ಆಪ್ತರಕ್ಷಕ ಅದ್ದೂರಿ ಸಮಾರಂಭಕ್ಕೆ ರಜನಿಕಾಂತ್
ಸಾಹಸ ಸಿಂಹ ವಿಷ್ಣುವರ್ಧನ್ ಅಭಿನಯದ ಕಟ್ಟಕಡೆಯ ಚಿತ್ರ 'ಆಪ್ತರಕ್ಷಕ' ಸತತ 175ದಿನಗಳನ್ನು ಪೂರೈಸಿದೆ. ಮೈಸೂರಿನ ಲಕ್ಷ್ಮಿ ಮತ್ತು ಬೆಂಗಳೂರಿನ ಸಪ್ನ ಸೇರಿದಂತೆ ಹನೂರು(ಮಾರುತಿ), ಹಾವನಹಟ್ಟಿ(ರೇಣುಕ), ಭಟ್ಕಲ್(ಪುಷ್ಪಾಂಜಲಿ), ರೋಣ(ಮಲ್ಲಿಕಾರ್ಜುನ)ಚಿತ್ರಮಂದಿರಗಳಲ್ಲಿ 'ಆಪ್ತರಕ್ಷಕ' ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಚಿತ್ರ 25 ವಾರಗಳನ್ನು ಯಶಸ್ವಿಯಾಗಿ ಪೂರೈಸಿರುವ ಬಗ್ಗೆ ಚಿತ್ರದ ನಿರ್ಮಾಪಕ ಕೃಷ್ಣ ಪ್ರಜ್ವಲ್ ಅದ್ದೂರಿ ಸಮಾರಂಭವನ್ನು ಆಯೋಜಿಸಿದ್ದಾರೆ. ಆಗಸ್ಟ್ 28ರಂದು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಝಗಮಗಿಸುವ ಸಮಾರಂಭ ನಡೆಯಲಿದೆ.
ಸೆಪ್ಟೆಂಬರ್ 18ರಂದು ವಿಷ್ಣುವರ್ಧನ್ ಅವರ ಹುಟ್ಟುಹಬ್ಬ. ಅಂದೇ 'ಆಪ್ತರಕ್ಷಕ' ಸಮಾರಂಭವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿತ್ತು. ಆದರೆ ಭಾರತಿ ವಿಷ್ಣುವರ್ಧನ್ ಅವರು ಇತರೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಕಾರಣ ಸಮಾರಂಭ ಆ.28ರಂದು ನಡೆಯಲಿದೆ.
ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಆರ್ ಅಶೋಕ್ ಸೇರಿದಂತೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್, ತೆಲುಗು ನಟ ವೆಂಕಟೇಶ್, ಅನುಷ್ಕಾ ಆಗಮಿಸಲಿದ್ದಾರೆ. ಡಾ.ರಾಜ್ ಕುಮಾರ್ ಕುಟುಂಬ, ಅಂಬರೀಷ್ ಸೇರಿದಂತೆ ಕನ್ನಡ ಚಿತ್ರರಂಗದ ಗಣ್ಯರು ಭಾಗವಹಿಸಲಿದ್ದಾರೆ.


Click it and Unblock the Notifications











