ಧಿಮಾಕು:ಅಪ್ಪನಿಗೆ ಕನಸು, ನವೀನ್ ಕೃಷ್ಣಗೆ ಪರೀಕ್ಷೆ!
ಪ್ರಬುದ್ಧ ಪೋಷಕ ನಟ ಶ್ರೀನಿವಾಸ ಮೂರ್ತಿ ಅವರ ಪುತ್ರ ನವೀನ್ ಕೃಷ್ಣರ 'ಧಿಮಾಕು' ಸೆ.11ರಂದು ಕರ್ನಾಟಕದಾದ್ಯಂತ 11 ಪ್ರಿಂಟ್ ಗಳೊಂದಿಗೆ 20 ಚಿತ್ರಮಂದಿರಗಳಿಗೆ ಲಗ್ಗೆಯಾಕಿದೆ.ಈ ಚಿತ್ರವನ್ನು ಗೆದ್ದೇ ಗೆಲ್ಲಿಸಬೇಕೆಂದು ಹಟತೊಟ್ಟಿದ್ದಾರೆ ನವೀನ್.
ಪ್ರೇಕ್ಷಕರು ಕೊಡುವ ಹಣಕ್ಕೆ ಮೋಸ ಮಾಡುವುದಿಲ್ಲ, ಅಷ್ಟು ನೀಟಾಗಿ ನಾವು ಸಿನಿಮಾ ಮಾಡಿದ್ದೇವೆ ಎಂಬ ಭರವಸೆ ನೀಡುತ್ತಾರೆ ನವೀನ್ ಕೃಷ್ಣ. ಸುಮಾರು 15 ಮಂದಿಯ ತಂಡ ಕಟ್ಟಿಕೊಂಡು ಮೈಸೂರು, ತುಮಕೂರು, ಬೆಂಗಳೂರಿನಲ್ಲಿ ಸುತ್ತಿ ಪ್ರಚಾರ ಮಾಡುತ್ತಿದ್ದೇವೆ. ಇಡೀ ತಂಡ ಪ್ರೀತಿಯಿಂದ ಕೆಲಸ ಮಾಡುತ್ತಿದೆ. ನನ್ನ ಅಮ್ಮ ದುಡಿದ ಹಣವನ್ನೇಲ್ಲಾ ನನಗೆ ಕೊಟ್ಟಿದ್ದಾರೆ. ಅವರಿಗಾದರೂ ಈ ಚಿತ್ರ ಗೆಲ್ಲಲೇಬೇಕು ಎಂದು ನವೀನ್ ಭಾವುಕರಾಗುತ್ತಾರೆ.
'ಧಿಮಾಕು' ಬರೀ ಒಂದು ಚಿತ್ರವಷ್ಟೇ ಅಲ್ಲ, ಶ್ರೀನಿವಾಸಮೂರ್ತಿ ಕನಸು. ನವೀನ್ ಕೃಷ್ಣ ಅವರಿಗೆ ಅಗ್ನಿ ಪರೀಕ್ಷೆ. ಅವರ ಮುಂದಿನ ಭವಿಷ್ಯ ರೂಪಿಸುವ ಪೂರ್ವಭಾವಿ ಪರೀಕ್ಷೆ. ಕಳೆದ ಒಂದೂವರೆ ವರ್ಷದಿಂದ ಹರಿಸಿದ ಬೆವರಿಗೆ ಪ್ರೇಕ್ಷಕ ಬೆಲೆ ಕಟ್ಟುವ ಸಮಯ. ಮಗನನ್ನು ಹೇಗಾದರೂ ಮಾಡಿ ಸ್ಟಾರ್ ಮಾಡಲು ಇಡೀ ಕುಟುಂಬ ಹಗಲು ರಾತ್ರಿ ಹೆಣಗಿದೆ. ಚಿತ್ರರಂಗದಲ್ಲಿ ಪ್ರತಿಭೆಯೊಂದಿದ್ದರೆ ಸಾಕು ಚಿತ್ರ ಗೆದ್ದೇ ಗೆಲ್ಲುತ್ತದೆ ಎನ್ನುವುದು ಅರ್ಧ ಸತ್ಯ ಮಾತ್ರ. ಪ್ರತಿಭೆಗೆ ಒಂಚೂರು ಲಕ್ ಜೊತೆಯಾದರೆ ಏನೆಲ್ಲಾ ಅದ್ಭುತಗಳನ್ನು ಮಾಡಬಹುದು ಎಂಬುದು ಸಂಪೂರ್ಣ ಸತ್ಯ ಎನ್ನುವುದು ತಿಳಿದವರ ಅಭಿಮತ.
ನವೀನ್ ಇದುವರೆಗೂ ನಟಿಸಿರುವ ಚಿತ್ರಗಳಲ್ಲಿ ಪಾತ್ರ ಚಿಕ್ಕದಾದರೂ ದೊಡ್ಡದಾದರೂ ಜೀವ ತುಂಬಿದ್ದಾರೆ. ಅಭಿನಯ ಅನ್ನುವುದು ರಕ್ತದಲ್ಲೇ ಬೆರೆತಿದೆ. ಈಗಾಗಲೇ ಚಿತ್ರ ನೋಡಿದವರು 'ಧಿಮಾಕಿ'ನ ಚುರುಕು ಸಂಭಾಷಣೆ, ನಿರೂಪಣೆಯ ವೇಗಕ್ಕೆ ಮನಸೋತಿದ್ದಾರೆ. ನವೀನ್ ಕೃಷ್ಣ ಅವರ ನಟನೆಯನ್ನು ಮೆಚ್ಚಿ ಬೆನ್ನುತಟ್ಟಿದ್ದಾರೆ. ನವೀನ್ ಕೃಷ್ಣ ಭವಿಷ್ಯ ಎಲ್ಲಾ ಆ ಪ್ರೇಕ್ಷಕ ಪ್ರಭುವಿನ ಕೈಯಲ್ಲೇ ಇದೆ. ಚಿತ್ರದ ತಾರಾಬಳಗದಲ್ಲಿ ನವೀನ್ಕೃಷ್ಣ, ಆಶಾ ಸೈನಿ (ಮಯೂರಿ), ಪಾವನಿ, ರಂಗಾಯಣರಘು, ಸುಧಾಬೆಳವಾಡಿ, ಗಿರಿ, ವಿಶಾಲ್ರಾಘವೇಂದ್ರ, ಶರಣ್ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಸಿನಿವಾರ್ತೆ)
ಗ್ಯಾಲರಿ: ಧಿಮಾಕು ಚಿತ್ರದ ಶುಭಾರಂಭ
ಪಿಯುಸಿ,'ಧಿಮಾಕು' ತೆರೆಗೆ ಬರಲು ಸಿದ್ದ


Click it and Unblock the Notifications