ಕನ್ನಡದ ಕಮಲಹಾಸನ್ ರಮೇಶ್ಗೆ ಹುಟ್ಟುಹಬ್ಬ
ನಟ ದರ್ಶನ್ ಅವರ ಗಲಾಟೆಯಲ್ಲಿ ಇಡೀ ಕನ್ನಡ ಚಿತ್ರರಂಗವೇ ಕಳೆದುಹೋಗಿದೆ. ಆದರೆ ವಿವಾದ ರಹಿತ ನಟ ರಮೇಶ್ ಅರವಿಂದ್ ತಮ್ಮ ಹುಟ್ಟುಹಬ್ಬವನ್ನು ಶನಿವಾರ(ಸೆ.10) ಸರಳವಾಗಿ ಆಚರಿಸಿಕೊಂಡರು. ರಮೇಶ್ ಅರವಿಂದ್ ಅವರು ಇಂದು 47ನೇ ವರ್ಷಕ್ಕೆ ಅಡಿಯಿಟ್ಟರು.
ಕೇವಲ ಕನ್ನಡ ಚಿತ್ರರಂಗದಲ್ಲಷ್ಟೇ ಅಲ್ಲದೆ ಪಕ್ಕದ ತಮಿಳು, ತೆಲುಗು ಚಿತ್ರರಂಗಗಳಲ್ಲೂ ರಮೇಶ್ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಒಂಭತ್ತು ಶತದಿನೋತ್ಸ್ಸವ ಆಚರಿಸಿಕೊಂಡ ಚಿತ್ರಗಳನ್ನು ಕೊಟ್ಟಂತಹ ಅಪರೂಪದ ನಟ ರಮೇಶ್. ಕೇವಲ ನಟನೆಯಲ್ಲಷ್ಟೇ ಅಲ್ಲದೆ ನಿರ್ದೇಶನದಲ್ಲೂ ತನ್ನದೇ ಆದ ಛಾಪು ಮೂಡಿಸಿದ ಕಲಾವಿದ.
ರಮೇಶ್ ಕತೆ ಚಿತ್ರಕತೆ ರಚನೆಯಲ್ಲೂ ಒಂದು ಕೈ ಆಡಿಸಿ ಸೈ ಎನ್ನಿಸಿಕೊಂಡವರು. ಹೂಮಳೆ, ಅಮೃತಧಾರೆ ಹಾಗೂ ಆಕ್ಸಿಡೆಂಟ್ ಚಿತ್ರಗಳಿಗೆ ರಮೇಶ್ ಕತೆ ಹೆಣೆದು ಗೆದ್ದಿದ್ದಾರೆ. ಗಂಭೀರ ಪಾತ್ರಗಳೇ ಇರಲಿ ಕಾಮಿಡೇ ರೋಲೇ ಇರಲಿ ರಮೇಶ್ ಲೀಲಾಜಾಲವಾಗಿ ಒಗ್ಗಿಕೊಳ್ಳುತ್ತಾರೆ. ತಮಿಳಿಗೆ ಕಮಲ ಹಾಸನ್ ಹೇಗೋ ಕನ್ನಡಕ್ಕೆ ರಮೇಶ್ ಅರವಿಂದ್ ಹಾಗೆ.
ಕಸ್ತೂರಿ ವಾಹಿನಿಯ 'ಪ್ರೀತಿಯಿಂದ ರಮೇಶ್' ಹಾಗೂ ಈಟಿವಿ ಕನ್ನಡದಲ್ಲಿ 'ರಾಜ ರಾಣಿ ರಮೇಶ್' ಎಂಬ ಗೇಮ್ ಶೋ ಮೂಲಕ ತಮ್ಮ ಅಭಿಮಾನಿಗಳಿಗೆ ಇನ್ನೂ ಹತ್ತಿರವಾದ ನಟ. ರಮೇಶ್ ಅರವಿಂದ್ ನಿರ್ದೇಶಿಸುತ್ತಿರುವ ಐದನೇ ಚಿತ್ರ 'ನಮ್ಮಣ್ಣ ಡಾನ್'. ಇಂದು ಈ ಚಿತ್ರತಂಡದೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ವಿಕ್ರಮ್ ಆಸ್ಪತ್ರೆಯ ರೋಗಿಗಳಿಗೆ ಹಣ್ಣುಹಂಪಲು ವಿತರಿಸಿ ಆಚರಿಸಿಕೊಂಡರು. ಅವರಿಗೆ ನಿಮ್ಮ ಕಡೆಯಿಂದ ಒಂದು ಸಣ್ಣ ಗಿಫ್ಟ್ ಇಲ್ವಾ! (ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications











