ಹೈದ್ರಾಬಾದ್ನಲ್ಲಿ ಎಲ್ಲ ಭಾಷೆ ದೇವದಾಸರ ಸಂಗಮ
ವಿವಿಧ ಭಾಷೆಗಳಲ್ಲಿ ತೆರೆ ಕಂಡು ಅಪಾರ ಜನಪ್ರಿಯತೆ ಗಳಿಸಿರುವ 'ದೇವದಾಸ್" ಚಿತ್ರೋತ್ಸವ ಇದೇ ಮೊದಲ ಬಾರಿಗೆ ಸೆ.16 ರಂದು ಹೈದರಾಬಾದ್ನಲ್ಲಿ ನಡೆಯಲಿದೆ. 'ದೇವದಾಸ್ ಫಿಲ್ಮ್ ಫೆಸ್ಟಿವಲ್" ಎನ್ನುವ ಈ ಸಿನಿಮಾ ಹಬ್ಬ ಅಪಾರ ಕುತೂಹಲವನ್ನು ಮೂಡಿಸಿದೆ.
ಬಂಗಾಳಿಯ ಜನಪ್ರಿಯ ಕಾದಂಬರಿಕಾರ ಶರತ್ಚಂದ್ರ ಚಟರ್ಜಿ ಅವರ ದುರಂತ ಪ್ರೇಮಕಥೆಯ 'ದೇವದಾಸ್" ಕಾದಂಬರಿ ವಿವಿಧ ಭಾಷೆಗಳಲ್ಲಿ ಚಲನಚಿತ್ರವಾಗಿ ತೆರೆಕಂಡು ಯಶಸ್ವಿಯಾಗಿದೆ. ಭಾರತೀಯ ನಿರ್ದೇಶಕ ಹಾಗೂ ನಟರಿಗೆ ದೇವದಾಸ್ ಪಾತ್ರ ಸದಾಕಾಲ ಹೊಸತಾಗಿ ಕಾಣುತ್ತಿದ್ದು , ಅದರ ಆಕರ್ಷಣೆ ಆಧುನಿಕ ಯುಗದಲ್ಲೂ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಇತ್ತೀಚಿನ ಸಂಜಯ್ಲೀಲಾ ಬನ್ಸಾರಿ ಅವರ ಚಿತ್ರವೇ ಉದಾಹರಣೆ.
ದೇವದಾಸ್ ಕಾದಂಬರಿಯನ್ನು ಹಿಂದಿ ಭಾಷೆಯಲ್ಲಿಯೇ ಮೂರು ಬಾರಿ ತೆರೆಗೆ ಅಳವಡಿಸಲಾಗಿದೆ. ಒಮ್ಮೆ ಸೆಹಗಲ್, ಇನ್ನೊಮ್ಮೆ ದಿಲೀಪ್ ಕುಮಾರ್, ಇತ್ತೀಚೆಗೆ ಶಾರೂಖ್ ಖಾನ್ ದೇವದಾಸ್ ಪಾತ್ರದಲ್ಲಿ ತಮ್ಮ ಅಭಿನಯ ಸಾಮರ್ಥ್ಯವನ್ನು ಒರೆಗೆ ಹಚ್ಚಿದ್ದಾರೆ. ಶಾರೂಖ್, ಐಶ್ವರ್ಯಾ ರೈ ಹಾಗೂ ಮಾಧುರಿ ಅಭಿನಯದ ನೂತನ 'ದೇವದಾಸ್" ಚಿತ್ರವಂತೂ ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿದೆ.
ತೆಲುಗಿನಲ್ಲಿ ಅಕ್ಕಿನೇನಿ ನಾಗೇಶ್ವರರಾವ್ ನಾಯಕರಾಗಿ ಅಭಿನಯಿಸಿದ ದೇವದಾಸ್ ಪ್ರಚಂಡ ಯಶಸ್ಸನ್ನು ಗಳಿಸಿತ್ತು. ದುರಂತ ನಾಯಕನ ಪಾತ್ರದಲ್ಲಿ ನಾಗೇಶ್ವರ ರಾವ್ ತಮ್ಮ ಜೀವಮಾನದ ಶ್ರೇಷ್ಠ ನಟನೆ ನೀಡಿದ್ದರು. ಕುಡುಕನ ಪಾತ್ರದಲ್ಲಿ ಅವರನ್ನು ಮೀರಿಸಬಲ್ಲ ಮತ್ತೊಬ್ಬ ಭಾರತೀಯ ನಟನಿಲ್ಲ ಎನ್ನುವಷ್ಟರ ಮಟ್ಟಿಗೆ ನಾಗೇಶ್ವರರಾವ್ ತಾದ್ಯಾತ್ಮತೆಯಿಂದ ನಟಿಸಿದ್ದರು.
ದೇವದಾಸ್ ಮೇಲೆ ತೆಗೆಯಲಾದ ಎಲ್ಲಾ ಭಾಷೆಯ ಚಿತ್ರಗಳು ಈಗ ಹೈದರಾಬಾದ್ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿವೆ. ಇಂಥದೊಂದು 'ದೇವದಾಸ್" ಚಿತ್ರೋತ್ಸವ ನಡೆಯುತ್ತಿರುವುದು ಇದೇ ಮೊದಲು. ಸೆಪ್ಟಂಬರ್ 16 ರಂದು ಹೈದರಾಬಾದ್ನ ಹರಿಹರ ಕಲಾಭವನದಲ್ಲಿ ಈ ಸಿನಿಮಾ ಹಬ್ಬ ನಡೆಯಲಿದೆ.
ಅಂದಹಾಗೆ, ದೇವದಾಸ್ ಕನ್ನಡದಲ್ಲಿ ಬರುವುದು ಯಾವಾಗ ? ರವಿಚಂದ್ರನ್ ಯಾಕೆ ಮನಸು ಮಾಡಲಿಲ್ಲವೋ?


Click it and Unblock the Notifications