ಉಪ್ಪಿ ಹಾಡಿದ ಎಚ್ಟುಓ ಗೀತೆಗಳ ಯಶಸ್ಸು, ಅಪ್ಪು ಹಾಡಿದ ತಾಲಿಬಾನ್ ಗೀತೆಯ ಡೋಸು ಬಲು ಜೋರಾಗಿದೆ. ಆ ಕಾರಣಕ್ಕೇ ಸುದೀಪ್ ಕೂಡ ಈಗ ಗಾಯಕ. ಚಂದು ಚಿತ್ರದ ಬೆಸ್ಟ್ ಪ್ಲೇ ಬ್ಯಾಕ್ ಸಿಂಗರ್ ಈತನೇ!
ಶಾಸ್ತ್ರೀಯ ಗಾಯನದ ಗಂಧ- ಗಾಳಿ ಇಟ್ಟುಕೊಂಡು ಯಶಸ್ವಿ ನಾಯಕ ಕಂ ಗಾಯಕನ ಸ್ಥಾನ ಗಿಟ್ಟಿಸಿದ್ದು ಡಾ.ರಾಜ್ಕುಮಾರ್. ಪ್ರಯೋಗಗಳೆಂಬಂತೆ ಆಗಾಗ ವಿಷ್ಣು ಕೂಡ ಹಾಡಿದ್ದುಂಟು. ‘ತುತ್ತು ಅನ್ನ ತಿನ್ನೋಕೆ’, ‘ಶಶಿಯ ಕಂಡು ಮೋಡ ಹೇಳಿತು’ ಹಾಡುಗಳಿಂದ ಹಿಡಿದು ‘ಕನ್ನಡವೇ ನಮ್ಮಮ್ಮ...’ವರೆಗೆ ವಿಷ್ಣು ಹಾಡಿದ ಹಾಡುಗಳು ಹಿಟ್. ಮೊನಾಟನಿಯನ್ನ ಬ್ರೇಕ್ ಮಾಡಿದ ಕಾರಣಕ್ಕೆ ಈ ಹಾಡುಗಳು ಹಿಟ್ ಆದವು ಎಂಬುದು ಸಿನಿಮಾ ಪಂಡಿತರ ಅಂಬೋಣ.
ಆದರೆ ಇತ್ತೀಚೆಗೆ ನಾಯಕರೇ ಹಾಡುಗಳನ್ನು ಹಾಡುವ ಒಂದು ಟ್ರೆಂಡನ್ನೇ ಹುಟ್ಟುಹಾಕಿದ್ದು ಉಪೇಂದ್ರ. ಉಪೇಂದ್ರ ಚಿತ್ರದ ‘ಉಪ್ಪಿಗಿಂತ ರುಚಿ ಬೇರೆ ಇಲ್ಲ...’ ಆತನಲ್ಲಿನ ವಿಟ್ ಹಾಗೂ ಹಾಡಿನ ಧಾಟಿಯ ಖದರನ್ನು ಹೊರಹಾಕಿತು. ಎಚ್ಟುಓನಲ್ಲೂ ಉಪ್ಪಿ ಗಾಯನ ಮುಂದುವರೆಯಿತು. ಹರಿಹರನ್ ಎದುರು ನಿಂತು ಹಾಡಿ, ಅಚ್ಚರಿ ಹುಟ್ಟಿಸಿದರು.
ರಾಜ್ ಮೂರನೇ ಪುತ್ರ ಪುನೀತ್ ಬಾಲ ನಟನಷ್ಟೇ ಅಲ್ಲದೆ, ಬಾಲ ಗಾಯಕನಾಗಿಯೂ ಜನಮನದಲ್ಲಿ ನಿಂತಿದ್ದವ. ಇದೀಗ ಅಪ್ಪು ಮೂಲಕ ನಾಯಕನಾದಾಗ, ಗುರುಕಿರಣ್ ಇಚ್ಛೆಯ ಮೇರೆಗೆ ಒಂದು ಹಾಡನ್ನೂ ಹಾಡಿದರು(ತಾಲಿಬಾನ್ ಅಲ್ಲ ಅಲ್ಲ). ಚಿತ್ರದ ಸೂಪರ್ ಹಿಟ್ ಹಾಡಾಗಿ ಹೊಮ್ಮಿದ್ದು ಇದೊಂದೇ ಗೀತೆ. ಅಂದಹಾಗೆ, ಇಲ್ಲೂ ಉಪ್ಪಿ ವಿಟ್ ಇದೆ. ಸಾಹಿತ್ಯ ಉಪ್ಪಿಯದ್ದೇ!
ಈಗ ಹಾಡುವ ಸರದಿ ಸುದೀಪ್ದು. ಇಲ್ಲೂ ಸುದೀಪ್ಗೆ ಫುಲ್ಮಾರ್ಕ್ಸ್. ಅದರ ಕ್ರೆಡಿಟ್ಟು ಮಾತ್ರ ಗುರುಕಿರಣ್ಗೇ ಸಲ್ಲಬೇಕು. ಈ ಹಾಡಿನಲ್ಲೂ ಕಾಣುವುದು ಪಡ್ಡೆ ಹುಡುಗರನ್ನೇ ಟಾರ್ಗೆಟ್ ಆಡಿಯನ್ಸ್ ಆಗಿಸಿಕೊಂಡಿರುವುದು. ಟಿ.ಪಿ.ಕೈಲಾಸಂ ಹಾಗೂ ಜಿ.ಪಿ.ರಾಜರತ್ನಂ ತಮ್ಮ ಅನನ್ಯ ವಿಟ್ಗಳಿಂದಲೇ ಜನಮನದಲ್ಲಿ ಮನೆ ಮಾಡಿದವರು. ಈಗ ಕೂಡ ವಿಟ್ ಜಮಾನ. ಆದರೆ, ಈ ವಿಟ್ಗಳು ಹೆಚ್ಚು ಆರೋಗ್ಯಕರವಲ್ಲ ಎಂಬುದು ಬೇರೆ ವಿಷಯ. ಚಂದು ಚಿತ್ರದ ಟ್ರಂಪ್ಕಾರ್ಡ್ ಈ ಹಾಡು. ಈ ಹಾಡಿನ ಸಾಲುಗಳನ್ನು ಮೂಡಿಸರುವುದು ಡಾ. ನಾಗೇಂದ್ರ ಪ್ರಸಾದ್....
ಸೊಂಟದ ಇಸ್ಯ ಬ್ಯಾಡಮ್ಮ ಸಿಸ್ಯ
ಸೊಂಟಕಿಂತ ವಾಸಿ ಕಣೋ ಗುಂಡಿನ ದಾಸ್ಯ
ಸೊಂಟ ಸೂಪರ್ರು, ಆದ್ರೆ ಭಾರಿ ಡೇಂಜರ್ರು
ಸೊಂಟದ ಆಸುಪಾಸು ಇನ್ನು ಡೇಂಜರ್ರು !
ಪಡ್ಡೆ ಹುಡುಗರ ಗುಂಡು ಗೀತೆಯಾಗಿ ಈ ಹಾಡು ರೂಪುಗೊಳ್ಳುವ ಆತಂಕವಿದೆ. ಇಂಥಾ ಸಾಲುಗಳ ಬಗ್ಗೆ ಹಾಗೂ ಅನಾರೋಗ್ಯಕರ ವಿಟ್ಟಿ ಗೀತೆಗಳ ಬಗ್ಗೆ ನೀವೇನಂತೀರಿ?
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications