ಬಿರುಗಾಳಿಯಲ್ಲಿ ಐ ಲವ್ ಯೂ ಗೀತೆಗೆ ಚೇತನ್ ನೃತ್ಯ
ಐ ಲವ್ ಯೂ ಅನ್ನುವುದಕ್ಕೆ ಬಿರುಗಾಳಿಯಾದರೇನು, ತಂಗಾಳಿಯಾದರೇನು? ಬಿರುಗಾಳಿಯಲ್ಲೂ ತಂಗಾಳಿಯಂತೆ ತೇಲಿ ಬರುವ ಶಕ್ತಿ ಇದೆ ಐ ಲವ್ ಯೂ ಎಂಬ ಪದಕ್ಕೆ ಎಂಬುವುದು ಪ್ರೇಮಿಗಳ ಅಭಿಪ್ರಾಯ. ಎಲ್ಲಿ ಬಿರುಗಾಳಿ, ಎಲ್ಲಿ ಪ್ರೀತಿ ಇದೇನು ಒಂದಕ್ಕೊಂದು ಅರ್ಥವಿಲ್ಲ, ಸಂಬಂಧವಿಲ್ಲ ಅನಿಸುವುದು ಸಹಜ. ಆದರೆ ಇಲ್ಲಿ ಪ್ರಸ್ತಾಪವಾಗುತ್ತಿರುವುದು ನಷ್ಟಮಾಡುವ ಬಿರುಗಾಳಿ ಬಗ್ಗೆ ಅಲ್ಲ. ನೃತ್ಯ ನಿರ್ದೇಶಕ ಹರ್ಷ ನಿರ್ದೇಶನದ ದ್ವಿತೀಯ ಚಿತ್ರದ ಬಗ್ಗೆ. ಗೆಳೆಯ ಚಿತ್ರದಿಂದ ಸ್ವತಂತ್ರ ನಿರ್ದೇಶನಕ್ಕೆ ಅಡಿಯಿಟ್ಟ ಹರ್ಷ ಈಗ ಬಿರುಗಾಳಿ ಚಿತ್ರಕ್ಕೆ ನಿರ್ದೇಶನದ ಹೊಣೆ ಹೊತ್ತಿದ್ದಾರೆ.
ಸುಮಾರು ಭಾಗದ ಚಿತ್ರೀಕರಣ ಮುಗಿಸಿರುವ ನಿರ್ದೇಶಕರು ಈಗ ಮಹೇಶ್ ರಚಿಸಿರುವ 'ಹೇಳಿಬಿಡೆ ಹೇಳಿಬಿಡೆ...ಐ ಲವ್ ಯೂ ಅಂತ ಹೇಳಿಬಿಡೆ ನೋಡೆಬಿಡೆ ನೋಡೆಬಿಡೆ ...ಒಂದ್ಸಾರಿ ತಿರುಗಿ ನೋಡ್ಬಿಡೆ' ಎಂಬ ಗೀತೆಯನ್ನು ನಾಯಕ ಚೇತನ್ ಸ್ನೇಹಿತರಾದ ಪವನ್, ಗಿರಿ, ಕರಿಷ್ಮಾ ಹಾಗೂ ಸಹನರ್ತಕರ ಅಭಿನಯದಲ್ಲಿ ಮೈಸೂರ್ಲ್ಯಾಂಪ್ಸ್, ನೈಸ್ರಸ್ತೆ ಹಾಗೂ ರಾಕ್ಲೈನ್ಸ್ಟೂಡಿಯೋದಲ್ಲಿ ಕಲಾನಿರ್ದೇಶಕ ಇಸ್ಮಾಯಿಲ್ ನಿರ್ಮಿಸಿದ ವಿವಿಧ ಸೆಟ್ಗಳಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ಅವರೇ ಗೀತೆಗೆ ನೃತ್ಯ ಸಂಯೋಜಿಸಿದ್ದಾರೆ.
ಆದರ್ಶ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ನಿರ್ದೇಶಕರೇ ಕತೆ, ಚಿತ್ರಕತೆ ಬರೆದಿದ್ದಾರೆ. ಎಚ್.ಸಿ.ವೇಣು ಛಾಯಾಗ್ರಹಣ, ಅರ್ಜುನ್ ಸಂಗೀತ, ಡಿಫ಼ರೆಂಟ್ ಡ್ಯಾನಿ ಸಾಹಸ, ದೀಪು ಎಸ್ ಕುಮಾರ್ ಸಂಕಲನ, ಯೋಗಾನಂದ ಸಂಭಾಷಣೆ, ಜಯಂತ ಕಾಯ್ಕಿಣಿ, ಕವಿರಾಜ್, ಹೃದಯಶಿವ ಗೀತರಚನೆ, ಮಹೇಶ್, ಯೋಗಿ ಸಹನಿರ್ದೇಶನ ಹಾಗೂ ರಮೇಶ್ ಅವರ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಚೇತನ್, ಸಿತಾರವೈದ್ಯ, ಕಿಶೋರ್, ಮೈಕೋನಾಗರಾಜ್, ಪರಮೇಶಿ, ಕುರಿಗಳು ಪ್ರತಾಪ್, ಗಿರಿ, ಪವನ್, ಕರಿಷ್ಮಾ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಸಿನಿವಾರ್ತೆ)
ಮಾಗಡಿಯಲ್ಲಿ ಬಿರುಗಾಳಿಬಿರುಸಿನ ಶೂಟಿಂಗ್


Click it and Unblock the Notifications