ಅಯ್ಯೋ ಶಿವನೇ ! ದರ್ಶನ್ ಜೊತೆ ನಡೆದೆ ಹೋಗಿದೆಯಾ ಪವಿತ್ರಾ ಗೌಡ ಮದುವೆ ?ವೈರಲ್ ಫೋಟೊಗಳ ಅಸಲಿಯತ್ತೇನು ?
ಹೆಚ್ಚೇನು ಇಲ್ಲ. ಎರಡು ಮೂರು ವರ್ಷದ ಹಿಂದೆ ಪವಿತ್ರಾ ಗೌಡ ಹೆಸರು ಕೇಳಿದ ತಕ್ಷಣ ಮೊದಲೆಲ್ಲ ಯಾರಿವರು ಎಂಬ ಪ್ರಶ್ನೆ ಅನೇಕರಲ್ಲಿ ಮೂಡುತ್ತಿತ್ತು. ಯಾಕೆಂದರೆ ತನ್ನನ್ನು ತಾನು ನಟಿಯೆಂದು ಹೇಳಿಕೊಳ್ಳುತ್ತಿದ್ದ ಪವಿತ್ರಾ ಗೌಡ ಚಿತ್ರರಂಗದಲ್ಲಿ ಸಾಧಿಸಿ-ಬೇಧಿಸಿದ್ದು ಅಷ್ಟರಲ್ಲಿಯೇ ಇದೆ. ''ಅಗಮ್ಯ'' ಎನ್ನುವ ಪರಮತೋಪು ಚಿತ್ರದಲ್ಲಿ ನಟಿಸಿದ್ದ ಪವಿತ್ರಾ ಗೌಡ ಆ ನಂತರ ''ಛತ್ರಿಗಳು ಸಾರ್ ಛತ್ರಿಗಳು''..
''ಸಾಗುವ ದಾರಿಯಲ್ಲಿ'' ಎಂಬ ಚಿತ್ರದಲ್ಲಿ ನಟಿಸಿದ್ದರು.ಈ ಚಿತ್ರಕ್ಕೆ ಇವರಿಗೆ ಸಿಕ್ಕಿದ್ದ ಸಂಭಾವನೆ ಕೇವಲ 20 ಸಾವಿರ ಮಾತ್ರ. ಇದಲ್ಲದೇ ''ಬತ್ತಾಸ್'' ಮತ್ತು ತಮಿಳಿನಲ್ಲಿ ''54312'' ಎಂಬ ಚಿತ್ರಗಳಿಗೆ ಕೂಡ ಪವಿತ್ರಾ ಗೌಡ ಮುಖಕ್ಕೆ ಬಣ್ಣ ಹಚ್ಚಿದ್ದರು.

ಆ ನಂತರ ಅದ್ಹೇಗೋ ಅಸಂಖ್ಯಾತ.. ಅಗಣಿತ ಅಭಿಮಾನಿಗಳನ್ನು ಹೊಂದಿರುವ ದರ್ಶನ್ ಅವರ ಸಾಂಗತ್ಯವನ್ನು ಪವಿತ್ರಾ ಗೌಡ ಬೆಳೆಸಿಕೊಂಡರು. ಉದ್ಯಮಿಯಾಗಿ ಕೂಡ ಹೊರ ಹೊಮ್ಮಿದರು. ''ರೆಡ್ ಕಾರ್ಪೆಟ್ 777'' ಎಂಬ ಡಿಸೈನರ್ ಸ್ಟುಡಿಯೋದ ಒಡತಿಯಾದರು. ಆದರೆ, ಇಷ್ಟಕ್ಕೆ.. ಪವಿತ್ರಾ ಗೌಡ ಅವರಿಗೆ ಸಮಾಧಾನವಾಗಲಿಲ್ಲ. ಈ ಹಿನ್ನೆಲೆ ತಮಗೆ ನೆರವಾದ ದರ್ಶನ್ ಅವರನ್ನು ಕರೆದುಕೊಂಡು ಪರಪ್ಪನ ಅಗ್ರಹಾರಕ್ಕೂ ಕೂಡ ಪವಿತ್ರಾ ಗೌಡ ಹೋಗಿ ಬಂದರು. ಈಗ ಮತ್ತೊಮ್ಮೆ ಕರೆದುಕೊಂಡು ಹೋಗಿದ್ದಾರೆ.
ಇಂಥಾ ಪವಿತ್ರಾ ಗೌಡ ಜೊತೆ ದರ್ಶನ್ ಸದ್ದಿಲ್ಲದೇ ಮದುವೆಯಾಗಿದ್ದಾರಾ..? ಎನ್ನುವ ಅನುಮಾನದ ಸದ್ಯಕ್ಕೆ ಹಲವರನ್ನು ಕಾಡುತ್ತಿದೆ. ಇದಕ್ಕೆ ಕಾರಣವಾಗಿದ್ದು ವೈರಲ್ ಆಗಿರುವ ಕೆಲ ಫೋಟೊಗಳು.

ಹೌದು, ಇಂದು (ಅಕ್ಟೋಬರ್ 31) ಏಕಾಏಕಿ ದರ್ಶನ್ ಮತ್ತು ಪವಿತ್ರಾ ಗೌಡ ಅವರದ್ದು ಎನ್ನಲಾದ ಕೆಲ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ವೈರಲ್ ಆದ ಈ ಫೊಟೊಗಳಲ್ಲಿ ದರ್ಶನ್ ಮಧುಮಗನಂತೆ ಮಿಂಚುತ್ತಿದ್ದಾರೆ. ಮತ್ತೊಂದು ಕಡೆ ಪುರಾತನ ಕಾಲದ ಪವಿತ್ರಾ ಗೌಡ ವಧುವಿನಂತೆ ಕಂಗೊಳಿಸುತ್ತಿದ್ದಾರೆ. ಪವಿತ್ರಾ ಗೌಡ ಕೊರಳಿನಲ್ಲಿ ಅರಿಷಿಣದ ದಾರ ಬೇರೆ ಇದೆ. ಈ ಫೋಟೊಗಳನ್ನು ನೋಡುತ್ತಿದ್ದರೆ ದರ್ಶನ್ ಮತ್ತು ಪವಿತ್ರಾ ಗೌಡ ಗುಟ್ಟು ಗುಟ್ಟಾಗಿ ಮದುವೆಯಾಗಿದ್ದಾರಾ..? ಎಂತಹವರಿಗಾದರೂ ಬಂದೇ ಬರುತ್ತೆ.
ಸದ್ಯ ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿವೆ. ಚರ್ಚೆಯನ್ನು ಕೂಡ ಹುಟ್ಟು ಹಾಕಿವೆ. ಇದೇ ವೇಳೆ ಈ ಫೋಟೊದಲ್ಲಿರುವುದು ನಿಜಕ್ಕೂ ದರ್ಶನ್ ಮತ್ತು ಪವಿತ್ರಾ ಗೌಡ ಅವರೇನಾ..? ಒಂದು ವೇಳೆ ಇಬ್ಬರು ಇರುವುದು ನಿಜಾ ಎಂದಾದರೆ, ಇಷ್ಟು ವರ್ಷಗಳ ಕಾಲ ಹೊರ ಬರದ ಈ ಫೋಟೊಗಳು ಈಗ ಒಮ್ಮಿಂದೊಮ್ಮೆಲೆ ಹೊರ ಬಂದಿದ್ಹೇಗೆ..? ಬಂದಿದ್ದು ಯಾಕೆ..? ಕಾಣದ ಕೈಗಳ ಕೈವಾಡ ಈ ಫೋಟೊಗಳ ಹಿಂದಿದೆಯಾ..?

ದರ್ಶನ್, ದರ್ಶನ್ ಕುಟುಂಬ ಮತ್ತು ದರ್ಶನ್ ಅಭಿಮಾನಿಗಳು ಮತ್ತಷ್ಟು ಮುಜುಗರಕ್ಕೀಡು ಮಾಡುವ ಉದ್ಧೇಶದಿಂದ ಫೋಟೊಗಳನ್ನು ಹರಿಬಿಡಲಾಗಿದೆಯಾ..? ರೇಣುಕಾ ಸ್ವಾಮಿ ಪ್ರಕರಣ ಮಹತ್ತರ ಘಟ್ಟಕ್ಕೆ ಬಂದು ತಲುಪಿದೆ. ನವೆಂಬರ್ 3ರಂದು ದೋಷಾರೋಪಕ್ಕೆ ಮುಹೂರ್ತ ನಿಗಧಿಯಾಗಿದೆ. ಇದೇ ಸಮಯದಲ್ಲಿ ಈ ಫೋಟೊಗಳು ಇಟ್ಟಾಡುತ್ತಿರಲು ಕಾರಣವೇನು..? ಹೀಗೆ ಹತ್ತು ಹಲವು ಉತ್ತರ ಇರದ ಪ್ರಶ್ನೆಗಳು ಸದ್ಯ ಹಲವರ ಮನದಲ್ಲಿ ಮೂಡಿವೆ. ಉತ್ತರ ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್ ಮತ್ತು ಪವಿತ್ರಾ ಗೌಡ ಅವರಿಗೆ ಗೊತ್ತಿರಲು ಸಾಧ್ಯ.
ಇನ್ನುಳಿದಂತೆ ರೇಣುಕಾ ಸ್ವಾಮಿ ಪ್ರಕರಣದಲ್ಲಿ ಕಳೆದ ವರ್ಷ ಪವಿತ್ರಾ ಗೌಡ ಜೊತೆ ದರ್ಶನ್ ಜೈಲು ಪಾಲಾದಾಗ ಪೊಲೀಸ್ ಕಮಿಷನರ್ ದಯಾನಂದ್ ಪ್ರಕರಣದ ಕುರಿತು ಮಾಹಿತಿಯನ್ನು ನೀಡುವಾಗ ಪವಿತ್ರಾ ಗೌಡ ಅವರನ್ನು ದರ್ಶನ್ ಪತ್ನಿ ಎಂದು ಉಲ್ಲೇಖಿಸಿದ್ದರು. ಇದಕ್ಕೆ ಆ ನಂತರ ವಿಜಯಲಕ್ಷ್ಮಿ ಪತ್ರದ ಮೂಲಕ ನಾನು ದರ್ಶನ್ ಅವರ ಏಕೈಕ ಪತ್ನಿ, ಪವಿತ್ರಾ ಗೌಡ ಸ್ನೇಹಿತೆಯಷ್ಟೇ ಎಂದು ಹೇಳಿದ್ದರು. ದಾಖಲೆಗಳಲ್ಲಿ ಸರಿಯಾದ ಮಾಹಿತಿ ಉಲ್ಲೇಖಿಸುವಂತೆ ಮನವಿಯನ್ನು ಮಾಡಿದ್ದರು. ಆದರೂ ಕೂಡ ಅನೇಕರಲ್ಲಿ ಇನ್ನು ಗೊಂದಲ ಇದ್ದೇ ಇದೆ. ಹೀಗಿರುವಾಗ ಈ ಫೋಟೊಗಳು ವೈರಲ್ ಆಗಿದ್ದು ದರ್ಶನ್ ಮತ್ತು ಪವಿತ್ರಾ ಗೌಡ ಸಂಬಂಧ ಮತ್ತೊಮ್ಮೆ ಈ ಮೂಲಕ ಚರ್ಚೆಯಲ್ಲಿದೆ.


Click it and Unblock the Notifications











