ನಾಯಕ ನಟನಾಗಿ ಕಾಶೀನಾಥ್ ಪುತ್ರ ಅಲೋಕ್
ಕಿರುತೆರೆ ಧಾರಾವಾಹಿ ನಿರ್ದೇಶಕ ಶಿಡ್ಲಘಟ್ಟ ಶ್ರೀನಿವಾಸ್ ಬೆಳ್ಳಿತೆರೆ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ನಿರ್ದೇಶಕ ಎಸ್.ನಾರಾಯಣ್ ಅವರ ಸಾಕಷ್ಟು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಶ್ರೀನಿವಾಸ್ ಅವರಿಗಿದೆ. ಈಗವರು 'ಬಾಜಿ' ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಪ್ರಮುಖ ದೃಶ್ಯಗಳನ್ನು ಈಗಾಗಲೇ ಚಿತ್ರೀಕರಿಸಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಶ್ರೀನಿವಾಸ್, ಇದೊಂದು ಸಾಹಸ ಪ್ರಧಾನ ಚಿತ್ರವಾಗಿದ್ದು ಮುಂಬೈ ಸೇರಿದಂತೆ ಕರ್ನಾಟಕದ ಬಹುತೇಕ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ ಎಂದರು. ಚಿತ್ರದಲ್ಲಿ ಅಲೋಕ್ ನಾಯಕ ನಟನಾಗಿ ಕಾಣಿಸಲಿದ್ದಾರೆ. ಅಲೋಕ್ ಎಂದರೆ ಬಹಳಷ್ಟು ಮಂದಿಗೆ ಗೊತ್ತಾಗುವುದಿಲ್ಲ. ನಟ, ನಿರ್ದೇಶಕ ಕಾಶೀನಾಥ್ರ ಮಗ ಅಲೋಕ್ ಎಂದರೆ ಎಲ್ಲರಿಗೂ ಪಕ್ಕಾ ಆಗುತ್ತದೆ . 'ಬಾಜಿ' ಚಿತ್ರದ ಮೂಲಕ ಮತ್ತೊಬ್ಬ ಹೊಸ ನಟಿ ರಾಣಿ ಕನ್ನಡ ಚಿತ್ರ ಕುಟುಂಬಕ್ಕೆ ಸೇರ್ಪಡೆಯಾಗಲಿದ್ದಾರೆ. ಮೂಲತಃ ಬೆಂಗಳೂರಿನವರಾದ ರಾಣಿ ಅವರಿಗೆ ಈಗಾಗಲೇ ದಕ್ಷಿಣ ಭಾರತದಲ್ಲೇ 'ಉತ್ತಮ ನಗು ಮುಖದ ಸುಂದರಿ' ಎಂಬ ಬಿರುದನ್ನು ಪ್ರದಾನ ಮಾಡಲಾಗಿದೆ.
ಪೋಷಕ ಕಲಾವಿದರಾದ ರಂಗಾಯಣ ರಘು ಹಾಗೂ ಕಿಶೋರ್ ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಮುಂಬೈ ಡಾನ್ ಪಾತ್ರದಲ್ಲಿ ಕಿಶೋರ್ ಕಾಣಿಸಲಿದ್ದಾರೆ. ಮುಂಬೈನಿಂದ ಬೆಂಗಳೂರಿಗೆ ಬಂದು ಆಕಸ್ಮಿಕವಾಗಿ ನಾಯಕಿಯನ್ನು ಭೇಟಿಯಾಗುತ್ತಾನೆ. ಖಳನಾಯಕ ಪ್ರೇಮಪಾಶದಲ್ಲಿ ಬೀಳುತ್ತಾನೆ. ಆದರೆ ನಾಯಕಿಗೆ ಇದು ಸುತಾರಾಂ ಇಷ್ಟ ಇರುವುದಿಲ್ಲ, ಆತನಿಂದ ತಪ್ಪಿಸಿಕೊಂಡು ಮನೆಬಿಟ್ಟು ಓಡಿಹೋಗುತ್ತಾಳೆ. ನಾಯಕನನ್ನು ಸೇರಿತ್ತಾಳೆ. ಇಲ್ಲಿಂದ ಕಥೆ ಹೊಸ ತಿರುವು ಪಡೆದುಕೊಳ್ಳುತ್ತದೆ ಎನ್ನುತ್ತಾರೆ ನಿರ್ದೇಶಕರು. ಚಿತ್ರದಲ್ಲಿರುವ ಸಾಹಸ ಹಾಗೂ ರೋಮಾಂಚನಕಾರಿ ದೃಶ್ಯಗಳು ಪ್ರೇಕ್ಷಕರನ್ನು ಕುರ್ಚಿ ತುದಿಗೆ ಬಂದು ಕೂರುವಂತೆ ಮಾಡುತ್ತವೆ ಎನ್ನುತ್ತಾರೆ.
ಬಾಲಾಜಿ ಪಾತ್ರದಲ್ಲಿ ಚಿತ್ರದ ನಾಯಕ ನಟ ಅಲೋಕ್ ಕಾಣಿಸಲಿದ್ದಾರೆ. ಜೂಜು ಕೋರನಾಗಿರುವ ಚಿತ್ರದ ನಾಯಕನನ್ನು ಅವನ ಗೆಳೆಯರು ಮುದ್ದಾಗಿ 'ಬಾಜಿ ' ಎಂದು ಕರೆಯುತ್ತಿರುತ್ತಾರೆ. ಅಲೋಕ್ ಅದ್ಭುತ ಫೈಟಿಂಗ್ಗಳು ಹಾಗೂ ಡ್ಯಾನ್ಸ್ನಲ್ಲಿ ಉತ್ತಮ ಪ್ರತಿಭೆ ತೋರಿಸಿದ್ದಾರೆ. ಮುಂದೆ ಅವರಿಗೆ ಅವಕಾಶಗಳು ಹರಿದು ಬರಲಿವೆ ಎನ್ನುತ್ತಾರೆ ನಿರ್ದೇಶಕರು.
(ದಟ್ಸ್ಕನ್ನಡ ಸಿನಿವಾರ್ತೆ)
ಚಿತ್ರಲೋಕದೊಳಗೆ ಹೊಸ ನಾಯಕ ಅಲೋಕ


Click it and Unblock the Notifications