ಸುದೀಪ್ ಚಿತ್ರದಲ್ಲಿ ಉದ್ಯಮಿ ಅಶೋಕ್ ಖೇಣಿ
'ನೈಸ್' ವಿಚಾರದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರೊಂದಿಗೆ ಗುದ್ದಾಡಿ ಖ್ಯಾತಿ ಪಡೆದ ಉದ್ಯಮಿ ಅಶೋಕ್ ಖೇಣಿ. ಈಗವರು ಸುದೀಪ್ ಮುಖ್ಯಭೂಮಿಕೆಯಲ್ಲಿರುವ 'ಕೆಂಪೇಗೌಡ' ಚಿತ್ರದಲ್ಲಿ ಬಣ್ಣ ಹಚ್ಚಿಕೊಳ್ಳುತ್ತಿದ್ದಾರೆ. ಈ ಹಿಂದೆಯೂ ಖೇಣಿ ಬೆಳ್ಳಿಪರದೆ ಮೇಲೆ ಇಣುಕಿದ್ದರು.
ಮಹಾರಾಜ, ಪೊಲೀಸ್ ಕಮಿಷನರ್, ಮುಖ್ಯಮಂತ್ರಿಯಾಗಿ ಕಾಣಿಸಿಕೊಂಡಿದ್ದ ಖೇಣಿ ಈಗ ಗೃಹ ಸಚಿವರಾಗಿ ಬೆಳ್ಳಿ ಪರದೆ ಅಲಂಕರಿಸಲಿದ್ದಾರೆ. ಸುದೀಪ್ ತಮ್ಮ ಚಿತ್ರದಲ್ಲಿ ಅಭಿನಯಿಸಬೇಕು ಎಂದು ವಿನಂತಿಸಿಕೊಂಡರು. ಅವರ ವಿನಂತಿಯನ್ನು ಬೇಡ ಎನ್ನಲು ಆಗಲಿಲ್ಲ. ಹಾಗಾಗಿ 'ಕೆಂಪೇಗೌಡ' ಚಿತ್ರಕ್ಕೆ ಅಂಗೀಕರಿಸಿದ್ದೇನೆ ಎನ್ನುತ್ತಾರೆ ಖೇಣಿ.
ಸುದೀಪ್, ರಾಗಿಣಿ, ಜೈ ಜಗದೀಶ್ ಜೊತೆಗೆ ಮೂರು ದಿನಗಳ ಚಿತ್ರೀಕರಣದಲ್ಲಿ ಖೇಣಿ ಪಾಲ್ಗೊಂಡಿದ್ದರು. ಈ ಹಿಂದೆ ಮುಖ್ಯಮಂತ್ರಿಯಾಗಿ ನಟಿಸಿದ್ದೆ. ಈಗ ಬೆಳ್ಳಿ ಪರದೆ ಮೇಲೆ ಗೃಹಸಚಿವನಾಗಿ ಹಿಂಬಡ್ತಿ ಸಿಕ್ಕಿರುವುದಕ್ಕೆ ಯಾವುದೇ ಅಳುಕಿಲ್ಲ ಎಂದಿದ್ದಾರೆ ಖೇಣಿ.
ಚಿತ್ರದಲ್ಲಿನ ತಮ್ಮ ನಟನೆಯನ್ನು ನೋಡಿದರೆ ಜೆಡಿಎಸ್ ನವರು ನನಗೆ ಮುಂದೆ ಮಂತ್ರಿಗಿರಿ ಕೊಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದ ಅವರು, ಬಳಿಕ ಸುಮ್ಮನೆ ತಮಾಷೆಗೆ ಹಾಗಂದೆ ಅಷ್ಟೆ ಎಂದು ಚಟಾಕಿ ಹಾರಿಸಿದರು. ಈ ಹಿಂದೆ ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಐಶ್ವರ್ಯ' ಚಿತ್ರದಲ್ಲೂ ನಟಿಸಿದ್ದರು.


Click it and Unblock the Notifications











