ಮದುವೆಯೆಂದರೆ ಮೂಗು ಮುರಿವ ಸಿಮ್ಮಿಣಿ !
*ದಟ್ಸ್ಕನ್ನಡ ಬ್ಯೂರೊ
ದೆಹಲಿಯ ದೀಪಕ್ ಬೊಗ್ಗಾ ಜೊತೆ ಮೇ ತಿಂಗಳ ಕೊನೇ ವಾರದಲ್ಲಿ ಸಿಮ್ರಾನ್ ನಿಶ್ಚಿತಾರ್ಥ ಮಾಡಿಕೊಂಡಿರುವುದು ಮಾಧ್ಯಮಗಳಲ್ಲಿ ಸ್ಪೈಸೀ ಸುದ್ದಿಯಾಗಿತ್ತು. ದೀಪಕ್ ಜೊತೆ ಸಿಮ್ರಾನ್ ಮದುವೆಯಾಗುತ್ತಿದ್ದಾರೆ ಎನ್ನುವುದಕ್ಕಿಂತ ಸಿಮ್ರಾನ್ ಕಮಲಹಾಸನ್ಗೆ ಕೈ ಕೊಟ್ಟರು ಎನ್ನುವುದೇ ಹೆಚ್ಚು ರೋಚಕವಾಗಿತ್ತು.
ಆದರೆ ಈಗ ಸಿಮ್ರಾನ್ಗೀಗ ಮಾಧ್ಯಮಗಳ ಮೇಲೆ ಸಿಟ್ಟು ಬಂದಿದೆ! ಲೋಕಲ್ ಪತ್ರಕರ್ತರದೇ ಎಲ್ಲ ಪಿತೂರಿ. ಈ ಮಂದಿ ನನ್ನನ್ನು ನಿಯಮಿತವಾಗಿ ಒಬ್ಬೊಬ್ಬರಿಗೆ ಗಂಟು ಹಾಕುತ್ತಲೇ ಬಂದಿದ್ದಾರೆ ಎನ್ನುವುದು ಸಿಮ್ರಾನ್ ಆಕ್ರೋಶ.
ಮೇ ತಿಂಗಳಂತ್ಯದಲ್ಲಿ ನಡೆದ ನಿಶ್ಚಿತಾರ್ಥ ಸುದ್ದಿಯನ್ನು ಸುದ್ದಿಗೋಷ್ಠಿಯಾಂದರಲ್ಲಿ ಸಿಮ್ರಾನ್ ಒಪ್ಪಿಕೊಂಡಿದ್ದರು. ಆದರೆ ಅದು ದೆಹಲಿಯಲ್ಲಿ. ಈಗ ಚೆನ್ನೈನಲ್ಲಿ ಸಿಮ್ರಾನ್ ಮಾತನಾಡುವುದು ಪಕ್ಕಾ ಕೆರಿಯರ್ ಬಗ್ಗೆ. ನಂಗೆ ಯಾವಾಗಲೂ ಕೆರಿಯರ್ ಮುಖ್ಯ. ಅದರ ನಡುವೆ ಈ ಮದುವೆಯಲ್ಲೆಲ್ಲಾ ನಂಗೆ ಇಂಟರೆಸ್ಟ್ ಇಲ್ಲ ಎಂದು ಭುಜ ಹಾರಿಸುತ್ತಾ ಸಿಮ್ರಾನ್ ನುಡಿಯುತ್ತಿದ್ದಾರೆ. ದೀಪಕ್ ಜೊತೆ ನಿಶ್ಚಿತಾರ್ಥವೇನೋ ಆಗಿರಬಹುದು. ಆದರೆ ಮದುವೆಯಾಗುತ್ತಿದ್ದೇನೆ ಅಂತ ಈ ಪತ್ರಕರ್ತರು ಯಾಕೆ ಸುದ್ದಿ ಮಾಡಬೇಕು ? ನಾನೇನೂ ಈಗಲೇ ಮದುವೆಯಾಗಲು ಇಚ್ಛಿಸುವುದಿಲ್ಲ. ಕೈಗೆತ್ತಿಕೊಂಡಿರುವ ಚಿತ್ರವನ್ನು ಮುಗಿಸಬೇಕಾಗಿದೆ. ಅಷ್ಟೇ ಅಲ್ಲ, ಮಣಿರತ್ನಮ್, ಎಸ್. ಜೆ. ಸೂರ್ಯ, ಕೆ. ಬಾಲಚಂದರ್ ಸಿನೆಮಾಗಳಲ್ಲಿ ನಟಿಸುವ ಅವಕಾಶ ಬಂದೊದಗಿದೆ. ಅದನ್ನೆಲ್ಲಾ ಬಿಟ್ಟು ಮದುವೆಯಾಗುತ್ತೇನಾ? ಎಂದು ಪ್ರಶ್ನಿಸುತ್ತಾರೆ.
ಇದು ತನ್ನ ಮಾರ್ಕೆಟ್ ಉಳಿಸಿಕೊಳ್ಳಲು ಸಿಮ್ರಾನ್ ಮಾಡುತ್ತಿರುವ ಸರ್ಕಸ್ ಇರಬಹುದು. ಅಥವಾ ಕರಿಷ್ಮಾ- ಅಭಿಷೇಕ್ ಥರವೇ ಸಿಮ್ರಾನ್- ದೀಪಕ್ ಮದುವೆ ಪ್ರಸ್ತಾಪವೂ ಮುರಿದು ಬೀಳಬಹುದು. ಅದೂ ಆಗಿಲ್ಲವೆಂದರೆ ಕಮಲಹಾಸನ್ ಗತಿಯೇ ದೀಪಕ್ಗೆ ಆಗಬಹುದು.... ಹೀಗೆ ಸಿಮ್ರಾನ್ ಮುಂದಿನ ಹೆಜ್ಜೆಗಳ ಸಾಧ್ಯತೆಯ ಬಗ್ಗೆ ಸಿನಿಮಾ ವಲಯದ ಹಶ್ಹಶ್ ಸುದ್ದಿಗಳೋ ಸುದ್ದಿಗಳು !
ಜೂನ್ 20ರಂದು ಸಿಮ್ರಾನ್ ನಟಿಸಿದ ಬಹುನಿರೀಕ್ಷೆಯ ಕೋವಿಲ್ಪಟ್ಟಿ ವೀರಲಕ್ಷ್ಮಿ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ತನ್ನ ಅಭಿನಯಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಬರಬಹುದು ಎಂಬುದು ಸಿಮ್ರಾನ್ ನಿರೀಕ್ಷೆ. ಎನಿವೇ, ಗುಡ್ಲಕ್ ಸಿಮ್ರಾನ್ !
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications