ಪಾಂಡೆ ನೇತೃತ್ವದಲ್ಲಿ ಸಮಿತಿ ನೇಮಕ
ಬೆಂಗಳೂರು: ಕನ್ನಡ ಚಲನಚಿತ್ರ ರಂಗದಲ್ಲಿನ ಸಮಸ್ಯೆಗಳ ಅಧ್ಯಯನಕ್ಕೆ ರಾಜ್ಯ ಸರಕಾರ ಬುಧವಾರ ಸಮಿತಿಯಾಂದನ್ನು ರಚಿಸಿದೆ.
ರಾಜ್ಯಸರಕಾರದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ಪಾಂಡೆ ಅಧ್ಯಕ್ಷತೆಯಲ್ಲಿ ಸಮಿತಿ ಕಾರ್ಯನಿರ್ವಹಿಸಲಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವ ಸಿದ್ಧರಾಮಯ್ಯ ಹೇಳಿದ್ದಾರೆ.
ಸಿನಿಮಾ ಲೋಕದ ಸಮಸ್ಯೆಗಳು ಹಾಗೂ ಕನ್ನಡ ಚಿತ್ರರಂಗ ಎದುರಿಸುತ್ತಿರುವ ಸವಾಲುಗಳನ್ನು ಸಮಿತಿ ಆಧ್ಯಯನ ನಡೆಸಿ, ಸರಕಾರಕ್ಕೆ ತ್ವರಿತವಾಗಿ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ. ಚಿತ್ರರಂಗದ ಪ್ರಗತಿಗೆ ಪೂರಕವಾಗುವಂತೆ ಸರಕಾರ ನೀತಿ ರೂಪಿಸಲಿದೆ ಎಂದು ಸಿದ್ಧರಾಮಯ್ಯ ಸುದ್ದಿಗಾರಿಗೆ ತಿಳಿಸಿದ್ದಾರೆ.
ನಿರ್ಮಾಪಕರು, ನಿದೇಶಕರು, ಚಿತ್ರವಿತರಕರು ಮತ್ತಿತರ ಗಣ್ಯರನ್ನು ಸಮಿತಿ ಒಳಗೊಂಡಿರುತ್ತದೆ. ಚಿತ್ರರಂಗದ ಬಹುದಿನಗಳ ಬೇಡಿಕೆಗೆ ಸರಕಾರ ಸ್ಪಂದಿಸುತ್ತಿದೆ ಎಂದಿದ್ದಾರೆ.
ಮನರಂಜನಾ ತೆರಿಗೆ ಹೆಚ್ಚಳ, ಚಿತ್ರಮಂದಿರಗಳ ಕಿರಿಕಿರಿ, ಪರಭಾಷಾ ಚಿತ್ರಗಳ ಹಾವಳಿ ಸೇರಿದಂತೆ ಅನೇಕ ಸಮಸ್ಯೆಗಳನ್ನು ಬಿಂಬಿಸಿ ಸರಕಾರದ ಗಮನ ಸೆಳೆಯಲು ಸೋಮವಾರ (ಆ.9) ಕನ್ನಡ ಚಿತ್ರೋದ್ಯಮ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದ ಬೆನ್ನಲ್ಲಿಯೇ ಸರಕಾರ ಸಮಿತಿಯನ್ನು ರಚಿಸಿದೆ.
ಪಾರ್ವತಮ್ಮ ರಾಜ್ಕುಮಾರ್, ಎಸ್.ವಿ.ರಾಜೇಂದ್ರಸಿಂಗ್ ಬಾಬು, ಜೋಸೈಮನ್ ಸಮಿತಿಯಲ್ಲಿ ಚಿತ್ರೋದ್ಯಮವನ್ನು ಪ್ರತಿನಿಧಿಸಲಿರುವ ಪ್ರಮುಖರು ಎಂದು ಗಾಂಧಿನಗರದ ಮೂಲಗಳು ತಿಳಿಸಿವೆ.


Click it and Unblock the Notifications