'ಮುಂಗಾರು ಮಳೆ'ನಿರ್ಮಾಪಕರ 'ಮೊಗ್ಗಿನ ಮನಸು'ರೆಡಿ!
'ಮೊಗ್ಗಿನ ಮನಸು'ಚಿತ್ರೀಕರಣ ಮುಕ್ತಾಯಗೊಂಡಿದ್ದು, ಜನವರಿಯಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಇದು 'ಮುಂಗಾರು ಮಳೆ' ನಿರ್ಮಾಪಕ ಇ.ಕೃಷ್ಣಪ್ಪ ನಿರ್ಮಾಣದ ಎರಡನೇ ಚಿತ್ರ. ಹೊಸಬರನ್ನು ಬೆಳೆಸುವ ಏಕ ವಾರ್ಷಿಕ ಯೋಜನೆ ಇಟ್ಟುಕೊಂಡಿರುವ ಕೃಷ್ಣಪ್ಪ, ಈ ಚಿತ್ರದಲ್ಲಿ ಹೊಸಬರಿಗೆ ಮಣೆ ಹಾಕಿದ್ದಾರೆ. ಇನ್ನಷ್ಟು ಗಣೇಶ್, ಯೋಗರಾಜ್ ಭಟ್ ರಂಥವರನ್ನು ಸೃಷ್ಟಿಸುವ ವಿಶ್ವಾಸ ಅವರದು.
'ಚಂಡ'ಚಿತ್ರದ ಮುಖಾಂತರ ಗಮನ ಸೆಳೆದ ಶುಭಾ ಪೂಂಜಾ ಈ ಚಿತ್ರದಲ್ಲಿದ್ದಾರೆ. ರಾಧಿಕಾ ಪಂಡಿತ್, ಸಂಗೀತಾ ಶೆಟ್ಟಿ, ಮಾನಸಿ ಚಿತ್ರದ ನಾಯಕಿಯರು. ಯಶ್, ಸ್ಕಂಧಾ, ಮನೋಜ್, ಹರ್ಷ ಮತ್ತು ಜೆಡಿ ನಾಗರಾಜ್ ಎಂಬ ಹೊಸ ನಾಯಕರು ನಾಯಕರು. ಇವರ ಜೊತೆಗೆ ಅವಿನಾಶ್, ಭವ್ಯ, ಅಚ್ಯುತ ರಾವ್, ಸುಧಾ ಬೆಳವಾಡಿ ತಾರಾಗಣದಲ್ಲಿರುವ ಪ್ರಮುಖರು.
ಮನೋಮೂರ್ತಿ ಸುಮಧುರ ಸಂಗೀತ ನೀಡಿದ್ದು, ಶಶಾಂಕ್ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಈ ಹಿಂದೆ ಪ್ರಜ್ವಲ್ ಗಾಗಿ 'ಸಿಕ್ಸರ್'ಚಿತ್ರವನ್ನು ಅವರು ನಿರ್ದೇಶಿಸಿದ್ದರು. ಚಿತ್ರ ಪೂರ್ಣಗೊಳ್ಳುವ ಮುನ್ನವೇ ನಿರ್ದೇಶಕರು, ಕತೆ ಕದ್ದ ಆರೋಪಕ್ಕೆ ಗುರಿಯಾಗಿದ್ದಾರೆ. ನನ್ನ ಕತೆಯನ್ನು ಶಶಾಂಕ್ ಕದ್ದಿದ್ದಾರೆ. ಚಿತ್ರೀಕರಣದ ವಿವರಗಳನ್ನು ಗಮನಿಸಿದರೆ, ನನ್ನ ಕತೆಗೂ ಚಿತ್ರಕ್ಕೂ ಹೋಲಿಕೆ ಇರುವುದು ಸ್ಪಷ್ಟವಾಗಿದೆ ಎಂದಿರುವ ರಾಜೇಂದ್ರ ಸಿಂಗ್ ಬಾಬು, ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿದ್ದಾರೆ.
(ದಟ್ಸ್ ಕನ್ನಡ ಸಿನಿವಾರ್ತೆ)


Click it and Unblock the Notifications