ಚಿತ್ರಶಿಲ್ಪಿ ಬಿಂಡಿಗನವಿಲೆ ಶ್ರೀನಿವಾಸ ರಂಗಾ ವಿಧಿವಶ

ಬೆಂಗಳೂರಿನ ಮಾಗಡಿಯಲ್ಲಿ ನವೆಂಬರ್ 11, 1917ರಲ್ಲಿ ಜನಿಸಿದ ರಂಗಾ ಅವರಿಗೆ ಬಾಲ್ಯದಿಂದಲೂ ಫೋಟೋಗ್ರಾಫಿಯ ಮೇಲೆ ಆಸಕ್ತಿಯಿತ್ತು. ಆಗಿನ ಕಾಲಕ್ಕೆ ದುಬಾರಿ ಹವ್ಯಾಸ ಎನ್ನಬಹುದಾದ ಫೋಟೋಗ್ರಾಫಿಯನ್ನು ಸ್ವಂತ ಪರಿಶ್ರಮದಿಂದ ರಂಗಾ ಕಲಿತರು. 17 ನೇ ವಯಸ್ಸಿಗೆ ಲಂಡನ್ನಿನ ರಾಯಲ್ ಫೋಟೋಗ್ರಾಫಿ ಸೊಸೈಟಿಯ ಫೆಲೋಶಿಫ್ ಪಡೆದ ಕೀರ್ತಿ ಹೊಂದಿದರು.
ಮುಂಬೈನ ಖ್ಯಾತ ಛಾಯಾಗ್ರಾಹಕ, ತಂತ್ರಜ್ಞ ಕೃಷ್ಣ ಗೋಪಾಲ್ ಅವರ ಬಳಿ ಶಿಷ್ಯ ವೃತ್ತಿ ಆರಂಭಿಸಿದ ರಂಗಾ, ಮುಂದೆ ಐದು ದಶಕಗಳ ಕಾಲ ಸಿನಿಮಾ ರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಸಿನಿಮಾಟೋಗ್ರಾಫರ್, ನಿರ್ದೇಶಕ, ನಿರ್ಮಾಪಕ, ಲ್ಯಾಬ್ ಮಾಲೀಕ, ಸ್ಟಡಿಯೋ ಮಾಲೀಕ, ವಿತರಕ ಹಾಗೂ ಕಥೆಗಾರರಾಗಿ ಕೂಡಾ ರಂಗಾ ಕಾರ್ಯ ನಿರ್ವಹಿಸಿದರು.
ವಿಕ್ರಮ್ ಪ್ರೊಡಕ್ಷನ್ ಸಂಸ್ಥೆ ಮೂಲಕ ಸಿನಿಮಾಗಳನ್ನು ನಿರ್ಮಿಸಿದ ತೊಡಗಿದ ರಂಗಾ ಅವರು 60 ಹಾಗೂ 70 ರ ದಶಕದವನ್ನು ಆಳಿದರು. ಕನ್ನಡದಲ್ಲಿ ಭಕ್ತ ಮಾರ್ಕಂಡೇಯ ಇವರು ನಿರ್ದೇಶಿಸಿದ ಮೊದಲ ಚಲನಚಿತ್ರ. ನಂತರ ಚಂದ್ರಹಾಸ, ಮಿಸ್ಟರ್ ರಾಜ್ ಕುಮಾರ್, ಭಲೇ ಬಸವ, ಸಿಡಿಲ ಮರಿ, ಭಾಗ್ಯವಂತ ಮುಂತಾದ ಯಶಸ್ವಿ ಚಿತ್ರಗಳನ್ನು ನೀಡಿ ಜನಮನ ಗೆದ್ದರು. 1964 ರಲ್ಲಿ ತೆರೆಗೆ ಬಂದ "ಅಮರ ಶಿಲ್ಪಿ ಜಕಣಾಚರಿ" ವರ್ಣಚಿತ್ರ ನಿರ್ಮಿಸಿ ದಾಖಲೆ ಮೆರೆದರು.
ಡಾ. ರಾಜ್ ಕುಮಾರ್, ಎಂಜಿ ರಾಮಚಂದ್ರನ್ , ಎನ್ ಟಿ ರಾಮರಾವ್ , ಅಕ್ಕಿನೇನಿ ನಾಗೇಶ್ವರ ರಾವ್, ಶಿವಾಜಿ ಗಣೇಶನ್ ಮುಂತಾದ ಸಿನಿ ದಿಗ್ಗಜರನ್ನು ನಿರ್ದೇಶಿಸಿದ ಖ್ಯಾತಿ ಬಿಎಸ್ ರಂಗಾ ಅವರಿಗಿತ್ತು. ಬೆಂಗಳೂರಿನ ವಸಂತ್ ಸ್ಟುಡಿಯೋ ಮಾಲೀಕ ನಿರ್ಮಾಪಕ ವಸಂತ್ ಅವರು ರಂಗಾ ಅವರ ಪುತ್ರ. ರಂಗಾ ಅವರ ನಿಧನಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ದೇಶಕರ ಸಂಘ, ಕಲಾವಿದರ ಸಂಘ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.


Click it and Unblock the Notifications











