ಫಿಲಂ ಚೇಂಬರ್ ಸದಸ್ಯರಿಗೆ ಬೆಂಡೆತ್ತಿದ ಎಂಎಸ್ ಸತ್ಯು
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರನ್ನು ಖ್ಯಾತ ನಿರ್ದೇಶಕ ಎಂಎಸ್ ಸತ್ಯು ಬೆಂಡೆತ್ತಿದ್ದಾರೆ. ಫಿಲಂ ಚೇಂಬರ್ ಸದಸ್ಯರ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದು ಕಲಾತ್ಮಕ ಚಿತ್ರಗಳನ್ನು ಕಡೆಗಣಿಸುತ್ತಿರುವ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಹೊಸ ರಕ್ತ ಹರಿಯುತ್ತಿಲ್ಲ. ಪ್ರತಿ ವರ್ಷ ಅದೇ ಅದೇ ಮುಖಗಳು. ಇವರಿಗೆ ಪರಭಾಷಾ ಚಿತ್ರಗಳ ಮೇಲಿನ ಮಮಕಾರ ಮಾತೃಭಾಷೆಯ ಚಿತ್ರಗಳ ಮೇಲಿಲ್ಲ. ಅತ್ಯುತ್ತಮ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಪಿ.ಶೇಷಾದ್ರಿ ಅಂತಹವರನ್ನು ಫಿಲಂ ಚೇಂಬರ್ ಕಡೆಗಣಿಸುತ್ತಿದೆ ಎಂದು ಸತ್ಯು ಬೇಸರಿಸಿಕೊಂಡಿದ್ದಾರೆ.
ಕನ್ನಡದಲ್ಲಿ ನಿರ್ಮಾಣವಾದ ಅತ್ಯುತ್ತಮ ಚಿತ್ರಗಳು ಚಿತ್ರಮಂದಿರ ಸಮಸ್ಯೆಯನು ಎದುರಿಸುತ್ತಿವೆ. ಇದನ್ನು ಪರಿಹರಿಸುವ ಪ್ರಯತ್ನವನ್ನು ಫಿಲಂ ಚೇಂಬರ್ ಮಾಡುತ್ತಿಲ್ಲ. ರೀಮೇಕ್ ಚಿತ್ರಗಳಿಗೆ ಇವರು ರತ್ನಗಂಬಳಿ ಸ್ವಾಗತ ಕೋರುತ್ತಿದ್ದಾರೆ. ಆದರೆ ಕಲಾತ್ಮಕ ಚಿತ್ರಗಳಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಎಂದಿರುವ ಸತ್ಯು ಫಿಲಂ ಚೇಂಬರ್ ಸದಸ್ಯರನ್ನು 'ಪುಂಡರು' ಎಂದೂ ಜರಿದಿದ್ದಾರೆ. (ಏಜೆನ್ಸೀಸ್)


Click it and Unblock the Notifications











