'ಮೈಲಾರಿ'ಯಾಗಿ ಮತ್ತೆ ನಟನೆಗೆ ಮರಳಿದ ಪ್ರೇಮ್
ಹ್ಯಾಟ್ರಿಕ್ ನಿರ್ದೇಶಕ ಪ್ರೇಮ್ ಬಣ್ಣ ಹಚ್ಚಿಕೊಂಡು 'ಪ್ರೀತಿ ಏಕೆ ಭೂಮಿ ಮೇಲಿದೆ?' ಎಂದು ಪ್ರೇಕ್ಷಕರನ್ನು ಕೇಳಿದ್ದಕ್ಕೆ ಅದ್ಯಾಕೋ ಪ್ರೇಕ್ಷಕ ಮೌನಕ್ಕೆ ಶರಣಾದ. ಚಿತ್ರ ನಿರೀಕ್ಷಿಸಿದಷ್ಟು ಯಶಸ್ಸು ಕಾಣಲಿಲ್ಲ. ಛಲ ಬಿಡದ ವಿಕ್ರಮಾದಿತ್ಯನಂತೆ ಮತ್ತೆ 'ಮೈಲಾರಿ'ಯಾಗಿ ಪ್ರತ್ಯಕ್ಷವಾಗಲಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರಿಗೆ ಸಿಕ್ಕಿದ ಪ್ರೇಮ್ ತಮ್ಮ ಹೊಸ ಚಿತ್ರ 'ಮೈಲಾರಿ' ಕುರಿತು ಹೇಳಿದ್ದಿಷ್ಟು.
ಪ್ರೇಮ್ ಹುಟ್ಟು ಹಬ್ಬವಾದ ಸೆ.22ರಂದು 'ಮೈಲಾರಿ' ಸೆಟ್ಟೇರಲಿದೆ. ಇದು ಅವರ ಸ್ವಂತ ನಿರ್ಮಾಣದ ಚಿತ್ರವಾಗಿರುವುದು ಮತ್ತೊಂದು ವಿಶೇಷ. ಅಷ್ಟೇ ಅಲ್ಲ ನವೆಂಬರ್ ಮೊದಲ ವಾರದಲ್ಲಿ ಪ್ರೇಮ್ ತಂದೆಯಾಗಲಿದ್ದಾರೆ ಎಂಬ ವಿಚಾರವೂ ಕಿವಿಗೆ ಬಿತ್ತು! ಪತ್ರಿಕಾಗೋಷ್ಠಿಯಲ್ಲಿ ತಮ್ಮ ಹೊಸ ಚಿತ್ರಕ್ಕಿಂತಲೂ ಅವರ ವೈಯಕ್ತಿಯ ವಿಚಾರಗಳು ಪತ್ರಕರ್ತರನ್ನು ಪುಳಕಗೊಳಿಸಿದವು.
ಪುನೀತ್ ರ 'ರಾಜ್' ಚಿತ್ರೀಕರಣ ಭರದಿಂದ ಸಾಗುತ್ತಿದ್ದ್ದು, ಚಿತ್ರದ ಕೆಲವೊಂದು ದೃಶ್ಯಗಳನ್ನು ಮೈಸೂರಿನ ಸುಂದರ ಪರಿಸರದಲ್ಲಿ ಚಿತ್ರೀಕರಿಸಲಾಗುತ್ತಿದೆ. ಚಿತ್ರೀಕರಣ ಸ್ಥಳಕ್ಕೆ ತುಂಬು ಗರ್ಭಿಣಿ ರಕ್ಷಿತಾ ಸಹ ಆಗಮಿಸಿದ್ದರು. ಯಾಕೋ ಏನೋ ಮಾಧ್ಯಮ ಪ್ರತಿನಿಧಿಗಳನ್ನು ಕಂಡ ಕೂಡಲೆ ಅವರು ಕಾಣೆಯಾದರು! ಪತ್ರಕರ್ತರೆಲ್ಲಾ ಒಬ್ಬೊಬ್ಬರಾಗಿ ಖಾಲಿಯಾದ ನಂತರ ಪುನಃ ರಕ್ಷಿತಾ ಪ್ರತ್ಯಕ್ಷವಾದರು.
ಚಿತ್ರಕಥೆ, ಸಂಭಾಷಣೆ ಬರೆಯಲು ಮಳವಳ್ಳಿ ಸಾಯಿಕೃಷ್ಣ ಮತ್ತೆ ಪ್ರೇಮ್ ತಂಡ ಸೇರಲಿದ್ದಾರೆ. ಪ್ರಸ್ತುತ ಚಿತ್ರೀಕರಣ ಸ್ಥಳಗಳಲ್ಲೇ ಪ್ರೇಮ್ ರೊಂದಿಗೆ ಸುತ್ತುತ್ತಾ 'ಮೈಲಾರಿ' ಚಿತ್ರಕಥೆಯಲ್ಲಿ ತಲ್ಲೀನರಾಗಿದ್ದಾರೆ. ಈ ಚಿತ್ರದಲ್ಲಿ ಪ್ರೇಮ್ ಬರಿ ನಟನಾಗಿಯಷ್ಟೇ ಕಾಣಿಸಲಿದ್ದಾರೆ. ನಿರ್ದೇಶನದ ಜವಾಬ್ದಾರಿಯನ್ನು ಅವರ ಸಹಾಯಕ ವಿಜಯ್ ಹೆಗಲಿಗೆ ಹೊರಿಸಿದ್ದಾರೆ. ಕನ್ನಡ ಚಿತ್ರೋದ್ಯಮದಲ್ಲಿ 'ಮೈಲಾರಿ' ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ.
(ದಟ್ಸ್ ಕನ್ನಡ ಸಿನಿವಾರ್ತೆ)


Click it and Unblock the Notifications