ಇದೀಗ ಕನ್ನಡದಲ್ಲಿ ವಿಕ್ರಮ್ ಮತ್ತು ಬೇತಾಳ...!?
ಬೆಂಗಳೂರು : ಕೆಲವು ವರ್ಷಗಳ ಹಿಂದೆ ದೂರದರ್ಶನದ ರಾಷ್ಟ್ರೀಯ ವಾಹಿನಿಯಲ್ಲಿ ಪ್ರಸಾರವಾಗಿ ಅಪಾರ ಜನಪ್ರಿಯತೆ ಗಳಿಸಿದ್ದ ವಿಕ್ರಮ್ ಔರ್ ಬೇತಾಳ್, ಇನ್ನು ಮುಂದೆ ಕನ್ನಡದಲ್ಲೂ ಪ್ರಸಾರವಾಗಲಿದೆ.
ಭಾರತಿ ಟೆಲಿಫಿಲ್ಮ್ಸ್ ಸಂಸ್ಥೆ ಈ ಧಾರಾವಾಹಿ ನಿರ್ಮಿಸುತ್ತಿದ್ದು, ಛಾಯಾಗ್ರಾಹಕ ಸಂತೋಷ್ಕುಮಾರ್ ನಿರ್ದೇಶಿಸುತ್ತಿದ್ದಾರೆ. ಒಟ್ಟು 52 ಕಂತುಗಳ ಈ ಧಾರಾವಾಹಿಗೆ ವಿಕ್ರಮ ಮತ್ತು ಬೇತಾಳನ ಕಥೆಗಳು ಎಂದು ಹೆಸರಿಡಲಾಗಿದೆ. ಬೇತಾಳನ ಪಾತ್ರವನ್ನು ಪಾಪ ಪಾಂಡು ಖ್ಯಾತಿಯ ಚಿದಾನಂದ ಮಾಡುತ್ತಿದ್ದು, ವಿಕ್ರಮಾದಿತ್ಯನ ಪಾತ್ರವನ್ನು ಪ್ರವೀಣ್ ಎಂಬುವರು ನಿಭಾಯಿಸಲಿದ್ದಾರೆ.
ಸಂತೋಷ್ಕುಮಾರ್ 24 ವರ್ಷಗಳಿಂದ ಛಾಯಾಗ್ರಹಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಮೂರು ಭಾಷೆಯ ಒಟ್ಟು 15 ಚಿತ್ರಗಳಿಗೆ ಸ್ವತಂತ್ರ ಛಾಯಾಗ್ರಾಹಕರಾಗಿ ದುಡಿದಿದ್ದಾರೆ. ಹಲವು ಧಾರಾವಾಹಿ ಮತ್ತು ಸಾಕ್ಷ್ಯ ಚಿತ್ರಗಳ ನಿರ್ಮಾಣದಲ್ಲಿ ಪಳಗಿರುವ ಅವರು 800ಕ್ಕೂ ಅಧಿಕ ಚಿತ್ರಗಳಿಗೆ ಸಹಾಯಕರಾಗಿ ಕೆಲಸ ಮಾಡಿದ್ದಾರೆ.
ಈ ಕಾರ್ಯಕ್ರಮ ಡಿಸೆಂಬರ್ 17ರಿಂದ ಪ್ರತಿ ಶನಿವಾರ ಮತ್ತು ಭಾನುವಾರಗಳಂದು, ಮಧ್ಯಾಹ್ನ 3.30 ರಿಂದ 4.00 ಗಂಟೆಯವರೆಗೆ ಡಿಡಿ 1ರಲ್ಲಿ ಪ್ರಸಾರವಾಗಲಿದೆ. ಹಿಂದಿಯಲ್ಲಿ ಪ್ರಸಾರವಾಗಿ ಮಕ್ಕಳು ಹಾಗೂ ಹಿರಿಯರ ಭಾರೀ ಪ್ರೀತಿ ಗಳಿಸಿದ್ದ ವಿಕ್ರಮ್ ಮತ್ತು ಬೇತಾಳನ ಕಥೆಗಳು, ಕನ್ನಡದ ಮಕ್ಕಳಲ್ಲಿ ರೋಮಾಂಚನ ಉಂಟು ಮಾಡಲು ತಯಾರಾಗಿವೆ.
ಕನ್ನಡ ಧಾರಾವಾಹಿಯಾಂದು ಮೊಟ್ಟಮೊದಲ ಬಾರಿಗೆ ಅಂತರಾಷ್ಟ್ರೀಯ ತಂತ್ರಜ್ಞಾನ ಬಳಸಿಕೊಂಡು ತಯಾರಾಗುತ್ತಿದೆ ಎಂದು ನಿರ್ದೇಶಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಿರ್ದೇಶಕ ಕುಮಾರ್ ಅವರ ಸಹೋದರರಾದ ಕುಶ, ಸಂತೋಷ್ ಮತ್ತು ಮೋಹನ್ ಇದರ ನಿರ್ಮಾಪಕರು.
(ಇನ್ಫೋ ವಾರ್ತೆ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications