ಮಗುವಿನ ಮನಸ್ಸಿನ ಕವಿತಾ ‘ಬಿಂಬ’

ಮಧ್ಯಮ ವರ್ಗದಲ್ಲಿ ಜನಿಸಿದ 'ಇಂದು"ವಿಗೆ ಕಲಿಕೆಯಲ್ಲಿ ಮುಂದುವರಿಯಲು ಹಂಬಲ. ಆದರೆ ತಾಯಿ ಸರೋಜಾಗೆ ಮಗಳು ಚಲನ ಚಿತ್ರರಂಗದ ತಾರೆಯಾಗುವ ಕನಸು. ಮನೆಯ ಒತ್ತಡಕ್ಕೆ ಮಣಿದು ಒಲ್ಲದ ಮನಸ್ಸಿನಿಂದ ನಟಿಸುವ ಬಾಲೆ. ಮಗಳ ಭವಿಷ್ಯಕ್ಕೆ ಮಾರಕವಾಗುವ ಅರಿವಿಲ್ಲದೆ ಮಹತ್ತರ ಕನಸು ಹೊತ್ತ ತಾಯಿ. ಈ ಬಲೆಯಲ್ಲಿ ಮಾನಸಿಕವಾಗಿ ಬೆಂದವಳು ಇಂದು. ಮಗುವಿನ ಮಾನಸಿಕ ಸ್ಥಿತಿಯ ಸುತ್ತ ಕವಿತಾ ಹೆಣೆದ ಕಥೆಯೇ 'ಬಿಂಬ" !
ಬಾಲಕಿಯ ಪಾತ್ರದಲ್ಲಿ ಒಂಬತ್ತು ವರ್ಷದ ರಕ್ಷಾಳ ಮನೋಜ್ಞ ಅಭಿನಯವಿದೆ. ತಾಯಿ-ತಂದೆಯಾಗಿ ಡೈಸಿ ಬೋಪಣ್ಣ ಮತ್ತು ಸಂಪತ್ಕುಮಾರ್ ಹೊಸ ಪರಿಚಯ ಎನ್ನಬಹುದು. ಈಗ ಈ ಡೈಸಿ ಎಂಬ ಕೊಡಗಿನ ಬೆಡಗಿ ಗಾಂಧಿನಗರಿಯಲ್ಲಿ ಅವಕಾಶ ದೊರೆಯದೆ ಬಾಲಿವುಡ್ ಬೆನ್ನುಹತ್ತಿದ ಗುಲ್ಲಿದೆ. ನಟನೆಗೆ ಸವಾಲೊಡ್ಡುವ ಪಾತ್ರದಲ್ಲಿ ಪ್ರಕಾಶ್ ರೈ ಅಭಿನಯಿಸಿದ್ದಾರೆ.
ಕವಿತಾ ಲಂಕೇಶ್ ತಾವೇ ಬರೆದ ಕಥೆ, ಚಿತ್ರಕಥೆಯನ್ನು ಇಲ್ಲಿ ನಿರ್ದೇಶಿಸಿದ್ದಾರೆ. ತನ್ನ ಚೊಚ್ಚಲ ಚಿತ್ರ 'ದೇವೀರಿ"ಯಿಂದ ಕಲಾತ್ಮಕ ಚಿತ್ರಗಳಲ್ಲಿ ಪರಿಚಿತರಾದ ಕವಿತಾರ ನಾಲ್ಕನೇ ಚಿತ್ರವಿದು. ಆ ಮೊದಲು ಅವರು ಹಲವು ಡಾಕ್ಯುಮೆಂಟರಿಗಳನ್ನು ನಿರ್ಮಿಸಿದ್ದರು. ಅವರ ಚೊಚ್ಚಲ ಚಿತ್ರ 'ದೇವೀರಿ" ಬಾಲಕ ಕ್ಯಾತನ ದೃಷ್ಟಿಯಿಂದ ಪ್ರಪಂಚ ನೋಡಿದರೆ, ಬಿಂಬದಲ್ಲಿ ದೊಡ್ಡವರ ದೃಷ್ಟಿಗೆ ಇಂದು ಬಲಿಯಾಗುತ್ತಾಳೆ. ಅವರ ಚಿತ್ರಗಳಲ್ಲಿ ಮಕ್ಕಳ ಮನಸ್ಸಿನ ತಲ್ಲಣಗಳು ಎಳೆಎಳೆಯಾಗಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.
'ದೇವೀರಿ" ಅರವಿಂದನ್ ಪುರಸ್ಕಾರ ಸೇರಿದಂತೆ ಒಂಬತ್ತು ಪ್ರಶಸ್ತಿಗಳನ್ನು ಪಡೆದಿದೆ. 18 ಅಂತರಾಷ್ಟ್ರೀಯ ಚಿತ್ರಗಳಲ್ಲಿ ಪ್ರದರ್ಶನ ಕಂಡಿದೆ. ಬಿಂಬ ಬಿಡುಗಡೆಗೆ ಮುನ್ನವೇ ತಿರುವನಂತಪುರ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶಿತವಾಗಿ ಭಾರೀ ಪ್ರಶಂಸೆಗೆ ಪಾತ್ರವಾಗಿದೆ. ಅಲ್ಲದೇ ಬ್ಯಾಂಕಾಕ್ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.
ಚಿತ್ರಕ್ಕೆ ಛಾಯಾಗ್ರಹಣ ಎಚ್.ಎಮ್.ರಾಮಚಂದ್ರ ಅವರದ್ದು . ಎನ್.ಸ್ವಾಮಿ ಚಿತ್ರ ಸಂಕಲನ ಮಾಡಿದ್ದಾರೆ. ಇಸಾಕ್ ಥಾಮಸ್ ಕುಟ್ಟುಪಲ್ಲಿ ಸಂಗೀತ ನೀಡಿದ್ದಾರೆ.
'ಸದಭಿರುಚಿಯ ಬಿಂಬವು ಕಲಾತ್ಮಕತೆಯಿಂದ ಕೂಡಿದ ಕಮರ್ಶಿಯಲ್" ಎಂಬುದು ಕವಿತಾರ ಹೇಳಿಕೆ. ಅವರ ಈ ಮೊದಲ ಚಿತ್ರ 'ಪ್ರೀತಿ ಪ್ರೇಮ ಪ್ರಣಯ" ಶತದಿನೋತ್ಸವ ಕಂಡಿದೆ. ಚಿತ್ರಕ್ಕೆ ಛಾಯಾಗ್ರಹಣ ಎಚ್.ಎಮ್.ರಾಮಚಂದ್ರ ಅವರದ್ದು . ಎನ್.ಸ್ವಾಮಿ ಚಿತ್ರ ಸಂಕಲನ ಮಾಡಿದ್ದಾರೆ. ಇಸಾಕ್ ಥಾಮಸ್ ಕುಟ್ಟುಪಲ್ಲಿ ಸಂಗೀತ ನೀಡಿದ್ದಾರೆ. ಮೇ 14ರಂದು ಬಿಂಬ ತೆರೆಗೆ ಬರಲು ಸಿದ್ಧವಾಗಿದೆ.


Click it and Unblock the Notifications