ಡಾ.ರಾಜ್ ಬಗ್ಗೆ ಗೊತ್ತಿರಬೇಕಾದ ವಿಚಾರ: ನೀವು ತಿಳಿಯಿರಿ, ಬೇರೆಯವರಿಗೂ ಹೇಳಿರಿ
Recommended Video

ಏಪ್ರಿಲ್ 24...ಕನ್ನಡ ಚಿತ್ರರಂಗ ಹಾಗೂ ಕನ್ನಡ ಚಿತ್ರಪ್ರೇಮಿಗಳ ಪಾಲಿನ ವಿಶೇಷವಾದ ದಿನ. ನಟ ಸಾರ್ವಭೌಮ, ರಸಿಕರ ರಾಜ, ಗಾನ ಗಂಧರ್ವ, ಬಂಗಾರದ ಮನುಷ್ಯ, ವರನಟ ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನ. ಅಣ್ಣಾವ್ರು ದೈಹಿಕವಾಗಿ ಇಲ್ಲವಾದರೂ, ಪ್ರತಿಯೊಬ್ಬರ ಮನದಲ್ಲೂ ಇದ್ದಾರೆ.
ಕನ್ನಡ ಗೊತ್ತಿಲ್ಲದವರು ರಾಜ್ ಬಗ್ಗೆ ತಿಳಿದುಕೊಳ್ಳುತ್ತಾರೆ, ಕನ್ನಡ ಸಿನಿಮಾ ನೋಡದವರು ರಾಜ್ ಸಿನಿಮಾಗಳನ್ನ ನೋಡಲು ಬಯಸುತ್ತಾರೆ. ಕನ್ನಡ ಹಾಡುಗಳೇ ಕೇಳದವರು ರಾಜ್ ಗೀತೆಗಳನ್ನ ಖುಷಿಯಿಂದ ಆಲಿಸುತ್ತಾರೆ. ಹೀಗೆ, ಕನ್ನಡ ಭಾಷೆ, ಕನ್ನಡ ನಾಡಿಗೆ ರಾಯಭಾರಿಯಾಗಿರುವ ಕಲಾವಿದನ ಹುಟ್ಟುಹಬ್ಬವನ್ನ ನಾಡಿನಾದ್ಯಂತ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಅಣ್ಣಾವ್ರ ಬಗ್ಗೆ ಎಷ್ಟೇ ಹೇಳಿದರೂ ಸಾಲದು. ಕರ್ನಾಟಕ, ಭಾರತ ದೇಶಕ್ಕೆ ಖ್ಯಾತರಾಗಿರುವ ರಾಜ್ ಕುಮಾರ್, ದೇಶದಾಚೆಯೂ ಹೆಸರು ಮಾಡಿದ್ದಾರೆ ಎನ್ನುವುದು ನಮ್ಮೆಲ್ಲರ ಹೆಮ್ಮೆ. ಈಗ ನಾವು ಹೇಳಲು ಹೊರಟಿರುವ ವಿಷ್ಯಗಳನ್ನ ನೀವು ತಿಳಿದುಕೊಳ್ಳಿ, ಬೇರೆಯವರಿಗೂ ತಿಳಿಸಿರಿ. ಮುಂದೆ ಓದಿ....

ಮೊದಲ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ
ಕನ್ನಡ ಚಿತ್ರರಂಗದಲ್ಲಿ ಮೊಟ್ಟ ಮೊದಲ ಭಾರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಪುರಸ್ಕೃತರಾದ ನಟ ಡಾ ರಾಜ್ ಕುಮಾರ್. ಚಿತ್ರರಂಗರದಲ್ಲಿ ಅತ್ಯುನ್ನತ ಸಾಧನೆ ಮಾಡಿದವರಿಗೆ ಭಾರತ ಸರ್ಕಾರ ನೀಡುವ ಗೌರವ ಇದಾಗಿದ್ದು, 1995ರಲ್ಲಿ ಅಣ್ಣಾವ್ರು ಮುಡಿಗೇರಿಸಿಕೊಂಡರು.

ಅತಿ ಹೆಚ್ಚು ಕಾಲ ಪ್ರದರ್ಶನ ಕಂಡ ಸಿನಿಮಾ
ಕನ್ನಡ ಚಿತ್ರರಂಗದ ದಾಖಲೆಗಳ ಪ್ರಕಾರ ಕನ್ನಡದಲ್ಲಿ ಅತಿ ಹೆಚ್ಚು ಕಾಲ ಪ್ರದರ್ಶನ ಕಂಡ ಸಿನಿಮಾ 'ಬಂಗಾರದ ಮನುಷ್ಯ'. 1972ರಲ್ಲಿ ತೆರೆಕಂಡಿದ್ದ ಈ ಸಿನಿಮಾ ಸುಮಾರು 2 ವರ್ಷ ಒಂದೇ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿತ್ತು. ಮತ್ತು ಸುಮಾರು 5 ಸೆಂಟರ್ ಗಳಲ್ಲಿ ಒಂದು ವರ್ಷ ಕಂಡು ಸಾರ್ವಕಾಲಿಕ ದಾಖಲೆ ಮಾಡಿತ್ತು.

ಅತಿ ಹೆಚ್ಚು ಬಿರುದು ಪಡೆದ ನಟ
ನಟ ಸಾರ್ವಭೌಮ, ಕರ್ನಾಟಕ ರತ್ನ, ರಸಿಕರ ರಾಜ, ಗಾನ ಗಂಧರ್ವ, ಬಂಗಾರದ ಮನುಷ್ಯ, ವರನಟ ಹೀಗೆ ಇನ್ನು ಹಲವು ಬಿರುದುಗಳಲ್ಲಿ ರಾಜ್ ಕುಮಾರ್ ಅವರನ್ನ ಕರೆಯುತ್ತೇವೆ. ದಾಖಲೆಗಳ ಪ್ರಕಾರ ರಾಜ್ ಕುಮಾರ್ ಅವರಿಗೆ ಸರ್ಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳು ಸುಮಾರು 15ಕ್ಕಿಂತ
ಹೆಚ್ಚು ಬಿರುದು ನೀಡಿ ಗೌರವಿಸಿದೆ. ಇಷ್ಟು ಬಿರುದುಗಳನ್ನ ಹೊಂದಿದ ಏಕೈಕ ನಟ ರಾಜ್ ಕುಮಾರ್.

ಚೊಚ್ಚಲ ಚಿತ್ರದಲ್ಲೇ ರಾಷ್ಟ್ರ ಪ್ರಶಸ್ತಿ
ರಾಜ್ ಕುಮಾರ್ ಅಭಿನಯದ ಚೊಚ್ಚಲ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. 1954ರಲ್ಲಿ ಬಿಡುಗಡೆಯಾಗಿದ್ದ 'ಬೇಡರ ಕಣ್ಣಪ್ಪ' ಚಿತ್ರಕ್ಕಾಗಿ ಅತ್ಯುತ್ತಮ ಸಿನಿಮಾ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು.

ಅತಿ ಹೆಚ್ಚು ಅಭಿಮಾನಿ ಸಂಘಟನೆ
ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ಭಾರತ, ದೇಶ-ವಿದೇಶಗಳಲ್ಲೂ ಡಾ ರಾಜ್ ಕುಮಾರ್ ಅವರ ಹೆಸರಲ್ಲಿ ಅಭಿಮಾನಿ ಸಂಘಟನೆಗಳಿವೆ. ದಾಖಲೆಗಳ ಪ್ರಕಾರ ಜಗತ್ತಿನಾದ್ಯಂತ ಸುಮಾರು 5 ಸಾವಿರಕ್ಕೂ ಅಧಿಕ ರಾಜ್ ಅಭಿಮಾನಿ ಸಂಘಗಳಿವೆ ಎಂದು ಅಂದಾಜಿಸಲಾಗಿದೆ.

ಅಣ್ಣಾವ್ರ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ
ಅಣ್ಣಾವ್ರು ಕೇವಲ ನಟನಾಗಿ ಮಾತ್ರ ಯಶಸ್ಸು, ಅಭಿಮಾನ ಗಳಿಸಿಲ್ಲ. ಗಾಯನದಲ್ಲೂ ಮೋಡಿ ಮಾಡಿದ್ದಾರೆ. ಅನೇಕ ಚಿತ್ರಗೀತೆ, ಭಕ್ತಿ ಗೀತೆಗಳನ್ನ ಹಾಡಿರುವ ಖ್ಯಾತಿ ಅವರದ್ದು. ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿರುವ ಏಕೈಕ ಕನ್ನಡ ನಟ ರಾಜ್ ಕುಮಾರ್. 'ಜೀವನಚೈತ್ರ' ಚಿತ್ರದ 'ನಾದಮಯ'....ಹಾಡಿಗೆ 1992ರಲ್ಲಿ ರಾಷ್ಟ್ರ ಪ್ರಶಸ್ತಿ ಲಭಿಸಿದೆ.

ಅತಿ ಹೆಚ್ಚು ಪ್ರತಿಮೆಗಳನ್ನ ಹೊಂದಿರುವ ನಟ
ರಾಷ್ಟ್ರಪತಿ ಮಹಾತ್ಮ ಗಾಂಧಿ ಅವರ ಪ್ರತಿಮೆಗಳು ಕರ್ನಾಟಕದಲ್ಲಿ ವಿಶೇಷ ಮನ್ನಣೆ ಪಡೆದಿವೆ. ಆದ್ರೆ, ರಾಜ್ ಕುಮಾರ್ ಅವರ ಸುಮಾರು 58ಕ್ಕೂ ಅಧಿಕ ಪ್ರತಿಮೆಗಳು ಅಧಿಕೃತವಾಗಿ ಮನ್ನಣೆ ಪಡೆದುಕೊಂಡಿವೆ.

ಕನ್ನಡದಲ್ಲಿ ಮಾತ್ರ ನಟಿಸಿದ ನಟ
ಸುಮಾರು 5 ದಶಕಗಳ ಕಾಲ ಚಿತ್ರರಂಗದಲ್ಲಿ ಇದ್ದರು, ಬಹುಭಾಷೆಗಳಲ್ಲಿ ಅವಕಾಶಗಳು ಹುಡುಕಿಕೊಂಡು ಬಂದರೂ, ಯಾವುದೇ ಪರಭಾಷೆ ಚಿತ್ರಗಳಲ್ಲಿ ನಟಿಸಿದೇ ಕನ್ನಡದಲ್ಲಿ ಮಾತ್ರ ನಟಿಸಿದ ಹೆಮ್ಮೆಯ ಕನ್ನಡಿಗ ಡಾ ರಾಜ್ ಕುಮಾರ್.

ಕೆಟಂಕಿ ಕರ್ನಲ್ ಗೌರವ
1985 ರಲ್ಲಿ ಯು.ಎಸ್ ನ ಕೆಟಂಕಿಯ ರಾಜ್ಯಪಾಲರಿಂದ 'ಕೆಟಂಕಿ ಕರ್ನಲ್' ಗೌರವಕ್ಕೆ ಪಾತ್ರರಾಗಿರುವ ಏಕೈಕ ನಟ ರಾಜ್ ಕುಮಾರ್.

ಡಾಕ್ಟರೇಟ್ ಗೌರವ ಪಡೆದ ನಟ
ನಟನೆಗಾಗಿ ಡಾಕ್ಟರೇಟ್ ಪಡೆದ ಮೊದಲ ನಟ ಡಾ ರಾಜ್ ಕುಮಾರ್. 1976 ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದುಕೊಂಡರು.


Click it and Unblock the Notifications











