ಚಿತ್ರರಂಗದ ಮೂರು ಪ್ರಮುಖ ಬೇಡಿಕೆಗಳಿಗೆ ಸಿಎಂ ಅಸ್ತು
ಬೆಂಗಳೂರು, ಜು. 10 : ಕುಂಟುತ್ತಿರುವ ಕನ್ನಡ ಚಿತ್ರರಂಗದ ಉದ್ಧಾರಕ್ಕಾಗಿ ವಾಣಿಜ್ಯ ಮಂಡಳಿ ಮುಂದಿಟ್ಟಿರುವ ಬೇಡಿಕೆಗಳಲ್ಲಿ ಮೂರು ಪ್ರಮುಖ ಬೇಡಿಕೆಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ತಥಾಸ್ತು ಹೇಳಿದ್ದಾರೆ.
ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್, ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷೆ ಜಯಮಾಲಾ, ನಿರ್ಮಾಪಕರಾದ ಸಾರಾ ಗೋವಿಂದು ಮತ್ತು ರಾಕ್ಲೈನ್ ವೆಂಕಟೇಶ್ ಮೊದಲಾದವರಿದ್ದ ವಾಣಿಜ್ಯ ಮಂಡಳಿಯ ನಿಯೋಗ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಚಿತ್ರರಂಗದ ಏಳ್ಗೆಗಾಗಿ ನಾನಾ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ಅವುಗಳಲ್ಲಿ ಮೂರು ಪ್ರಮುಖ ಬೇಡಿಕೆಗಳಿಗೆ ಮಾತ್ರ ಯಡಿಯೂರಪ್ಪ ತಾತ್ವಿಕ ಒಪ್ಪಿಗೆ ನೀಡಿದ್ದು, ಉಳಿದ ಬೇಡಿಕೆಗಳನ್ನು ಹಂತಹಂತವಾಗಿ ಇಡೇರಿಸುವುದಾಗಿ ವಾಗ್ದಾನ ನೀಡಿದ್ದಾರೆ ಎಂದು ದಟ್ಸ್ಕನ್ನಡಕ್ಕೆ ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ. ಈ ಮೂರು ಬೇಡಿಕೆಗಳಿಗೆ ಮುಂಬರುವ ಬಜೆಟ್ನಲ್ಲಿ ಅನುಮೋದನೆ ದೊರಕಿಸಿಕೊಡುವುದಾಗಿ ಯಡಿಯೂರಪ್ಪ ವಾಗ್ದಾನ ನೀಡಿದ್ದಾರೆ.
ಅಸ್ತು ಎಂದಿರುವ ಮೂರು ಬೇಡಿಕೆಗಳು
1) ರಿಮೇಕ್, ಹಿಂಸಾತ್ಮಕ ಮತ್ತು ಅಶ್ಲೀಲ ಚಿತ್ರ ಬಿಟ್ಟು ಎಲ್ಲ ಕನ್ನಡ ಚಿತ್ರಗಳಿಗೆ ಸಬ್ಸಿಡಿ.
2) ಚಲನಚಿತ್ರ ಅಕಾಡೆಮಿಯ ಸ್ಥಾಪನೆ.
3) ಸ್ವರ್ಣಕಮಲ ಪ್ರಶಸ್ತಿ ಗೆದ್ದ ಚಿತ್ರಗಳಿಗೆ ಬಹುಮಾನ ಮೊತ್ತ 15 ಲಕ್ಷ ರು.ಯಿಂದ 25 ಲಕ್ಷ ರು.ಗೆ ಏರಿಕೆ.
ನಕಲಿ ಸಿಡಿ ಹಾವಳಿಯನ್ನು ತಡೆಗಟ್ಟಲು ಗೂಂಡಾ ಕಾಯ್ದೆ ಜಾರಿಗೆ ತರಬೇಕು, ಚಿತ್ರರಂಗಕ್ಕೆ ದುಡಿದ ಅಶಕ್ತರಿಗೆ ನಿವೇಶನ ನೀಡಬೇಕು ಇನ್ನೂ ಮೊದಲಾದ ಬೇಡಿಕೆಗಳನ್ನು ವಾಣಿಜ್ಯ ಮಂಡಳಿ ಮುಖ್ಯಮಂತ್ರಿ ಮುಂದಿಟ್ಟಿದೆ.
ಸಭೆಯಲ್ಲಿ ಯಡಿಯೂರಪ್ಪನವರ ಜೊತೆ ಮಾಹಿತಿ ಇಲಾಖೆಯ ಮುಖ್ಯ ಕಾರ್ಯದರ್ಶಿ ಸುಬೀರ್ ಹರಿಸಿಂಗ್, ಇಲಾಖೆಯ ನಿರ್ದೇಶಕ ವಿಶುಕುಮಾರ್, ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಎಚ್. ಹಾಲಪ್ಪ ಮೊದಲಾದವರು ಇದ್ದರು.
(ದಟ್ಸ್ಕನ್ನಡ ವಾರ್ತೆ)
ಪೂರಕ ಓದಿಗೆ
ಗೂಂಡಾ ಕಾಯ್ದೆ ಜಾರಿಗೆ ಜಯಮಾಲಾ ಆಗ್ರಹ


Click it and Unblock the Notifications