ಪ್ರಶಸ್ತಿಗೆ ಯೋಗ್ಯತೆಯೇ ಬೇಕಿಲ್ಲ... ಯೋಗವಿದ್ದರೂ ಸಾಕು -ವಿಷ್ಣು
ಪ್ರಶಸ್ತಿ ಬರಲು ಯೋಗ್ಯತೆ ಇರಲೇ ಬೇಕು ಎನ್ನುವಂತಿಲ್ಲ. ಕೆಲವರಿಗೆ ಯೋಗದಿಂದಲೂ ಬರುತ್ತದೆ. ಕೆಲವರ ಸಾಧನೆಯನ್ನು ಅನುಸರಿಸುವ ಪ್ರಯತ್ನ ನನ್ನದು. ಈ ಪ್ರಶಸ್ತಿಯನ್ನು ನಾನು ಚಿತ್ರೋದ್ಯಮದ ಮಂದಿಗೆ ಅರ್ಪಿಸುತ್ತಿದ್ದೇನೆ ಎಂದು ನಟ ವಿಷ್ಣುವರ್ಧನ್ ಹೇಳಿದರು.
ಅಂತಾರಾಷ್ಟ್ರೀಯ ಚಲನಚಿತ್ರ ಸಪ್ತಾಹದ ಅಂಗವಾಗಿ ನಗರದ ಪಲ್ಲವಿ ಚಿತ್ರಮಂದಿರದಲ್ಲಿ ನಡೆದ ಸಮಾರಂಭದಲ್ಲಿ, ತಮ್ಮ ಜೀವಿತಾವಧಿಯ ಸಾಧನೆಗೆ ಸಂದ ಪ್ರಶಸ್ತಿ ಸ್ವೀಕರಿಸಿ, ಅವರು ಭಾವುಕರಾಗಿ ಮಾತನಾಡುತ್ತಿದ್ದರು. ಚಿತ್ರ ಸಪ್ತಾಹ ಬೆಂಗಳೂರಿನಲ್ಲಿ ನಡೆಯುತ್ತಿರುವುದು ಸಂತಸದ ವಿಚಾರ. ಇತರೆ ದೇಶಗಳ ಸಂಸ್ಕೃತಿ, ಭಾಷೆ ಮತ್ತು ಜನಜೀವನ ಅರಿಯಲು ಸಪ್ತಾಹ ಸಹಕಾರಿ ಎಂದರು.
ಸಂಸದ ಅಂಬರೀಷ್ ಸಪ್ತಾಹಕ್ಕೆ ಚಾಲನೆ ನೀಡಿದರು. ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ಸಿ. ಎನ್. ಚಂದ್ರಶೇಖರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಚ್.ಡಿ. ಗಂಗರಾಜು ಮತ್ತಿತರರು ಸಮಾರಂಭದಲ್ಲಿ ಹಾಜರಿದ್ದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಸುಚಿತ್ರ ಫಿಲ್ಮ್ ಸೊಸೈಟಿ, ಆಲಿಯನ್ಸ್ ಫ್ರಾನ್ಸೈಸ್ ಸಹಭಾಗಿತ್ವದಲ್ಲಿ ಫೋರಂ ಫಿಲ್ಮ್ಸ್ ಈ ಚಿತ್ರ ಸಪ್ತಾಹವನ್ನು ಆಯೋಜಿಸಿದೆ.
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications