ಮತ್ತೆ ದರ್ಶನ್ ಜೊತೆಯಾದ ಪೊರ್ಕಿ ಪ್ರಣೀತಾ!

ಗೀತಸಾಹಿತಿ ರಾಮ್ ನಾರಾಯಣ್ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ 'ಸ್ನೇಹಿತರು' ಚಿತ್ರಕ್ಕೆ ಮೊದಲು ಕೇಳಿಬಂದ ಹೆಸರು ರಮ್ಯಾ ಅಥವಾ ತ್ರಿಶಾ. ಆದರೆ ಡೇಟ್ಸ್ ಸಮಸ್ಯೆಯಿಂದಾಗಿ ಅದು ಪ್ರಣೀತಾ ಕೈಸೇರಿದೆ. ಈ ಚಿತ್ರದಲ್ಲಿ ಐದು ಜನ ಹೀರೋಗಳು. ಅವರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದ ಪ್ರಮುಖ ಆಕರ್ಷಣೆ. ಅವರದು ಅತಿ ಪ್ರಮುಖ ಅತಿಥಿ ಪಾತ್ರವಂತೆ.
ಉಳಿದಂತೆ ವಿಜಯ ರಾಘವೆಂದ್ರ, ತರುಣ್, ಸೃಜನ್ ಲೋಕೇಶ್ ಹಾಗೂ ರವಿಶಂಕರ್ (ಪಯಣ), ಹೀರೋಗಳು. ಈ ಸ್ಟಾರ್ ಮತ್ತು ಮಲ್ಟಿ ಹೀರೋಗಳ ಚಿತ್ರಗಳನ್ನು ನಿರ್ಮಿಸುತ್ತಿರುವವರು ಸೌಂದರ್ಯಾ ಜಗದೀಶ್. ಈ ಮೊದಲು 'ಮಸ್ತ್ ಮಜಾ ಮಾಡಿ' ಎಂಬ ಇದೇ ಮಾದರಿಯ 'ಹಿಟ್' ಸಿನಿಮಾ ಕೊಟ್ಟಿದ್ದರು. ಈಗಾಗಲೇ 'ಅಪ್ಪು-ಪಪ್ಪು' ಮೂಲಕ ಜನರಿಗೆ ಪರಿಚಿತವಾಗಿರುವ ಅವರ ಮಗ ಮಾ| ಸ್ನೇಹಿತ್ ಕೂಡ ಇದರಲ್ಲಿರುವುದು ವಿಶೇಷ.
"ಇದೊಂದು ಗೆಳೆಯರ ನಡುವಿನ ಸ್ಟೋರಿ. ಇದಕ್ಕಾಗಿ ಸತತ ಒಂದು ವರ್ಷದಿಂದ ತಯಾರಿ ನಡೆಸಿದ್ದೇನೆ. ಈ ಚಿತ್ರಕ್ಕೆ 'ಮಹಾಭಾರತ' ಸ್ಪೂರ್ತಿ. ಕಥೆ ಹಾಗೂ ನಟರ ಮೇಲೆ ನನಗೆ ಎಲ್ಲಿಲ್ಲದ ಭರವಸೆ. ಅಗತ್ಯಗಳನ್ನು ಪೂರೈಸಲು ರೆಡಿ ಇರುವ ನಿರ್ಮಾಪಕರು ಬೆನ್ನಿಗಿದ್ದಾರೆ. ಇನ್ನೇನು ಬೇಕು? ಅಕ್ಟೋಬರ್ 20 ರಂದು ಮಹೂರ್ತ" ಎಂದಿದ್ದಾರೆ, ಈ ಚಿತ್ರದ ಮೂಲಕ 'ನಿರ್ದೇಶಕ'ರಾಗಲಿರುವ ರಾಮ್ ನಾರಾಯಣ್.


Click it and Unblock the Notifications











