ಜೀ ಕನ್ನಡದಲ್ಲಿ ಸುದೀಪ್ರ 'ನಂ.73 ಶಾಂತಿ ನಿವಾಸ'
ಬೆಂಗಳೂರು, ಜು.11: ನಟ ನಿರ್ದೇಶಕ ಸುದೀಪ್ ನಿರ್ದೇಶನದ ಸೂಪರ್ ಹಿಟ್ ಚಲನಚಿತ್ರ 'ನಂ.73 ಶಾಂತಿ ನಿವಾಸ' ಜು. 12 ರಂದು ಮಧ್ಯಾಹ್ನ 4.30ಕ್ಕೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.
ತಮ್ಮ ತಮ್ಮಲ್ಲಿನ ಅಹಂಕಾರದಿಂದಾಗಿ ಕಳೆದು ಹೋಗಿರುವ ಒಂದು ಕುಟುಂಬವನ್ನು ಮನೆಗೆ ಬರುವ ಅಡಿಗೆಯವನೊಬ್ಬ ಸರಿಪಡಿಸುವ ಕಥೆ 'ಶಾಂತಿ ನಿವಾಸ' ಚಿತ್ರದಲ್ಲಿದೆ. ಆ ಕಾಲದ ಸೂಪರ್ ಹಿಟ್ ಹೃಷಿಕೇಶ್ ಮುಖರ್ಜಿ ನಿರ್ದೇಶನದ ಹಿಂದಿ ಚಲನಚಿತ್ರ 'ಬಾವರ್ಚಿ' ಮತ್ತು ಕೆ.ಬಾಲಚಂದ್ರ ನಿರ್ದೇಶನದ ತಮಿಳು ಚಲನಚಿತ್ರ 'ನವರಾಗಮ್' ಚಿತ್ರವನ್ನು ನೆನಪಿಸುವಂತಿರುವ ಈ ಚಲನಚಿತ್ರ ವೀಕ್ಷಕರ ಮನಸ್ಸನ್ನು ಸೆಳೆದಿತ್ತು.
ತನ್ನ ಎರಡನೇ ಚಿತ್ರದಲ್ಲೇ ಸುದೀಪ್ ತಾನೊಬ್ಬ ಉತ್ತಮ ನಿರ್ದೇಶಕ ಎಂಬುದನ್ನು ಸುದೀಪ್ ಸಾಬೀತು ಪಡಿಸಿದ್ದಾರೆ. ಸರಳ ನಿರೂಪಣೆ ಹಾಗೂ ತಾಜಾತನದ ಸರಳ ಹಾಸ್ಯದ ಸಂಭಾಷಣೆಯಿಂದಾಗಿ 'ಶಾಂತಿ ನಿವಾಸ' ಒಂದು ಉತ್ತಮ ಸದಭಿರುಚಿಯ ಚಿತ್ರವಾಗಿ ಮೂಡಿ ಬಂದಿದೆ. ಮನೆಮಂದಿಯೆಲ್ಲ ಕುಳಿತು ನೋಡಬಹುದಾದ, ಯಾವುದೇ ಅತಿರೇಕ ಹಾಗೂ ವ್ಯಾಪಾರಿಕರಣದ ಗೊಂದಲಗಳಿಲ್ಲದ ಸುಂದರ ಚಲನಚಿತ್ರ 'ನಂ.73 ಶಾಂತಿ ನಿವಾಸ'. ಸರಳ ಕಥೆಯಾಗಿದ್ದರೂ ಕೂಡ ತನ್ನ ಸುಂದರ ಕಥೆ ಹೇಳುವ ವಿಧಾನದಿಂದ ಈ ಚಿತ್ರ ಜನ ಮೆಚ್ಚುಗೆಯನ್ನು ಗಳಿಸಿತ್ತು.
ತಾರಾಗಣದಲ್ಲಿ ಸುದೀಪ್, ಕೋಮಲ್, ಮಾಸ್ಟರ್ ಹಿರಣ್ಣಯ್ಯ, ಶ್ರೀನಿವಾಸ್ ಮೂರ್ತಿ, ರಮೇಶ್ ಭಟ್, ಅನು ಪ್ರಭಾಕರ್, ವೈಶಾಲಿ ಕಾಸರವಳ್ಳಿ, ಚಿತ್ರಾ ಶೆಣೈ, ದೀಪು ಅಭಿನಯಿಸಿದ್ದಾರೆ. ಚಿತ್ರಕ್ಕೆ ಕಲಾ ನಿರ್ದೇಶನವನ್ನು ದಿನೇಶ್ ಮಂಗಳೂರು, ಸಹ ನಿರ್ದೇಶನ ಸುರೇಶ್ ರಾಜ್, ಛಾಯಾಗ್ರಹಣ ವೆಂಕಟ್ ಹಾಗೂ ರಮಣಿ ಭಾರಧ್ವಜ್ ಅವರ ಸಂಗೀತವಿದೆ.
(ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications