'ಸೂರ್ಯಕಾಂತಿ'ಯ ತಾತನಾಗಿ ನಾಸಿರ್
ಬಿಡುಗಡೆಗೆ ಸಜ್ಜಾಗಿರುವ 'ಸೂರ್ಯಕಾಂತಿ' ಚಿತ್ರದಲ್ಲಿ ತಮಿಳು ಚಿತ್ರರಂಗದ ಪ್ರಸಿದ್ಧ ನಟ ನಾಸಿರ್ ಅಭಿನಯಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. 'ಆ ದಿನಗಳು' ಖ್ಯಾತಿಯ ಕೆ ಎಂ ಚೈತನ್ಯ 'ಸೂರ್ಯಕಾಂತಿ'ಯ ರೂವಾರಿ. ನಾಯಕ ನಟ ಚೇತನ್ ಗೆ ತಾತನಾಗಿ ನಾಸಿರ್ ಈ ಚಿತ್ರದಲ್ಲಿ ಕಾಣಿಸಲಿದ್ದಾರೆ. ವಯಸ್ಸಿನಲ್ಲಿ ನಾಸಿರ್ ಗಿಂತಲೂ ಹಿರಿಯರಾದ ಕಿಶೋರಿ ಬಲ್ಲಾಳ್ ನಾಸಿರ್ ಗೆ ಜೋಡಿ. ಇದು ಚಿತ್ರದ ವಿಶೇಷಗಳಲ್ಲಿ ಒಂದು.
ತಮಿಳು ಚಿತ್ರಗಳಲ್ಲಿ ತಮಗಿಂತಲೂ ಹಿರಿಯರಾದ ನಾಯಕ ನಟರಿಗೆ ನಾಸಿರ್ ಈಗಾಗಲೇ ತಂದೆಯಾಗಿ ಕಾಣಿಸಿಕೊಂಡಿದ್ದಾರೆ. ಕಿಶೋರಿ ಬಲ್ಲಾಳ್ ಗೆ ಜೊತೆಯಾಗಿ ನಟಿಸುತ್ತಿರುವುದರಲ್ಲಿ ತಪ್ಪೇನು ಇಲ್ಲ. ಆಟದಲ್ಲಿ ಇದೂ ಒಂದು ಭಾಗವಷ್ಟೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಚೈತನ್ಯ. ಸೂರ್ಯಕಾಂತಿಗೆ ನಾಸಿರ್ ಅವರನ್ನು ಕರೆತರಲು ಒಂದು ಸಣ್ಣ ಕಾರಣವೂ ಇದೆ.
ಆಗ ತಾನೆ ಚೈತನ್ಯರ 'ಆ ದಿನಗಳು' ಬಿಡುಗಡೆಯಾಗಿದ್ದ ಸಮಯ. ಬೆಂಗಳೂರಿನಲ್ಲಿ ನಾಸಿರ್ ಆ ಚಿತ್ರವನ್ನು ನೋಡಿದ್ದರು. ಚೈತನ್ಯ ಅವರಿಗೆ ಫೋನ್ ಮಾಡಿದ ನಾಸಿರ್ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರಂತೆ. ತಮ್ಮ ಮುಂದಿನ ಚಿತ್ರದಲ್ಲಿ ಅವಕಾಶ ಕೊಡಲು ಈ ಮೆಚ್ಚುಗೆ ಮಾತುಗಳನ್ನು ಆಡುತ್ತಿದ್ದಾರೆ ಎಂದು ಚೈತನ್ಯ ತಪ್ಪಾಗಿ ಅರ್ಥೈಸಿದ್ದರು.
ತಮ್ಮ ಪ್ರತಿಭೆಯನ್ನು ಗುರುತಿಸಿ ನಾಸಿರ್ ಫೋನ್ ಮಾಡಿದ್ದಾರೆ ಎಂಬುದು ನಂತರ ಚೈತನ್ಯರಿಗೆ ಗೊತ್ತಾಯಿತು. ಈ ದೂರವಾಣಿ ಸಂಭಾಷಣೆಯೇ ನಾಸಿರ್ ಅವರನ್ನು ಸೂರ್ಯಕಾಂತಿಗೆ ಕರೆತರಲು ಸಹಾಯಕವಾಗಿಯಿತು ಎನ್ನುತ್ತಾರೆ ಚೈತನ್ಯ. ಸಂಕ್ರಾಂತಿ ಹಬ್ಬಕ್ಕೆ (ಜ.14) ಸೂರ್ಯಕಾಂತಿ ತೆರೆಕಾಣಲಿದೆ.


Click it and Unblock the Notifications











