ಕಿಚ್ಚ ಸುದೀಪ್ ಹೇಳಿದ ಕೆಂಪೇಗೌಡ ವಿಶೇಷಗಳು
ಕಿಚ್ಚ ಸುದೀಪ್ ಅಭಿನಯಿಸಿ, ನಿರ್ದೇಶಿಸಿರುವ 'ಕೆಂಪೇಗೌಡ' ಚಿತ್ರ ಒಂದಲ್ಲ ಒಂದು ಕಾರಣಕ್ಕೆ ವಿಶೇಷ ಅನ್ನಿಸಿದೆ. ಸಾಧಾರಣವಾಗಿ ಶುಕ್ರವಾರ ಶುಭ ದಿನ ಎಂದು ಭಾವಿಸುವ ಚಿತ್ರೋದ್ಯಮ ಕೆಂಪೇಗೌಡನನ್ನು ಮಾತ್ರ ಗುರುವಾರವೇ ತೆರೆಗೆ ತಂದಿದೆ. ಸರಿಸುಮಾರು 150 ಚಿತ್ರಮಂದಿರಗಳಲ್ಲಿ ರಾಜ್ಯದಾದ್ಯಂತಚಿತ್ರ ತೆರೆಕಂಡಿದೆ.
ಸುದೀಪ್ ಅಭಿಮಾನಿಗಳಿಗೆ ಈ ಚಿತ್ರಎಲ್ಲಿಲ್ಲದ ಕುತೂಹಲ ಕೆರಳಿಸಿತ್ತು. ತಮಿಳಿನ 'ಸಿಂಗಂ' ಚಿತ್ರದ ರೀಮೇಕ್ ಆದರೂ ಕನ್ನಡಕ್ಕೆ ಸುದೀಪ್ ಹೇಗೆ ತಂದಿದ್ದಾರೆ ಎಂಬ ಸಣ್ಣ ಕುತೂಹಲವನ್ನೂ ಉಂಟು ಮಾಡಿದೆ. ಸಂತೋಷ್ ಚಿತ್ರಮಂದಿರದಿಂದ 'ಗನ್' ಎತ್ತಂಗಡಿ ಮಾಡಿದ್ದಕ್ಕೆ ಆ ಚಿತ್ರದ ನಾಯಕ ನಟ ಹರೀಶ್ ರಾಜ್ ಆತ್ಮಹತ್ಯೆಗೆ ಯತ್ನಿಸಿದ್ದು, 'ನಂ.73 ಶಾಂತಿನಿವಾಸ' ಚಿತ್ರದ ವಿತರಕ ಚಂದ್ರಪ್ಪ ಹಳೆ ಬಾಕಿ ಚುಕ್ತಾ ಮಾಡದಿದ್ದರೆ 'ಕೆಂಪೇಗೌಡ' ಬಿಡುಗಡೆ ಇಲ್ಲ ಎಂದು ಅಡ್ಡಿಪಡಿಸಿದ ಘಟನೆಗಳ ನಡುವೆ ಚಿತ್ರ ಇಂದು ತೆರೆಗೆ ಅಪ್ಪಳಿಸಿದೆ.
ಇಷ್ಟೆಲ್ಲಾ ವಿಘ್ನಗಳನ್ನು ಎದುರಿಸಿ ಬಂದಿರುವ 'ಕೆಂಪೇಗೌಡ' ಚಿತ್ರದ ವಿಶೇಷಗಳೇನು ಎಂದರೆ ಸುದೀಪ್ ಹೇಳುವುದು ಹೀಗೆ. ಈ ಚಿತ್ರದ ಹಾಡುಗಳನ್ನು ವಿದೇಶದಲ್ಲಿ ಚಿತ್ರೀಕರಿಸದೆ ಭಾರತದಲ್ಲೇ ಚಿತ್ರೀಕರಿಸಿದ್ದೇವೆ. ಇದು ಚಿತ್ರದ ಪ್ಲಸ್ ಪಾಯಿಂಟ್. ಭುಜ್ನಲ್ಲಿ ಚಿತ್ರೀಕರಿಸಿದ ಎರಡು ಹಾಡುಗಳನ್ನು ನೋಡಿದರೆ ನೀವೇ ನಂಬಕ್ಕಾಗಲ್ಲ ವಿದೇಶದಲ್ಲಿ ಚಿತ್ರೀಕರಿಸಿದಷ್ಟು ಸೊಗಸಾಗಿ ಮೂಡಿಬಂದಿವೆ.
'ಕೆಂಪೇಗೌಡ'ದ ಚಿತ್ರದ ಮತ್ತೊಂದು ಹೈಲೈಟ್ ಎಂದರೆ, ಫೈಟ್ಸ್. ಚಿತ್ರದಲ್ಲಿನ ಸಾಹಸ ಸನ್ನಿವೇಶಗಳಂತೂ ಮೈನವಿರೇಳಿಸುವಂತಿದೆ. ವಿಶೇಷ ಕ್ಯಾಮೆರಾದಲ್ಲಿ ಚಿತ್ರೀಕರಿಸಿರುವ ಸಾಹಸ ಸನ್ನಿವೇಶಗಳು ಪ್ರೇಕ್ಷಕರ ಕಣ್ಣಿಗೆ ಹಬ್ಬ ಉಂಟು ಮಾಡಲಿವೆ. ತಾಂತ್ರಿಕವಾಗಿ ಚಿತ್ರ ಅತ್ಯುತ್ತಮವಾಗಿ ಮೂಡಿಬಂದಿದ್ದು ಪ್ರೇಕ್ಷಕರು ಸಖತ್ ಎಂಜಾಯ್ ಮಾಡುತ್ತಾರೆ. ಚಿತ್ರವನ್ನು ನೋಡಿದಷ್ಟು ಹೊತ್ತು ಪ್ರೇಕ್ಷಕರಿಗೆ ವಿಡಿಯೋ ಗೇಮ್ ಆಡಿದ ಅನುಭವಾಗುತ್ತದೆ.
ಈ ಚಿತ್ರದ ಮತ್ತೊಂದು ವಿಶೇಷವೆಂದರೆ, ಸಾಯಿ ಕುಮಾರ್ ಅವರ ಸಹೋದರ ರವಿಶಂಕರ್ ಅವರ ಅಭಿನಯ. ಖಳನಟನಾಗಿ ಅವರ ಅಭಿನಯ ಅದ್ಭುತವಾಗಿ ಮೂಡಿಬಂದಿದೆ. ಈ ಪಾತ್ರಕ್ಕಾಗಿ ಸಾಯಿಕುಮಾರ್ ಅವರನ್ನೇ ಸಂಪರ್ಕಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಕಡೆಗೆ ಅವರಂತೆಯೇ ಕಾಣುವ ಅವರ ಸಹೋದರ ರವಿಶಂಕರ್ ಅವರನ್ನು ಕರೆತಂದಿದ್ದೇವೆ ಎಂದು ಸುದೀಪ್ ವಿವರ ನೀಡಿದ್ದಾರೆ. ಒಟ್ಟಿನಲ್ಲಿ ಸುದೀಪ್ ಪ್ರತಿಭೆಗೆ ನಿರ್ಮಾಪಕರ ತಾಕತ್ಗೆ ಸವಾಲೊಡ್ಡಿದ ಚಿತ್ರ ಕೆಂಪೇಗೌಡ.


Click it and Unblock the Notifications











