ದೊಡ್ಡಣ್ಣ ಜನತಾಪಕ್ಷ ಸೇರಿದರು

ಶಿವಮೊಗ್ಗದಲ್ಲಿ ಸೋಮವಾರ (ಫೆ.9) ಜರುಗಿದ ಸರಳ ಸಮಾರಂಭದಲ್ಲಿ ಜನತಾಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಆಯನೂರು ಮಂಜುನಾಥ್, ಪಕ್ಷದ ಧ್ವಜ ನೀಡುವ ಮೂಲಕ ದೊಡ್ಡಣ್ಣನವರನ್ನು ಜನತಾಪಕ್ಷಕ್ಕೆ ಬರ ಮಾಡಿಕೊಂಡರು. ಆಯನೂರು ಮಂಜುನಾಥ್ ಕೂಡ ಇತ್ತೀಚೆಗಷ್ಟೇ ಜನತಾ ಪಕ್ಷ ಸೇರಿದವರು. ಅವರ ಪೂರ್ವಾಶ್ರಮ ಭಾರತೀಯ ಜನತಾಪಕ್ಷ.
ದೊಡ್ಡನವರಿಂದ ಜನತಾಪಕ್ಷಕ್ಕೆ ಲಾಭವಾಗಿದೆ ಎಂದು ಆಯನೂರು ಮಂಜುನಾಥ್ ಸಂತಸ ವ್ಯಕ್ತಪಡಿಸಿದರು. ದೊಡ್ಡಣ್ಣ ನಟನಷ್ಟೇ ಅಲ್ಲ ; ಅವರು ಕಾರ್ಮಿಕರಾಗಿದ್ದರು, ಸಮಾಜಸೇವೆಯನ್ನು ಹಚ್ಚಿಕೊಂಡವರು. ಈ ಕಾರಣದಿಂದಾಗಿ ಪಕ್ಷಕ್ಕೆ ಅನುಕೂಲವಾಗುತ್ತದೆ ಎನ್ನುವುದು ಆಯನೂರು ಲೆಕ್ಕಾಚಾರ. ಆಯನೂರು ಲೆಕ್ಕಾಚಾರ ನಂಬುವುದಾದರೆ, ಸದ್ಯದಲ್ಲಿಯೇ ಮತ್ತೊಬ್ಬ ಪ್ರಖ್ಯಾತ ನಟ ಜನತಾಪಕ್ಷ ಸೇರಲಿದ್ದಾರೆ.
ಚುನಾವಣೆಗೆ ನಿಲ್ಲುತ್ತೀರಾ ದೊಡ್ಡಣ್ಣ ?
ಪಕ್ಷ ಬಯಸಿದರೆ ಯಾಕಾಗಬಾರದು ಎನ್ನುವುದು ದೊಡ್ಡಣ್ಣನವರ ಮರು ಪ್ರಶ್ನೆ . ಯಾವುದೇ ಅಧಿಕಾರ ಬಯಸಿ ನಾನು ಪಕ್ಷಕ್ಕೆ ಬಂದವನಲ್ಲ . ಓರ್ವ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಪ್ರವೇಶಿಸಿದ್ದೇನೆ. ಜಯಪ್ರಕಾಶ್ ನಾರಾಯಣ್ ಅವರನ್ನು ನೆನಪಿಸುವ ಜನತಾ ಪಕ್ಷದ ಕುರಿತು ನನಗೆ ಹೆಮ್ಮೆಯಿದೆ ಎಂದು ದೊಡ್ಡಣ್ಣ ರಾಜಕೀಯ ಪ್ರವೇಶದ ಸಂದರ್ಭದಲ್ಲಿ ಹೇಳಿದರು.
ಸದ್ಯಕ್ಕೆ ಪಕ್ಷದ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ದೊಡ್ಡಣ್ಣ ಉದ್ದೇಶಿಸಿದ್ದಾರೆ. ದೊಡ್ಡಣ್ಣನವರಿಗೆ ಸಂಘಟನೆ ಹೊಸತೇನೂ ಅಲ್ಲ . ಭದ್ರಾವತಿಯ ವಿಎಸ್ಐಎಲ್ ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ದಿನಗಳಲ್ಲಿ , ದೊಡ್ಡಣ್ಣ ಕಾರ್ಮಿಕ ಸಂಘಟನೆಯಲ್ಲಿ ಗುರ್ತಿಸಿಕೊಂಡಿದ್ದರು. ಆ ಕಾರಣದಿಂದಲೇ ಭದ್ರಾವತಿ ವಿಧಾನಸಭಾ ಕ್ಷೇತ್ರದಿಂದ ದೊಡ್ಡಣ್ಣ ಸ್ಪರ್ಧಿಸಲಿದ್ದಾರೆ ಎನ್ನುವ ಮಾತುಗಳು ಜನತಾಪಕ್ಷದ ಕಚೇರಿಯಲ್ಲಿ ಕೇಳಿಬರುತ್ತಿವೆ.


Click it and Unblock the Notifications