ಷೆ ಚಿತ್ರದ ಮೂಲಕ ರಜನೀಕಾಂತ್ ಮತ್ತು ಅಶೋಕ್ರನ್ನು ನಾಯಕರನ್ನಾಗಿಸಿದರು. ಕುಂಕುಮ ರಕ್ಷೆ ಚಾರಿ ಅವರ ನಿರ್ದೇಶನದ ಕೊನೆಯ ಚಿತ್ರ.
ಮಧು ಮಾಲತಿ, ನವ ಕೋಟಿ ನಾರಾಯಣ, ಮನೆ ಅಳಿಯ , ಮನಸ್ಸಾಕ್ಷಿ, ಮುಕುಂದ ಚಂದ್ರ, ಸೋತು ಗೆದ್ದವಳು ಚಾರಿ ಅವರ ಯಶಸ್ವಿ ಚಿತ್ರಗಳು.
ಮೂಲತಃ ಮೈಸೂರಿನವರಾದ ಅನಂತಾಚಾರಿ- ನಟ ಕೆಂಪರಾಜ ಅರಸರು ಚಲನ ಚಿತ್ರ ನಿರ್ಮಿಸುತ್ತಿದ್ದ ಕಾಲದಲ್ಲಿ ಚೆನ್ನೈಗೆ ತೆರಳಿ ಅಲ್ಲೇ ನೆಲೆಸಿದ್ದರು. ಬಹು ಹಿಂದೆಯೇ ಚಿತ್ರೋದ್ಯಮಕ್ಕೆ ವಿದಾಯ ಹೇಳಿದ್ದ ಚಾರಿ 79ರ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications