‘ಅಪ್ಪು’ ಸಂಭ್ರಮ : ವೇದಿಕೆಯಲ್ಲಿ ರಾಜ್- ರಜನೀ ಧನ್ಯಮಿಲನ
ಅಣ್ಣಾವ್ರು ಕೊನೆಗೂ ವೇದಿಕೆಯೇರಿದ್ದಾರೆ. ಅವರ ಜೊತೇಲಿ ಸಂತೋಷ ಹಂಚಿಕೊಳ್ಳೋಕೆ ಸೂಪರ್ ಸ್ಟಾರ್ ರಜನಿಕಾಂತ್ ಇದ್ದಾರೆ !
ವೀರಪ್ಪನ್ ಕಪಿಮುಷ್ಟಿಯಿಂದ ಪಾರಾಗಿ ಬಂದಾಗಿನಿಂದ ಉಲ್ಬಣಿಸಿದ ಮಂಡಿ ನೋವು, ಅಪ್ಪಳಿಸುತ್ತಿದ್ದ ತಗಾದೆಗಳು ರಾಜ್ಕುಮಾರ್ ಅವರನ್ನು ಸುದ್ದಿಯಲ್ಲಿಟ್ಟವೇ ಹೊರತು ವೇದಿಕೆಗೆ ಬಂದು ರಾಜ್ ಹಾಡಿ, ಕುಣಿದದ್ದೇ ಇಲ್ಲ. ಏಪ್ರಿಲ್ನಲ್ಲಿ ನಡೆದ ಅವರ ಹುಟ್ಟು ಹಬ್ಬ ಸಮಾರಂಭದಲ್ಲಿ ಮಾತ್ರ ಅಭಿಮಾನಿಗಳನ್ನು ರಾಜ್ ನಿರಾಸೆಗೊಳಿಸಿರಲಿಲ್ಲ. ಅದು ಬಿಟ್ಟರೆ, ಅಪ್ಪು ಕೆಸೆಟ್ ಬಿಡುಗಡೆ ಸಮಾರಂಭಕ್ಕಾಗಲೀ, ಚಿತ್ರೋದ್ಯಮ ಕೂತ ಧರಣಿಗಾಗಲೀ ರಾಜ್ ಮನೆ ಹೊಸಿಲು ದಾಟಿ ಬರಲೇ ಇಲ್ಲ.
ಸಾರ್ವಜನಿಕ ಸಮಾರಂಭಗಳಿಗೂ ಅಣ್ಣಾವ್ರಿಗೂ ನಂಟು ಮುಗಿದೇ ಹೋಯಿತಾ? ಎಂದು ಅಭಿಮಾನಿ ದೇವರುಗಳು ್ಫಮಾತನಾಡಿಕೊಳ್ಳುತ್ತಿರುವ ಹೊತ್ತಿನಲ್ಲೇ ರಾಜ್ ಮತ್ತೆ ವೇದಿಕೆ ಹತ್ತಿದ್ದಾರೆ. ಮೂರನೇ ಹಾಗೂ ಕೊನೆಯ ಮಗ ಪುನೀತ್ ಯಶಸ್ಸಿನ ಸಂಭ್ರಮದಲ್ಲಿ ಭಾಗಿಯಾಗಲು ಈಗ ಮನಸ್ಸು ಮಾಡಿದ್ದಾರೆ. ಆಗಸ್ಟ್ 10ರ ಶನಿವಾರ ರಾಜ್ ಅಭಿಮಾನಿಗಳ ಪಾಲಿಗೆ ಕುಣಿದು ಕುಪ್ಪಳಿಸುವ ದಿನ. ಅದು ಅಪ್ಪು - 100ರ ಸಂಭ್ರಮ. ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಜನವೋ ಜನ.
ಅದಿರಲಿ, ಸೂಪರ್ ಸ್ಟಾರ್ ರಜನಿಕಾಂತು ಬಂದದ್ಯಾಕೆ ?
ರಾಜ್ಕುಮಾರ್ ಹುಟ್ಟುಹಬ್ಬದಲ್ಲೂ ಈತ ಕಾಣಿಸಿಕೊಳ್ಳಲಿಲ್ಲ. ಎಚ್ಟುಓ ಸಿನಿಮಾದಲ್ಲಿ ತಮಿಳು ಸಂಭಾಷಣೆ ಇದ್ದ ಕಾರಣಕ್ಕೆ ಶುರುವಾದ ಗಲಾಟೆಯನ್ನು ತಣ್ಣಗಾಗಿಸಲೂ ಬರಲಿಲ್ಲ. ಈಗ ಅಪ್ಪು ಶತ ದಿನೋತ್ಸವದ ಸಂಭ್ರಮಕ್ಕೆ ರಜನಿಕಾಂತ್ ಪಾದ ಬೆಂಗಳೂರಿನವರೆಗೆ ಬೆಳೆದದ್ದು ಏಕೆ?
ಬಲ್ಲವರು ಹೇಳುವಂತೆ ಇದು ರಜನಿಯ ಮಹತ್ವಾಕಾಂಕ್ಷೆಯ ಲೇಟೆಸ್ಟ್ ತಮಿಳು ಚಿತ್ರ 'ಬಾಬಾ" ಪ್ರಚಾರದ ವೇದಿಕೆಯೂ ಹೌದು, ಅದಕ್ಕೇ ಅವರು 'ಅಪ್ಪು" ಸಂಭ್ರಮದಲ್ಲಿ ಭಾಗಿಯಾಗಿರೋದು. ಆಗಸ್ಟ್ 15ಕ್ಕೆ ಬಾಬಾ ಚಿತ್ರ ಬಿಡುಗಡೆಯಾಗುತ್ತಿದ್ದು, ಇದರ ಆಜೂಬಾಜಿಗೆ ಪೋಟಿ ಕೊಡಬಲ್ಲ ತಾಕತ್ತು ಯಾವ ಕನ್ನಡ ಚಿತ್ರಗಳಿಗೂ ಇಲ್ಲವೆಂಬ ಮಟ್ಟಿನ ಹೈಪು ಗಾಂಧಿನಗರದ ಓಣಿಗಳಲ್ಲಿದೆ.
ಅದೇನೇ ಇರಲಿ, ವರನಟ- ಸೂಪರ್ ಸ್ಟಾರ್ ಒಂದಾಗಿ ಸೇರಿರುವ ಘಳಿಗೆಯೇ ಕಣ್ಣಿಗೆ ಕಟ್ಟುವಂಥಾದ್ದು. ಅಲ್ಲವೇ?


Click it and Unblock the Notifications