ನಾಗತಿಹಳ್ಳಿ ಚಿತ್ರದಲ್ಲಿ ಗೃಹ ಸಚಿವ ಎಂ.ಪಿ.ಪ್ರಕಾಶ್
ರಂಗಭೂಮಿ, ಕಲೆ, ಸಾಹಿತ್ಯ ಮತ್ತಿತರ ಕ್ಷೇತ್ರಗಳಲ್ಲಿ ಅಭಿರುಚಿ ಹೊಂದಿರುವ ರಾಜ್ಯ ಗೃಹ ಸಚಿವ ಎಂ.ಪಿ.ಪ್ರಕಾಶ್, ಸತತ ಹದಿನೈದು ವರ್ಷಗಳ ನಂತರ ಬೆಳ್ಳಿತೆರೆಗಾಗಿ ಬಣ್ಣ ಹಚ್ಚಲಿದ್ದಾರೆ.
ಈ ಹಿಂದೆ ‘ಅವಸ್ಥೆ’ ಚಿತ್ರದಲ್ಲಿ ರಾಜಕಾರಣಿ ಪಾತ್ರದಲ್ಲಿ ಪ್ರಕಾಶ್ ಅಭಿನಯಿಸಿದ್ದರು. ‘ಮಾತಾಡ್ ಮಾತಾಡ್ ಮಲ್ಲಿಗೆ’ ಚಿತ್ರದಲ್ಲಿ ಎಂ.ಪಿ.ಪ್ರಕಾಶ್ ಅತಿಥಿ ಪಾತ್ರದಲ್ಲಿ ನಟಿಸಲು ಒಪ್ಪಿದ್ದಾರೆ. ಅವರಿಗೆ ತಕ್ಕದಾದ ಪಾತ್ರವನ್ನು ಚಿತ್ರದಲ್ಲಿ ಸೃಷ್ಟಿಮಾಡುವುದಾಗಿ ಚಿತ್ರದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಸುದ್ದಿಗಾರರಿಗೆ ತಿಳಿಸಿದ್ದಾರೆ.
‘ಅಮೃತಧಾರೆ’ ನಂತರ ನಾಗತಿಹಳ್ಳಿ‘ಮಾತಾಡ್ ಮಾತಾಡ್ ಮಲ್ಲಿಗೆ’ ಚಿತ್ರವನ್ನು ಆರಂಭಿಸಿದ್ದಾರೆ. ರೈತ ಮತ್ತು ಜಾಗತೀಕರಣದ ವಿವಿಧ ಮಗ್ಗಲುಗಳು ಚಿತ್ರದಲ್ಲಿ ಪ್ರತಿಧ್ವನಿಸಲಿವೆ. ಈ ಚಿತ್ರದ ಮುಹೂರ್ತ ಸಮಾರಂಭ, ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಸಮೀಪದ ಜಾಸ್ಮಿನ್ ಗಾರ್ಡ್ನ್(ಪಿಂಜಾರ ಹೆಗ್ಗನಾಳು)ನಲ್ಲಿ ನೆರವೇರಿತು.
ಎಂ.ಪಿ.ಪ್ರಕಾಶ್ ಕ್ಯಾಮೆರಾ ಸ್ವಿಚ್ ಆನ್ ಮಾಡಿ, ಶುಭ ಹಾರೈಸಿದರು. ಪರಿಸರವಾದಿ ದೇವೇಂದ್ರ ಶರ್ಮ ಕ್ಲಾಪ್ ಮಾಡಿದರು. ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ , ಕತೆಗಾರ ಕುಂ. ವೀರಭದ್ರಪ್ಪ, ಅಂಕಣಕಾರ ಬಿ. ಚಂದ್ರೇಗೌಡ, ಭಾರತಿ ವಿಷ್ಣುವರ್ಧನ್, ಪ್ರೇಮನಾಥ್ ಮತ್ತಿತರರು ಉಪಸ್ಥಿತರಿದ್ದರು.
ಜಾಸ್ಮಿನ್ ಗಾರ್ಡನ್ನಲ್ಲಿ ಹಾಡಿನ ದೃಶ್ಯವನ್ನು ಈ ಸಂದರ್ಭದಲ್ಲಿ ಚಿತ್ರೀಕರಿಸಲಾಯಿತು. ಕೊರಿಯಾಗ್ರಾಫರ್ ಚಿನ್ನಿಪ್ರಕಾಶ್ ಮಾರ್ಗದರ್ಶನದಲ್ಲಿ ವಿಷ್ಣು-ಸುಹಾಸಿನಿ ಹಾಡಿಗೆ ಹೆಜ್ಜೆ ಹಾಕಿದರು. ಛಾಯಾಗ್ರಾಹಕ ಕೃಷ್ಣಕುಮಾರ್ ದೃಶ್ಯವನ್ನು ಸೆರೆಹಿಡಿದರು.
‘ಬಂಧನ’, ‘ಮುತ್ತಿನ ಹಾರ’ ಚಿತ್ರಗಳ ಮೂಲಕ ಪ್ರೇಕ್ಷಕರ ಮೋಡಿ ಮಾಡಿದ ವಿಷ್ಣು-ಸುಹಾಸಿನಿ ಜೋಡಿ, ಈ ಚಿತ್ರದಲ್ಲಿ ಮತ್ತೆ ಒಂದಾಗಿದೆ. ಯುಎಸ್ಎನಲ್ಲಿ ಇಂಜಿನಿಯರ್ ಆಗಿರುವ ಲೋಕೇಶ್ ವಿಜಯ ಗೋಪಾಲ, ಚಿತ್ರದಲ್ಲಿ ವಿಷ್ಣುವರ್ಧನ್ ಅಳಿಯನ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ರೈತನ ಪಾತ್ರ ನಿರ್ವಹಣೆ ಕ್ಲಿಷ್ಟಕರ ಕೆಲಸ. ರೈತನ ಪಾತ್ರಕ್ಕೆ ಜೀವ ತುಂಬಲು ಪ್ರಯತ್ನಿವುದಾಗಿ ವಿಷ್ಣುವರ್ಧನ್ ತಿಳಿಸಿದ್ದಾರೆ.
ಇದನ್ನೂ ಓದಿ :
ಡಾ. ವಿಷ್ಣುವರ್ಧನ್ಗೆ ಮೈಸೂರಿನಲ್ಲಿ ಶಸ್ತ್ರಚಿಕಿತ್ಸೆ


Click it and Unblock the Notifications