ಯುಗಾದಿಯಂದು ಲಗಾನ್ನ ‘ಭುವನ’ ಅಮೀರ್ ಖಾನ್ ಬೆಂಗಳೂರಿಗೆ
ಆಸ್ಕರ್ ಪ್ರಶಸ್ತಿ ಗೆಲ್ಲದಿದ್ದರೇನು? ಅಮೀರ್ ಖಾನ್ ಲಗಾನ್ ಗುಂಗಿನಿಂದ ಇನ್ನೂ ಪೂರ್ತಿ ಹೊರಬಂದಿಲ್ಲ. ಎಲ್ಲಿ ಹೋದರೂ ಲಗಾನ್ ಚಿತ್ರದ್ದೇ ಮಾತು. ಅಮೀರ್ ಅಷ್ಟೇ ಏನು- ಲಕ್ಷ ಲಕ್ಷ ಭಾರತೀಯರದು ಲಗಾನ್ದೇ ಜಪ. ಆಸ್ಕರ್ ಪೀಠ ಏರದಿದ್ದರೂ, ಲಗಾನ್ಗೆ- ಅದರ ಮೂಲಕ ಅಮೀರ್ಗೆ ಅಭಿಮಾನಿಗಳ ಎದೆಯಲ್ಲಿ ಭದ್ರ ಸ್ಥಾನ.
- ಈ ಪರಿಯ 'ಭುವನ" ದ ಭಾಗ್ಯ ಅಮೀರ್ಖಾನ್ ಯುಗಾದಿಯಂದು ಬೆಂಗಳೂರಿಗೆ ಬರುತ್ತಿದ್ದಾರೆ. ಅವರೇನೂ ಚಿತ್ರಭಾನು ಸಂವತ್ಸರಕ್ಕೆ ಸ್ವಾಗತ ಕೋರಲು ಸಿಲಿಕಾನ್ ನಗರಿಗೆ ಆಗಮಿಸುತ್ತಿಲ್ಲ ; ಲಗಾನ್ ಹುಟ್ಟಿದ್ದು ಹೇಗೆ? ಎನ್ನುವ ಪುಸ್ತಕವನ್ನು ಬಿಡುಗಡೆ ಮಾಡುವುದು ಅವರ ಕಾರ್ಯಕ್ರಮ.
ಅಮೀರ್ಖಾನ್ ಬೆಂಗಳೂರು ಭೇಟಿಯ ಕಾರ್ಯಕ್ರಮ ಇಂತಿದೆ : ಶನಿವಾರ ಸಂಜೆ ಅಗಮನ. ಲೀಲಾ ಪ್ಯಾಲೇಸ್ನಲ್ಲಿ ಠಿಕಾಣಿ. ಭಾನುವಾರ ಲಗಾನ್ ನಿರ್ಮಾಣ ಕುರಿತಾದ ಪುಸ್ತಕದ ಬಿಡುಗಡೆ. ಅಂದಹಾಗೆ, ಕಳೆದ ಸಲ ಅಮೀರ್ ಬೆಂಗಳೂರಿಗೆ ಭೇಟಿ ಕೊಟ್ಟಿದ್ದಾಗ- ಇಂಗ್ಲೆಂಡ್ ಪ್ರಧಾನಿ ಟೋನಿ ಬ್ಲೇರ್ ಕೂಡ ಬೆಂಗಳೂರಿನಲ್ಲಿದ್ದರು. ಇಬ್ಬರೂ ಭೇಟಿಯಾಗಿದ್ದರೆನ್ನಿ . ಈ ಭಾರಿಯ ಅಮೀರ್ ಭೇಟಿಯ ಸಂದರ್ಭದಲ್ಲೇ ಪಾಶ್ಚಾತ್ಯ ಸಂಗೀತ ಲೋಕದ ಪ್ರಸಿದ್ಧ ರೋಜರ್ ವಾಟರ್ಸ್ನ ಪ್ರದರ್ಶನ ಬೆಂಗಳೂರಲ್ಲಿ ಏರ್ಪಾಟಾಗಿದೆ.
ವಾಸ್ತವವಾಗಿ ಫೆಬ್ರವರಿಯಲ್ಲೇ ಲಗಾನ್ ಪುಸ್ತಕ ಸಿದ್ಧವಾಗಿತ್ತು . 41 ಪುಟಗಳ ಈ ಪುಟ್ಟ ಪುಸ್ತಕವನ್ನು ಅಮೀರ್ ಹಾಗೂ ಆಶುತೋಷ್ ಗೌರೀಕರ್ ರೂಪಿಸಿದ್ದಾರೆ. ಭಾರತದ ಮಟ್ಟಿಗಂತೂ ಈ ಪರಿಯ ಪುಸ್ತಕ ಅಪರೂಪದ್ದು. ಅಲ್ಲಿಗೆ ಲಗಾನ್ ತಂಡದ ಹೆಸರಿನಲ್ಲಿ ಇನ್ನೊಂದು ದಾಖಲೆ!
(ಇನ್ಫೋ ವಾರ್ತೆ)


Click it and Unblock the Notifications