ಹೆಸರಘಟ್ಟ ತೋಟದಲ್ಲಿ ‘ಮೌನಿ’ ಮುಹೂರ್ತ
ಡಾ.ಯು.ಆರ್.ಅನಂತ ಮೂರ್ತಿ ವಿದೇಶಿ ಪ್ರವಾಸದಲ್ಲಿರುವಾಗಲೇ ಅವರ ಸಣ್ಣಕತೆ ಆಧಾರಿತ 'ಮೌನಿ" ಸಿನಿಮಾದ ಮುಹೂರ್ತ ನೆರವೇರಿದೆ.
ಡಿಸೆಂಬರ್ 9ನೇ ತಾರೀಕು ಹೆಸರಘಟ್ಟದ ತೋಟವೊಂದರಲ್ಲಿ ತಣ್ಣಗಿನ ಕಾರ್ಯಕ್ರಮದಲ್ಲಿ ಸಿನಿಮಾ ಸೆಟ್ಟೇರಿತು. ಅನಂತ ಮೂರ್ತಿಯವರ ಕಾದಂಬರಿ ಆಧಾರಿತ 'ಸಂಸ್ಕಾರ" ಸಿನಿಮಾ ಮೂಲಕ ಆಗ ಸದ್ದು ಮಾಡಿದ್ದ ಪಟ್ಟಾಭಿರಾಮ ರೆಡ್ಡಿ ಚಿತ್ರಕ್ಕೆ ಕ್ಲಾಪ್ ಮಾಡಿದರು.
ಧಾರಾವಾಹಿಗಳ ನಿರ್ದೇಶನದಲ್ಲಿ ಪಳಗಿರುವ ಬಿ.ಎಸ್.ಲಿಂಗದೇವರು 'ಮೌನಿ" ಮೂಲಕ ಬೆಳ್ಳಿತೆರೆ ನಿರ್ದೇಶನಕ್ಕೆ ಕಾಲಿಡುತ್ತಿದ್ದಾರೆ. ಅನಂತಮೂರ್ತಿ ಕತೆ ಸಿಕ್ಕಿರುವುದು ಲಿಂಗೇವರು ಚೊಚ್ಚಲ ಯತ್ನಕ್ಕೆ ಬೋನಸ್ಸು. 'ದ್ವೀಪ" ಚಿತ್ರದಲ್ಲಿ ಮಳೆ ತೋರಿಸುವಲ್ಲಿ ಕೈಚಳಕ ಮೆರೆದ ಪ್ರಶಸ್ತಿ ವಿಜೇತ ಎಚ್.ರಾಮಚಂದ್ರ ಛಾಯಾಗ್ರಹಣ ಇರುವ 'ಮೌನಿ"ಯಲ್ಲಿ ಒಂದು ಭಜನೆ ಹೊರತುಪಡಿಸಿ ಯಾವುದೇ ಹಾಡುಗಳು ಇರುವುದಿಲ್ಲ.
ಕನ್ನಡಪ್ರಭ ಪತ್ರಿಕೆಯಲ್ಲಿ ಸಹಾಯಕ ಸಂಪಾದಕರಾಗಿರುವ ಕತೆಗಾರ ಜಿ.ಎಸ್.ಸದಾಶಿವ ಹಾಗೂ ತಂಡದ 'ಕಲಾತ್ಮಕ ಸಹಭಾಗಿತ್ವ"ದಲ್ಲಿ ಮೌನಿಯ ಸಂಭಾಷಣೆ ಸಿದ್ಧವಾಗಿದೆ.
ಹಾಲಿವುಡ್ ಕುಖ್ಯಾತಿಯ ಅನಂತನಾಗ್, 'ಕಪಿನಿಪತಿ" ಖ್ಯಾತಿಯ ಎಚ್.ಜಿ.ದತ್ತಾತ್ರೇಯ, 'ಗೃಹಭಂಗ"ದ ಗಯ್ಯಾಳಿ ಪಾತ್ರದಲ್ಲಿ ಮಿಂಚುತ್ತಿರುವ ಲಕ್ಷ್ಮಿ ಚಂದ್ರಶೇಖರ್, ಪದ್ಮಜಾ ಶ್ರೀನಿವಾಸ್ ಚಿತ್ರದ ಮುಖ್ಯ ತಾರಾಮುಖಗಳು.(ಇನ್ಫೋ ವಾರ್ತೆ)


Click it and Unblock the Notifications