ಅಕ್ಟೋಬರ್ 11ನೇ ತಾರೀಖು ಅಮಿತಾಬ್ ಹುಟ್ಟುಹಬ್ಬ.
ನವದೆಹಲಿ : ಕೇಕ್ ಕತ್ತರಿಸಿ ಉರಿಯುವ ಕ್ಯಾಂಡಲ್ಗೆ 'ಉಫ್' ಊದಿ ಪಾಶ್ಚಾತ್ಯ ಶೈಲಿಯಲ್ಲಿ ಹುಟ್ಟು ಹಬ್ಬವನ್ನು ಆಚರಿಸುವುದು ಕ್ಲೀಷೆಯಾಗಿದ್ದರೂ ಅದು ಈಗಲೂ ಚಾಲೂ ಆಗಿರುವ ಫ್ಯಾಶನ್. ಆದರೂ, 'ಇಷ್ಟು ವರ್ಷ ನಿನ್ನ ದಯೆಯಿಂದ ಬದುಕಿದೆ, ಇನ್ನಷ್ಟು ವರ್ಷ ಬದುಕಿಸಪ್ಪಾ ...' ಅಂತ ಆಸ್ತಿಕರು ದೇವರನ್ನು ಕೇಳಿಕೊಳ್ಳುವುದೂ ಉಂಟಲ್ಲವೇ ? ಈ ಬಾರಿ ಅಮಿತಾಬ್ಗೆ ಷಷ್ಠ್ಯಬ್ದಿ. ಆದ್ದರಿಂದ 60ನೇ ಹುಟ್ಟು ಹಬ್ಬಕ್ಕೆ ಮುನ್ನ ಬಿಗ್ ಬಿ, ಚಾರ್ಮಿಂಗ್ ಅಮಿತಾಬ್ ಬಚ್ಚನ್ ತಿರುಪತಿಗೆ ಭೇಟಿ ನೀಡಿ ಸಂಕಟಗಳ ದೂರ ಮಾಡುವಂತೆ ವೆಂಕಟರಮಣ ದೇವರನ್ನು ಪ್ರಾರ್ಥಿಸಲಿದ್ದಾರೆ.
ಅಕ್ಟೋಬರ್ 11 ಅಮಿತಾಬ್ ಬಚ್ಚನ್ ಬರ್ತ್ಡೇ. ಅಂದು ಮುಂಬಯಿಯ ಜೆಡಬ್ಲ್ಯೂ ಮೇರಿಯೋಟ್ ಹೋಟೆಲ್ನಲ್ಲಿ ಅಮಿತಾಬ್ಗೋಸ್ಕರ ಹುಟ್ಟುಹಬ್ಬದ ಮೇಜವಾನಿ ನಡೆಯಲಿದೆ. ಗುರುವಾರದಂದು ಅಮಿತಾಬ್ ತಿರುಪತಿಗೆ ಭೇಟಿ ನೀಡಿ, ಅಲ್ಲಿ ಒಂದು ದಿನ ಕಳೆಯುವರು. ಮರುದಿನ, ತಿರುಪತಿಯಿಂದ ಮುಂಬಯಿಗೆ ತೆರಳುವರು.
ಪತ್ನಿ ಜಯಾಬಚ್ಚನ್, ಮಗಳು ಶ್ವೇತಾ, ಅಳಿಯ ನಿಖಿಲ್ ನಂದಾ ಮತ್ತು ಮಗ ಅಭಿಷೇಕ್ ಬಚ್ಚನ್ ಜೊತೆಗಿರುತ್ತಾರೆ. ಗಣ್ಯ ಸ್ನೇಹಿತರಾದ ಅನಿಲ್ ಅಂಬಾನಿ ಮತ್ತು ಅಮರ್ ಸಿಂಗ್ ಕೂಡ ಅಮಿತಾಬ್ ಜೊತೆ ತಿರುಪತಿಗೆ ಹೋಗುತ್ತಾರೆ. ಹುಟ್ಟು ಹಬ್ಬದ ಸಲುವಾಗಿ ಜಯಾ ತಾವೇ ಖುದ್ದು ಕಾಳಜಿ ವಹಿಸಿ ಪಾರ್ಟಿ ಆಹ್ವಾನ ಪತ್ರಿಕೆಯನ್ನು ಪ್ರಿಂಟ್ ಮಾಡಿಸಿದ್ದಾರೆ. ಸಮಾಜವಾದಿ ಪಾರ್ಟಿ ನಾಯಕ ಅಮರ್ ಸಿಂಗ್ ದಂಪತಿಗಳೂ ಪಾರ್ಟಿ ಆಯೋಜಿಸಲು ನೆರವಾಗಿದ್ದಾರೆ.
ಅಮಿತಾಬ್ ಕುಟುಂಬ ಅಭಿಷೇಕ್ ಮದುವೆಗೆ ರೆಡಿಯಾಗುತ್ತಿದೆ. ಅಭಿಷೇಕ್ ಬಚ್ಚನ್ ಕರಿಷ್ಮಾ ಕಪೂರ್ಗೆ ಪ್ರಪೋಸ್ ಮಾಡಿ, ಆಕೆ ಅದನ್ನು ಒಪ್ಪಿಕೊಂಡ ದಿನವೇ ಆಕೆ ಬಚ್ಚನ್ ಕುಟುಂಬದ ಸೊಸೆಯಾಗಿದ್ದಾಳೆ ಎಂದು ಅಮರ್ ಸಿಂಗ್ ಹೇಳುತ್ತಾರೆ. ಈ ಖುಷಿಯ ಜೊತೆಗೆ ಅಮಿತಾಬ್ಗೆ ಜಯಾಬಚ್ಚನ್ ನೀಡಲಿರುವ ಹುಟ್ಟುಹಬ್ಬದ ಉಡುಗೊರೆ- ಆಕೆಯೇ ಸಂಪಾದಿಸಿರುವ ಗಂಡನ ಕುರಿತ ಅಪರೂಪದ ಪುಸ್ತಕ.


Click it and Unblock the Notifications