ಕನ್ನಡ ಚಿತ್ರರಂಗ ಈಗ ಪ್ರಕಾಶಿಸುತ್ತಿದೆ!
ಸ್ಯಾಂಡಲ್ವುಡ್ನಲ್ಲಿ ಏಳೇ ದಿನದಲ್ಲಿ 11 ಚಿತ್ರಗಳು ಸೆಟ್ಟೇರಿವೆ! ಈ ಬೆಳವಣಿಗೆ ಏನನ್ನು ತೋರಿಸುತ್ತದೆ?
- ಪುಷ್ಪಪಾದ
ಹಿಂದೆ ರಾಮುರನ್ನು ಕೋಟಿ ನಿರ್ಮಾಪಕ ಎಂದು ಅಚ್ಚರಿಯಿಂದ, ಹೆಮ್ಮೆಯಿಂದ ಗಾಂಧಿನಗರ ಕರೆದು ಸಂಭ್ರಮಿಸಿತ್ತು. ಆದರೆ ಈಗ ಕೋಟಿ ನಿರ್ಮಾಪಕರ ಸಂಖ್ಯೆ ಬೆಳೆಯುತ್ತಿದೆ. ದುಡ್ಡು ಹಾಕಿ, ವಾಪಸ್ಸು ಪಡೆದವರು ಮತ್ತೆಮತ್ತೆ ದುಡ್ಡು ಹಾಕುತ್ತಿದ್ದಾರೆ. ಕಳೆದುಕೊಂಡವರು, ಯೋಚಿಸುತ್ತಿದ್ದಾರೆ.
ಮೇಲಿನ ಎಲ್ಲಾ ಬೆಳವಣಿಗೆಗಳ ಪರಿಣಾಮ, ಐಟಿ ಸಿಟಿ ಬೆಂಗಳೂರು ಸಿನಿಮಾ ನಿರ್ಮಾಣದಲ್ಲೂ ಹಿಂದೆ ಬಿದ್ದಿಲ್ಲ. ಇತ್ತೀಚಿನ ದಿನಗಳಲ್ಲಂತೂ ಚಿತ್ರ ನಿರ್ಮಾಣ ಕ್ಷೇತ್ರ ವಿಸ್ತಾರಗೊಳ್ಳುತ್ತಿದೆ.
ಜೂನ್ ಕಡೆಯ ವಾರದ ಅಂಕಿಅಂಶಗಳು ವಿವರಿಸುವಂತೆ ಕೇವಲ ಏಳೇ ದಿನದಲ್ಲಿ 11 ಚಿತ್ರಗಳು ಸೆಟ್ಟೇರಿವೆ. ಹೊಸ ನಿರ್ಮಾಪಕರು ಹೆಚ್ಚುತ್ತಿದ್ದಾರೆ. ಈ ಚಿತ್ರಗಳ ಪೈಕಿ ಹತ್ತರಲ್ಲಿ, ಹೊಸಬರೇ ಇದ್ದಾರೆ! ದರ್ಶನ್, ಶಿವರಾಜ್, ಸುದೀಪ್ರಂತಹ ಹಳೆ ನಟರನ್ನು ನಿರ್ಮಾಪಕರು ನಂಬುತ್ತಿಲ್ಲ. ಎಲ್ಲರಿಗೂ ಹೊಸ ಹುಡುಗರ ಮೇಲೆ ಕಣ್ಣು. ನಮಗೊಬ್ಬ ಗಣೇಶ್ ಅಥವಾ ವಿಜಯ್ ಸಿಗಲಿ, ಮುಂಗಾರು ಮಳೆ ಅಥವಾ ದುನಿಯಾದಂತೆ ಹೆಸರು ಮತ್ತು ದುಡ್ಡು ಹರಿದು ಬರಲಿ ಎಂಬುದು ಹೊಸ ನಿರ್ಮಾಪಕರ ಲೆಕ್ಕಾಚಾರ.
ಯೋಗರಾಜ ಭಟ್ ನಿರ್ದೇಶನದ ಗಾಳಿ ಪಟ ಚಿತ್ರದ ಬಜೆಟ್, ಸುಮಾರು 6ಕೋಟಿ. ಈಗ ಮಾಮೂಲಿ ಚಿತ್ರಗಳ ಬಜೆಟ್ ತಲಾ ಒಂದೊಂದು ಕೋಟಿಯನ್ನು ಮೀರುತ್ತಿವೆ. ಚಿತ್ರ ನಿರ್ಮಾಣಕ್ಕಿಂತ, ಸಂಭಾವನೆ, ಜಾಹೀರಾತು, ಪ್ರಚಾರಕ್ಕಾಗಿಯೇ ಹಣ ನೀರಿನಂತೆ ಖರ್ಚಾಗುತ್ತಿದೆ. ಕಳೆದ ತಿಂಗಳ ಕಡೆಯಲ್ಲಿಯೇ ಸುಮಾರು 20 ಪ್ಲಸ್ ಕೋಟಿ ರೂ.ಗಳನ್ನು ಚಿತ್ರಗಳ ಮೇಲೆ ಹೂಡಲಾಗಿದೆ.
ಇತ್ತೀಚೆಗೆ ಸೆಟ್ಟೇರಿದ ಚಿತ್ರಗಳ ಹೆಸರುಗಳು : ಯುಗ ಯುಗಗಳೇ ಸಾಗಲಿ, ಬಾ ಬೇಗ ಚಂದಮಾಮ, ರಾಜಕುಮಾರಿ, ಪ್ರೊಡಕ್ಷನ್ ನಂ.1, ರೈಟ್ ಆದ್ರೇ, ಹೃದಯ ಐ ಮಿಸ್ ಯೂ, ಆಯೋಗ್ಯ, ಗಾಳಿ ಪಟ, ಲೋಕವೇ ಹೇಳಿದ ಮಾತಿತು, ನೀನ್ಯಾರೆ?


Click it and Unblock the Notifications