ಮೈಲಾರಿ ಸಕ್ಸಸ್ ಶಿವರಾಜ್ ಕುಮಾರ್ಗೆ ಶುಕ್ರದೆಸೆ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಮತ್ತೆ ಶುಕ್ರದೆಸೆ ಆರಂಭವಾಗಿದೆ. ಇದೆಲ್ಲಾ ಮೈಲಾರಿ ಚಿತ್ರದ ಮಹಾತ್ಮೆ. ಸ್ವತಃ ಶಿವಣ್ಣ ಕೂಡ ಈ ಮಾತನ್ನು ಒಪ್ಪುತ್ತಾರೆ. ಜೋಗಿ ಬಳಿಕ ನನಗೆ ಒಳ್ಳೆಯ ಹೆಸರು ತಂದುಕೊಟ್ಟ ಚಿತ್ರ ಮೈಲಾರಿ ಎಂದು ಶಿವಣ್ಣ ತಿಳಿಸಿದರು. ಗಾಂಧಿನಗರದ ಗ್ರೀಸ್ ಹೌಸ್ ರಾಜ್ ಮಿಲನದಲ್ಲಿ ನಡೆದ ಮೈಲಾರಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ಮೈಲಾರಿ ಚಿತ್ರ 'ರಥಸಪ್ತಮಿ' ಚಿತ್ರವನ್ನು ನೆನಪಿಸುವಂತಿದೆ ಎನ್ನುತ್ತಿದ್ದಾರೆ ಅಭಿಮಾನಿಗಳು. ಮೈಲಾರಿ ಚಿತ್ರ ನನಗೆ ಇನ್ನೂ ನೂರು ಚಿತ್ರಗಳಲ್ಲಿ ಅಭಿನಯಿಸುವ ಶಕ್ತಿಯನ್ನು ತಂದುಕೊಟ್ಟಿದೆ. ಇತ್ತೀಚೆಗೆ ನನ್ನ ಚಿತ್ರಗಳು ಅಷ್ಟಾಗಿ ಹೆಸರು ಮಾಡಿರಲಿಲ್ಲ. ಬಹುಶಃ ಮೈಲಾರಿ ಚಿತ್ರದಿಂದ ನನಗೆ ಮತ್ತೊಂದು ತಿರುವು ಸಿಕ್ಕಿದೆ ಎಂದು ಶಿವಣ್ಣ ತಿಳಿಸಿದರು.
ಈ ಚಿತ್ರದಲ್ಲಿ ನನ್ನ ಅಭಿನಯವನ್ನು ನೋಡಿದಾಗ ನನ್ನ ಮೇಲೆ ನನಗೆ ಆಸಕ್ತಿ ಬಂದಿದೆ. ಅಷ್ಟೊಂದು ಯಂಗ್ ಆಗಿ ತೋರಿಸಿದ ಛಾಯಾಗ್ರಾಹಕರಿಗೆ(ಚಂದ್ರಶೇಖರ್) ನನ್ನ ಧನ್ಯವಾದಗಳು. ಚಿತ್ರದಲ್ಲಿ ನನ್ನ ತಂದೆಯವರನ್ನು ಹೊಡೆಯಲು ಕೈಎತ್ತಿದ ಸನ್ನಿವೇಶ ನಿಜಕ್ಕೂ ನನಗೆ ಇನ್ನೂ ಮರೆಯಲು ಆಗುತ್ತಿಲ್ಲ. ಚಿತ್ರೀಕರಣ ಬಳಿಕ ಸುರೇಶ್ ಮಂಗಳೂರು ಅವರನ್ನು ಕ್ಷಮೆಯಾಚಿಸಿದ್ದೆ.
ನಾನು ನಿಜ ಜೀವನದಲ್ಲಿ ಯಾವತ್ತೂ ತಂದೆಯ ಮೇಲೆ ಕೈಎತ್ತಿದ್ದಾಗಲಿ, ಕೆಟ್ಟದಾಗಿ ನಡೆದುಕೊಂಡದ್ದಾಗಲಿ ಮಾಡಿಲ್ಲ. ನಿಮ್ಮ ಶಿವಣ್ಣ ಹೃದಯವಂತ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದರು. ತಂದೆಯವರ ಮೇಲೆ ಕೈಎತ್ತಿದ ಸನ್ನಿವೇಶ ನಿಮ್ಮ ಮನಸ್ಸಿಗೆ ಕಸಿವಿಸಿ ತಂದಿದ್ದರೆ ಕ್ಷಮಿಸಿ ಎಂದರು. [ಹ್ಯಾಟ್ರಿಕ್ ಹೀರೋ]


Click it and Unblock the Notifications











