ಪ್ರಶಸ್ತಿ ಬಂದರೂ ಕಷ್ಟ ಸ್ವಾಮಿ- ಸೀತಾರಾಂ
ಯಾವುದೇ ಚಿತ್ರಕ್ಕೆ ಪ್ರಶಸ್ತಿ ಕೊಟ್ಟರೂ ಅದನ್ನು ಸಂಶಯದಿಂದ ನೋಡುವ ಪ್ರವೃತ್ತಿ ಹೆಚ್ಚಾಗುತ್ತಿದೆ ಎಂದು ‘ಮನ್ವಂತರ’ ಖ್ಯಾತಿಯ ನಿರ್ದೇಶಕ ಟಿ.ಎನ್. ಸೀತಾರಾಂ ಬೇಸರ ತೋಡಿಕೊಂಡರು.
ಬೆಂಗಳೂರಿನ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಭಾನುವಾರ (ಆ. 10) ಎನ್.ಎಸ್.ವಿ.ಕೆ. ಸಭಾಂಗಣದಲ್ಲಿ ಪ್ರಶಸ್ತಿ ವಿಜೇತ ನಿರ್ದೇಶಕ- ನಿರ್ಮಾಪಕರನ್ನು ಅಭಿನಂದಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೀತಾರಾಂ ಮಾತಾಡುತ್ತಿದ್ದರು. ಈಚೆಗೆ ಪ್ರಕಟವಾದ ರಾಷ್ಟ್ರೀಯ ಪ್ರಶಸ್ತಿಗಳೂ ವಿವಾದಕ್ಕೆ ಸಿಕ್ಕಿವೆ ಎಂದು ಸೀತಾರಾಂ ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಪ್ರಶಸ್ತಿ ಗೆದ್ದುಕೊಂಡ ನಿರ್ದೇಶಕರಾದ ಟಿ.ಎಸ್.ನಾಗಾಭರಣ (ಸಿಂಗಾರೆವ್ವ), ಪ್ರಕಾಶ ಬೆಳವಾಡಿ (ಸ್ಟಂಬಲ್) ಹಾಗೂ ಪನೋರಮಾಕ್ಕೆ ಆಯ್ಕೆಗಿರುವ ಮೌನಿ ಚಿತ್ರದ ನಿರ್ದೇಶಕ ಲಿಂಗದೇವರು ಮತ್ತು ಈ ಚಿತ್ರಗಳು ಗೌರವಕ್ಕೆ ಪಾತ್ರವಾಗಲು ಕಾರಣರಾದ ಕಲಾವಿದರನ್ನು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಸನ್ಮಾನಿಸಿತು.
ಸನ್ಮಾನ ಸ್ವೀಕರಿಸಿ ಮಾತಾಡಿದ ನಾಗಾಭರಣ, ಚಿತ್ರಕ್ಕೆ ಪ್ರಶಸ್ತಿ ಬಂದಿರುವುದು ಹೆಮ್ಮೆ ಅನ್ನುವುದಕ್ಕಿಂತ ಆತ್ಮಾವಲೋಕನಕ್ಕೆ ಇದು ಸಕಾಲವಾಗಿದೆ. ಸಮಸ್ಯೆಯ ಸುಳಿಯಲ್ಲಿ ಕನ್ನಡ ಚಿತ್ರೋದ್ಯಮ ಸಿಕ್ಕಿರುವ ಸಂದರ್ಭದಲ್ಲೇ ಮೂರು ಕನ್ನಡ ಚಿತ್ರಗಳಿಗೆ ರಾಷ್ಟ್ರ ಮನ್ನಣೆ ಸಿಕ್ಕಿದ್ದು ಗಮನಾರ್ಹ ಎಂದರು.
ಕಥಾವಸ್ತುವಿನ ಸಂಕೀರ್ಣತೆಯ ಕಾರಣ ತಾವು ಇಂಗ್ಲಿಷ್ ಚಿತ್ರವನ್ನು ತೆಗೆದದ್ದಾಗಿ ಪ್ರಕಾಶ್ ಬೆಳವಾಡಿ ಪುನರುಚ್ಚರಿಸಿದರು. ಕಿರುತೆರೆ ಹಾಗೂ ಬೆಳ್ಳಿತೆರೆಯ ಅನೇಕ ಕಲಾವಿದರು ಸಮಾರಂಭದಲ್ಲಿ ಭಾಗವಹಿಸಿದ್ದರು.
(ಇನ್ಫೋ ವಾರ್ತೆ)
ಸಿನಿಮಾ ಸಂಚಯ
ರಾಷ್ಟ್ರ ಪ್ರಶಸ್ತಿ ರೇಸಿನಲ್ಲಿ ಯಾಕೆ ಗೆಲ್ಲಲಿಲ್ಲ ?
ಪನೋರಮಾ ಅಂಗಳಕ್ಕೆ ‘ಮೌನಿ’
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications