ಕಲಾಸಿಪಾಳ್ಯ ಬಾರ್ ನಲ್ಲಿ ರಜನಿಕಾಂತ್
ರಜನಿಕಾಂತ್ ಸಿನಿಮಾ ಹೇಗೆ ದೇಶಾದ್ಯಂತ ಸುದ್ದಿ ಮಾಡುತ್ತದೆಯೋ ಹಾಗೆಯೇ ಅದೇ ರಜನಿ ಬೆಂಗಳೂರಿನಲ್ಲಿ ಆಗ ಈಗ ಮಾರುವೇಷದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಸುದ್ದಿಯೂ ಆಗೀಗ ಸುದ್ದಿಯಾಗುತ್ತದೆ!
ಇದೇ ರಜನಿಕಾಂತ್ ಮೊನ್ನೆ ಮೊನ್ನೆ ಮತ್ತೆಗುಟ್ಟಾಗಿ ಬೆಂಗಳೂರಿಗೆ ಬಂದುಹೋಗಿದ್ದಾರೆ.ಅವರು ಕಲಾಸಿ ಪಾಳ್ಯದ ಬಸ್ ಸ್ಟ್ಯಾಂಡ್ ಪಕ್ಕ ಇರುವ ಅಶ್ವಿನಿ ಬಾರ್ ಅಂಡ್ ರೆಸ್ಟೋರೆಂಟ್ಗೆ ದಿಢೀರ್ ಭೇಟಿ ಕೊಟ್ಟು ಹತ್ತೇ ಹತ್ತು ನಿಮಿಷಗಳಲ್ಲಿ ಅದೃಶ್ಯವಾಗಿದ್ದಾರೆ!
ಬಂದಿದ್ದು ಈ ಕಾರಣಕ್ಕೆ! ಮೂರು ದಿನಗಳ ಹಿಂದೆ ರಜನಿ ಮತ್ತು ಅವರ ಆಪ್ತಗೆಳೆಯ ರಾಜ್ ಬಹದ್ದೂರ್ ಸೇರಿ ಮಂತ್ರಾಲಯಕ್ಕೆ ಹೋಗಿಬಂದರು. ಮನಸ್ಸು ಬಂದಾಗ ಬೆಂಗಳೂರಿನ ಗಾಲ್ ಕೋರ್ಸ್ ಸಮೀಪ ಇರುವ ಫ್ಲ್ಯಾಟ್ಗೆ ಬಂದು, ತನ್ನ ಗೆಳೆಯರ ಬಳಗವನ್ನು ಒಟ್ಟುಗೂಡಿಸಿ, ರಾಯರ ಸನ್ನಿಧಿಗೆ ತೆರಳುವುದು ಅವರ ವಾಡಿಕೆ.
ಮೊನ್ನೆಯೂ ಅವರು ಹಾಗೆಯೇ ಮಾಡಿದ್ದಾರೆ. ನಾಲ್ಕು ದಿನದ ಮಂತ್ರಾಲಯ ಪ್ರಯಾಣದಲ್ಲಿ ಮಾರ್ಗಮಧ್ಯೆ ಆನಂದಪುರದಲ್ಲಿ ಒಂದು ದಿನ ಹಾಲ್ಟ್ ಆಗಿ, ಮತ್ತೆ ಪ್ರಯಾಣ ಮುಂದುವರಿಸಿದ್ದಾರೆ. ಹಿಂದಿರುಗಿ ಬರುವಾಗ ಅದೋನಿಯಲ್ಲಿ ಒಂದು ದಿನ ವಿಶ್ರಾಂತಿ ಪಡೆದಿದ್ದಾರೆ.
ಮಂತ್ರಾಲಯ ಟ್ರಿಪ್ ಮುಗಿಸಿಬಂದ ರಜನಿಯನ್ನು ಅವರ ಬಾಲ್ಯದ ಸ್ನೇಹಿತ ಕಮ್ ಹತ್ತಿರದ ಸಂಬಂಧಿ ಗೋಪೀನಾಥ್ ತಮ್ಮ ಬಾರ್ ಅಂಡ್ ರೆಸ್ಟೋರೆಂಟ್ಗೆ ಭೇಟಿ ಕೊಡುವಂತೆ ಕೇಳಿಕೊಂಡರು. ಎಷ್ಟೆಂದರೂ ಹಳೇ ದೋಸ್ತಿ. ಅಂದ ಕಾಲತ್ತಿಲೈ ರಜನಿ ಬಸ್ ಕಂಡಕ್ಟರ್ ಆಗಿದ್ದಾಗ ಇದೇ ರೆಸ್ಟೋರೆಂಟ್ನಲ್ಲಿ ಊಟ ತಿಂಡಿ ಮಾಡಿದ್ದನ್ನು ಎಲ್ಲಾದರೂ ಮರೆಯುವುದುಂಟೇ?
ಮೊದಲೇ ಹಳೇ ಗೆಳೆಯರೆಂದರೆ ರಜನಿಗೆ ಪ್ರಾಣ. ಗೋಪಿಯವರು ಮಾತು ಮುಗಿಸುವ ಮುನ್ನವೇ 'ನಡೀ ಗೆಳೆಯಾ' ಎಂದು ಹಾಡುಹಗಲೇ ಹೊರಟುಬಿಟ್ಟಿದ್ದಾರೆ ರಜನಿ! ಒಂದು ಮಾಮೂಲಿ ಕಾರಿನಲ್ಲಿ ಬಂದು, ರೆಸ್ಟೋರೆಂಟ್ ಮುಂಭಾಗದಲ್ಲಿ ಇಳಿದ ರಜನಿ, ಸೀದಾ ಹೋಗಿ, ಕ್ಯಾಶ್ ಕೌಂಟರ್ ಮೇಲೆ ಎರಡು ನಿಮಿಷ ಕೂತರು.
| ಹತ್ತು ನಿಮಿಷಕ್ಕೆ ರಜನಿ ಪಡೆಯುವ ಸಂಭಾವನೆ ಬರೋಬ್ಬರಿ ಐವತ್ತು ಲಕ್ಷ. | |
ವಿಡಿಯೋಗೆ ಡಿಮ್ಯಾಂಡಪ್ಪೊ ಡಿಮ್ಯಾಂಡ್: ಅದಕ್ಕಿಂತ ಗಮ್ಮತ್ತಿನ ವಿಷಯ ಏನಪ್ಪಾ ಅಂದ್ರೆ... ಅದೇ ಬಾರ್ ಅಂಡ್ ರೆಸ್ಟೋರೆಂಟ್ನ ಕೆಲ ಹುಡುಗರು ರಜನಿ ಬರುವ ವಿಷಯ ಗೊತ್ತಾಗಿ, ತಮ್ಮ ಪಾಡಿಗೆ ತಾವು ಅವರು ಓಡಾಡಿ, ಮಾತನಾಡಿದ ದೃಶ್ಯಗಳನ್ನು ವೀಡಿಯೋ ಮಾಡಿಕೊಂಡಿದ್ದಾರೆ.
ರಜನಿ ಹೊರಟುಹೋದ ಮೇಲೆ ಆ ಹುಡುಗರೆಲ್ಲ ಸೇರಿ, ಅದನ್ನು ಒಂದು ಸಿ.ಡಿ. ಮಾಡಿ, ಬಾರ್ನಲ್ಲಿರುವ ಟಿವಿಗೆ ರವಾನಿಸಿದ್ದಾರೆ. ಅಲ್ಲಿಗೆ ಬರುವವರಿಗೆಲ್ಲ ಈಗ ಹಬ್ಬವೋ ಹಬ್ಬ. ದಿವಸಕ್ಕೆ ಹತ್ತು ವಿಡಿಯೋ ನೋಡುವುದು, ಮತ್ತೆ ರಿಪೀಟ್ ಮಾಡುವುದು, ಮೂಗಿನ ಮೇಲೆ ಬೆರಳಿಡುವುದು...
ಒಬ್ಬ ಅಸಾಮಾನ್ಯ ಕಲಾವಿದ, ವಿಶ್ವದಾದ್ಯಂತ ಅಭಿಮಾನಿ ಬಳಗ ಹೊಂದಿರುವ ರಜನಿಯಂಥ ರಜನಿ ಬಂದು ಹೋದ ಜಾಗದ 'ಮದ್ಯ" ಕೂರುವುದೇ ಒಂದು ಭಾಗ್ಯ ಎನ್ನುವುದು ರೆಸ್ಟೋರೆಂಟ್ಗೆ ಬಂದುಹೋಗುವವರ ಹಾಲೀ ಅಭಿಪ್ರಾಯ. ಇಲ್ಲಿ ನಾವು ರಜನಿಗೆ ತನ್ನ ಬಾಲ್ಯದ ಗೆಳೆಯರ ಮೇಲೆ ಇರುವ ಪ್ರೀತಿ ಮತ್ತು ಅವರ ಸರಳತೆಯನ್ನು ಕಾಣಬಹುದು.
ನಿಮಗೆ ಗೊತ್ತಾ? ರಜನಿ ಕಾಲ್ಶೀಟ್ ಬೆಲೆಯನ್ನು ಕೂಡಿಸಿ, ಕಳೆದು, ಗುಣಿಸಿ, ಭಾಗಿಸಿದರೆ ಹತ್ತು ನಿಮಿಷಕ್ಕೆ ರಜನಿ ಪಡೆಯುವ ಸಂಭಾವನೆ ಬರೋಬ್ಬರಿ ಐವತ್ತು ಲಕ್ಷ. ಆ ಹತ್ತು ನಿಮಿಷವನ್ನು ಅವರು ಗೆಳೆಯ ಗೋಪಿನಾಥ್ಗಾಗಿ ಮೀಸಲಿಟ್ಟಿದ್ದಾರೆ. ಅದಪ್ಪ 'ಪಡಿಯಪ್ಪ' ಅಂದ್ರೆ! (ಸ್ನೇಹಸೇತು: ವಿಜಯ ಕರ್ನಾಟಕ)


Click it and Unblock the Notifications











