ಜನರ ಬಳಿಗೆ ಸಿನೆಮಾ ಕೊಂಡೊಯ್ಯುವೆ

ವಾಣಿಜ್ಯ ಮಂಡಳಿಯ ಅಧ್ಯಕ್ಷ ಗದ್ದಿಗೇರಿದ ನಂತರ ಇಂದು ಮಂಡಳಿ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ, ಕನ್ನಡ ಚಿತ್ರ ಮತ್ತು ಚಿತ್ರರಂಗದ ಉದ್ಧಾರಕ್ಕಾಗಿ ಮುಂದೆ ಕೈಗೊಳ್ಳಲಿರುವ ಯೋಜನೆ ಮತ್ತು ಕನಸುಗಳನ್ನು ಪತ್ರಕರ್ತರ ಮುಂದೆ ಬಿಚ್ಚಿಟ್ಟರು.
ಕರ್ನಾಟಕದಲ್ಲಿ ನಿರ್ಮಿಸಲಾಗುವ ಹೊಚ್ಚಹೊಸ ಮಿನಿ ಥಿಯೇಟರುಗಳಿಗೆ ಜನತಾ ಥಿಯೇಟರ್ ಎಂದು ನಾಮಕರಣ ಮಾಡಲಾಗುವುದು. ಜನರ ಬಳಿಗೆ ಕನ್ನಡ ಚಿತ್ರರಂಗಗಳನ್ನು ಒಯ್ಯಲು ಈ ಯೋಜನೆ ಸಹಕಾರಿಯಾಗಲಿದೆ. ಈ ಮಹತ್ತರ ಯೋಜನೆಗಾಗಿ ಸಹಾಯಧನ ನೀಡುವುದಾಗಿ ಸರಕಾರ ಕೂಡ ವಾಗ್ದಾನ ನೀಡಿದೆ. ಇನ್ನು ಒಂದೂವರೆ ವರ್ಷದಲ್ಲಿ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದು ಪಾಟೀಲ್ ತಿಳಿಸಿದರು.
ಪೈರಸಿ ಹಾವಳಿಯನ್ನು ತಡೆಗಟ್ಟಲು ಗೂಂಡಾ ಕಾಯ್ದಿ ಜಾರಿಯಲ್ಲಿದ್ದರೂ ಇನ್ನು ಮುಂದೆ ಪೈರಸಿಯಂಥ ಕೃತ್ಯಕ್ಕೆ ಕೈಹಾಕುವವರ ಮೇಲೆ ಪೊಲೀಸರ ಸಹಾಯದಿಂದ ಮಂಡಳಿಯೇ ಸ್ವತಃ ದಾಳಿ ಮಾಡಲಿದೆ ಎಂದು ಅವರು ಹೇಳಿದರು.
ಜೂನ್ 16, 17 ಮತ್ತು 18ರಂದು ರಾಜ್ಯದಲ್ಲಿ ಜರುಗುತ್ತಿರುವ ಕೆಂಪೇಗೌಡ ಉತ್ಸವದ ಸಂದರ್ಭದಲ್ಲಿ ಜೂನ್ 17ರಂದು ದಸರಾ ಉತ್ಸವದ ಮಾದರಿಯಲ್ಲಿ ಕನ್ನಡ ಚಿತ್ರರಂಗದ ಉತ್ಸವವನ್ನು ಬೃಹತ್ ಪ್ರಮಾಣದಲ್ಲಿ ಆಯೋಜಿಸಲಾಗುವುದು. ಅಂದಿನ ದಿನವನ್ನು ಸಂಪೂರ್ಣವಾಗಿ ಕನ್ನಡದ ಚಟುವಟಿಕೆಗಳಿಗೆ ಮೀಸಲಿಡಲಾಗುವುದು ಎಂದು ಪಾಟೀಲರು ಭವಿಷ್ಯದ ಯೋಜನೆಗಳ ಬಗ್ಗೆ ವಿವರಿಸಿದರು.
ಕರ್ನಾಟಕದ ಪ್ರವಾಸೋದ್ಯಮ ನೀತಿಯಂತೆ ಕನ್ನಡ ಚಲನಚಿತ್ರ ನೀತಿಯನ್ನು ರೂಪಿಸಬೇಕೆಂದು ರಾಜ್ಯ ಸರಕಾರವನ್ನು ಕೋರಲಾಗಿದೆ. ಇದಕ್ಕೂ ಯಡಿಯೂರಪ್ಪ ಸರಕಾರದಿಂದ ಸಕಾರಾತ್ಮಕ ಭರವಸೆ ಬಂದಿದೆ ಎಂದು ಬಸಂತಕುಮಾರ್ ನುಡಿದರು. ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ಕೆ. ಮಂಜು ಮತ್ತು ಮಂಡಳಿಯ ಇತರ ಪದಾಧಿಕಾರಿಗಳು ಹಾಜರಿದ್ದರು.


Click it and Unblock the Notifications











