ವಿಜಯಶಾಂತಿ ದೆಸೆಯಿಂದ ಎಂಟು ಕೋಟಿಗೆ ಎಳ್ಳು-ನೀರು!
ಕನ್ನಡಲ್ಲಿ ವಿಜಯಶಾಂತಿ ನಟಿಸಿದ ‘ಶಕ್ತಿ’ ಮತ್ತು ‘ಗೌಡ್ತಿ’ ಚಿತ್ರಗಳು ಡಬ್ಬದಲ್ಲಿ ಕೊಳೆಯುತ್ತಿವೆ. ಆ ಮೂಲಕ ಎಂಟು ಕೋಟಿ ರೂಪಾಯಿಯ ಹೊರೆ ನಿರ್ಮಾಪಕರ ಹೆಗಲೇರಿದೆ. ಕನ್ನಡ, ತಮಿಳು ಮತ್ತು ತೆಲುಗು ಸೇರಿದಂತೆ ಮೂರು ಭಾಷೆಗಳಲ್ಲಿ ತಯಾರಾಗಿರುವ ‘ಶಕ್ತಿ’ ಚಿತ್ರ ಸದ್ಯಕ್ಕೆ ಶಕ್ತಿ ಕಳೆದುಕೊಂಡಿದೆ.
ಕ್ರೀಡೆ ರಂಗದಲ್ಲಿ ನಡೆಯುತ್ತಿರುವ ರಾಜಕೀಯ ಹಾಗೂ ಅಥ್ಲೀಟ್ ಒಬ್ಬಳು ಅದನ್ನು ಎದುರಿಸುವ ದಿಟ್ಟ ಕಥೆಯನ್ನಾಧರಿಸಿದ ‘ಶಕ್ತಿ’ಚಿತ್ರದ ನಿರ್ದೇಶಕರು ಶಿವಮಣಿ. ಈ ಚಿತ್ರಕ್ಕಾಗಿ ಮೂವರು ಸ್ನೇಹಿತರು ಆರು ಕೋಟಿ ರೂಪಾಯಿ ಬಂಡವಾಳ ಹೂಡಿದ್ದಾರೆ. ಆ ಹಣ ಹಾಳು ಬಾವಿಗೆ ಹಾಕಿದಂತಾಗಿದೆ ಎಂಬುದು ನಿರ್ಮಾಪಕರ ಅಳಲು.
‘ಶಕ್ತಿ’ ಚಿತ್ರದ ಗತಿಯೇ ‘ಗೌಡ್ತಿ’ ಚಿತ್ರಕ್ಕೂ ಬಂದಿದೆ. ವಿಜಯಶಾಂತಿ ಜೊತೆ ಪ್ರಭುದೇವ ಈ ಚಿತ್ರದಲ್ಲಿದ್ದು, ಬಿಡುಗಡೆಯ ಭಾಗ್ಯಕ್ಕಾಗಿ ಕಾಯುತ್ತಿದೆ.
ತೆಲುಗು ಚಿತ್ರರಂಗದಲ್ಲಿ ನಾಯಕರಿಗಿಂತಲೂ ಹೆಚ್ಚು ಜನಪ್ರಿಯತೆ ಗಳಿಸಿದ್ದ ವಿಜಯಶಾಂತಿ, ದಕ್ಷಿಣ ಭಾರತದಲ್ಲಿ ಸಂಚಲನವನ್ನೇ ಸೃಷ್ಟಿಸಿದ್ದರು. ಆದರೆ ಸದ್ಯದ ಅವರ ತಾರಾ ಜೀವನದಲ್ಲಿನ ಏರಿಳಿತಕ್ಕೆ ಕಾರಣ ಅವರ ನಿರಾಸಕ್ತಿಯೇ? ಅಥವಾ ರಾಜಕೀಯದಲ್ಲಿ ಕವಲುದಾರಿಯಲ್ಲಿರುವುದೇ ಎಂಬುದನ್ನು ಸ್ವತಃ ವಿಜಯಶಾಂತಿ ಅವರೇ ಹೇಳಬೇಕು.
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications