ವಿಜಯಶಾಂತಿ ಬಸುರಿ ಅಂತ ತಿಳಿಯಬೇಡಿ.
ಈಗ ವಿಜಯಶಾಂತಿ ಮುಂದೆ ಅಮ್ಮನಾಗಿ ನಟಿಸಬೇಕೆಂಬ ಆಫರನ್ನು ತೆಲುಗು ನಿರ್ದೇಶಕ ತೇಜ ಇಟ್ಟಿದ್ದಾರೆ. ಕನ್ನಡತಿ ರಕ್ಷಿತಾ ನಾಯಕಿಯಾಗಿರುವ ಈ ಚಿತ್ರದಲ್ಲಿ ಅಮ್ಮನ ಪಾತ್ರಕ್ಕೆ ತೂಕವಿದೆ. ಆದರೆ, ಇವತ್ತಿಗೂ ನಾಯಕಿಯಾಗಿ ಮೂರು ಚಿತ್ರಗಳನ್ನು ಕೈಲಿಟ್ಟುಕೊಂಡಿರುವ ವಿಜಯಶಾಂತಿ, ಪಾತ್ರ ಒಪ್ಪಿಕೊಳ್ಳುವ ವಿಷಯದಲ್ಲಿ ಗಹನವಾಗಿ ಯೋಚಿಸುತ್ತಿದ್ದಾರೆ.
ಅಮ್ಮನಿಗೂ ಈ ಪರಿಯ ಡಿಮ್ಯಾಂಡೇ !
ಅಮ್ಮನ ಪಾತ್ರ ಮುಂದೆ ಬಂದಾಗ ತೇಜಾಗೆ ಮೊದಲು ಹೊಳೆದದ್ದು ಶ್ರೀದೇವಿ ಹೆಸರು. ಆದರೆ, ಶ್ರೀದೇವಿ ಆಫರನ್ನು ಏಕಾಏಕಿ ನಿರಾಕರಿಸಿಬಿಟ್ಟರು. ಬಾಲಿವುಡ್ನ ಎವರ್ಗ್ರೀನ್ ಮಿನುಗುತಾರೆ ರೇಖಾ ಒಪ್ಪಿಗೆಯೇನೋ ಕೊಟ್ಟರು. ಕೇಳಿದ ಸಂಭಾವನೆ ಮಾತ್ರ ಒಂದೇ ಕೋಟಿ ರುಪಾಯಿ ! ಅದಕ್ಕೇ ತೇಜ ವಿಜಯಶಾಂತಿ ಮನೆಯ ಕದ ತಟ್ಟಿದ್ದು.
ಪಾತ್ರ ಒಪ್ಪಿಕೊಳ್ಳುವ ವಿಷಯದಲ್ಲಿ ವಿಜಯಶಾಂತಿ ಇನ್ನೂ ಅಂತಿಮ ನಿರ್ಣಯ ಕೈಗೊಂಡಿಲ್ಲ. ಒಪ್ಪಿಕೊಂಡರೆ, ಮಹೇಶ್ ಬಾಬು ಅಮ್ಮನಾಗಿ ಅವರು ತೆರೆಗೆ ಬರಲಿದ್ದಾರೆ.
ಈಗಾಗಲೇ ಜೂನಿಯರ್ ಎಂಟಿಆರ್ ಅಮ್ಮನಾಗಿ ನಗ್ಮಾ ನಟಿಸಿ, ನಾಯಕಿಯಾಗಿ ನಿವೃತ್ತರಾಗಿರುವ ಜ್ವಲಂತ ಉದಾಹರಣೆಯಿದೆ. ಇನ್ನೂ ಆ್ಯಕ್ಷನ್ ನಾಯಕಿಯಾಗಿ ಎಗರುವ ತಾಕತ್ತಿರುವ ವಿಜಯಶಾಂತಿ ಅಮ್ಮ ಆಗೋದು ಸರಿಯಾ? ಹಾಗಂತ ಖುದ್ದು ವಿಜಯಶಾಂತಿ ಅವರನ್ನು ಕೇಳಿದರೆ, 'ಪಾತ್ರ ಚೆನ್ನಾಗಿದ್ದರೆ ಅದು ಯಾವುದಾದರೂ ನಟಿಸುವುದರಲ್ಲಿ ತಪ್ಪೇನಿಲ್ಲ" ಅಂತಾರೆ.
ನಾಯಕಿಯರಿಗಾದರೆ ಬಲು ಬೇಗ ಅಮ್ಮನ ಪಾತ್ರಗಳು ಹುಡುಕಿಕೊಂಡು ಬರುತ್ತವೆ. ನಾಯಕರ ಮಾರುಕಟ್ಟೆಯ ಅವಧಿ ಯಾವತ್ತೂ ಹೆಚ್ಚಾಗಿರುತ್ತದೆ. ಇದಕ್ಕೆ ನೀವೇನಂತೀರಿ?


Click it and Unblock the Notifications