ಭ್ರಷ್ಟಾಚಾರದ ವಿರುದ್ಧ ಮಾಲಾಶ್ರೀ 'ಶಕ್ತಿ' ಪ್ರದರ್ಶನ
'ಮುತ್ತಿನಂಥ ಹೆಂಡತಿ' ಚಿತ್ರ ಸೇರಿದಂತೆ ಎರಡು ವರ್ಷಗಳ ಹಿಂದೆ ತೆರೆ ಕಂಡ 'ಕಿರಣ್ಬೇಡಿ'ವರೆಗೂ ರಾಮು ಎಂಟರ್ ಪ್ರೈಸಸ್ನ ಎಂಟು ಚಿತ್ರಗಳಲ್ಲಿ ಮಾಲಾಶ್ರೀ ಅಭಿನಯಿಸಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಸಿಡಿದೇಳುವ 'ಶಕ್ತಿ'ಯಾಗಿ ಈಗ ಮಾಲಾಶ್ರೀ ಅಭಿನಯಿಸುತ್ತಿದ್ದಾರೆ. ಚಿತ್ರೀಕರಣಕ್ಕೂ ಮುನ್ನ ಮಾಲಾಶ್ರೀ ಅವರು ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿದ್ದಾರೆ.
ರಾಮು ಎಂಟರ್ ಪ್ರೈಸಸ್ನ ಮೂವತ್ತೆರಡನೇ ಕಾಣಿಕೆ 'ಶಕ್ತಿ' ಚಿತ್ರದಲ್ಲಿ ಮಾಲಾಶ್ರೀ ಅಭಿನಯಿಸುತ್ತಿದ್ದಾರೆ. ಆಷಾಢಕ್ಕೆ ಮೊದಲು ಸರಳ ಪೂಜಾ ಸಮಾರಂಭ ಆಚರಿಸಿಕೊಂಡಿರುವ ಈ ಚಿತ್ರಕ್ಕೆ ಇದೇ ತಿಂಗಳ ಹದಿನೆಂಟರಿಂದ ಚಿತ್ರೀಕರಣ ಆರಂಭವಾಗಲಿದೆ.
ಸಾಕಷ್ಟು ಯಶಸ್ವಿ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿರುವ ರಾಮು ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. 'ಶಕ್ತಿ' ಕೂಡ ನೋಡುಗರ ಮನ ಗೆಲ್ಲಲಿದೆ ಎಂಬ ಅಭಿಪ್ರಾಯ ರಾಮು ಅವರದು.'ಒರಟ ಐ ಲವ್ ಯು' ಚಿತ್ರಕ್ಕೆ ಸಂಭಾಷಣೆ ಬರೆಯುವುದರೊಂದಿಗೆ ಸಿನಿಮಾ ರಂಗ ಪ್ರವೇಶಿಸಿದ ಅನಿಲ್ ಇತ್ತೀಚೆಗೆ ಬಿಡುಗಡೆಯಾದ 'ಕೆಂಪೇಗೌಡ' ಚಿತ್ರಕ್ಕೂ ಸಂಭಾಷಣೆ ಬರೆದಿದ್ದಾರೆ.
ಸಂಭಾಷಣಾಗಾರರಾಗಿದ್ದ ಅನಿಲ್ ಈ ಚಿತ್ರವನ್ನು ನಿರ್ದೇಶಿಸುವ ಮೂಲಕ ನಿರ್ದೇಶಕನ ಸ್ಥಾನ ಅಲಂಕರಿಸಿದ್ದಾರೆ. 'ಶಕ್ತಿಗೆ ಚಿತ್ರಕಥೆ ಹಾಗೂ ಸಂಭಾಷಣೆ ಕೂಡ ಅನಿಲ್ ಅವರದ್ದೆ.ಸಾಹಸ ಪ್ರಧಾನ ಈ ಚಿತ್ರದ ಚಿತ್ರೀಕರಣ ಬೆಂಗಳೂರು ಹಾಗೂ ಮೈಸೂರಿನಲ್ಲಿ ಎಪ್ಪತ್ತು ದಿನಗಳ ಕಾಲ ಒಂದೇ ಹಂತದಲ್ಲಿ ನಡೆಯಲಿದೆ. ಥ್ರಿಲ್ಲರ್ಮಂಜು, ರವಿವರ್ಮ, ರಾಮ್ಲಕ್ಷ್ಮಣ್ ಮತ್ತು ಪಳನಿರಾಜ್ ಈ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಲಿದ್ದಾರೆ.
ಸುಧಾಕರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಲಕ್ಷ್ಮಣ್ ರೆಡ್ಡಿ ಅವರ ಸಂಕಲನವಿದೆ. ಮಾಲಾಶ್ರೀ, ರವಿಶಂಕರ್, ಶಯಾಜಿರಾವ್ ಶಿಂಧೆ, ವಿನಯಾಪ್ರಸಾದ್, ಆಶಾಲತಾ, ಅವಿನಾಶ್, ಶರತ್ ಲೋಹಿತಾಶ್ವಾ, ಸಾಧುಕೋಕಿಲಾ, ಕುರಿಗಳು ಪ್ರತಾಪ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. (ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications











