ವಿಷ್ಣುಗೆ ಪ್ರಶಸ್ತಿ ಕೊಡಿಸಲು ಸೋನಿಯಾಗಾಂಧಿ ಒಪ್ತಾರಾ?
ವಿಷ್ಣುವರ್ಧನ್ ಹೆಸರನ್ನು ಪ್ರತಿಷ್ಠಿತ ರಾಷ್ಟ್ರ ಪ್ರಶಸ್ತಿಗಳಿಗೆ ಶಿಫಾರಸು ಮಾಡಲಿಲ್ಲ ಎಂದು ಹಿರಿಯ ಅಭಿನೇತ್ರಿ ಬಿ ಸರೋಜಾದೇವಿ ಅವರು 'ಬೆಳ್ಳಿ ಹೆಜ್ಜೆ' ಕಾರ್ಯಕ್ರಮದಲ್ಲಿ ಬೇಸರ ವ್ಯಕ್ತಪಡಿಸಿದ್ದರು. ಈ ಮಾತಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ವಿರೋಧ ವ್ಯಕ್ತಪಡಿಸಿದ್ದರು. ಜಯಮಾಲಾ ಸಹ ಬೆಳ್ಳಿ ಹೆಜ್ಜೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಬಹಳಷ್ಟು ಸಲ ವಿಷ್ಣುವರ್ಧನ್ ಅವರ ಹೆಸರನ್ನು ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳಿಗಾಗಿ ಸರಕಾರಕ್ಕೆ ಶಿಫಾರಸು ಮಾಡಲಾಗಿತ್ತು. ಆದರೆ ಈ ರೀತಿ ಶಿಫಾರಸು ಮಾಡಿದಾಗಲೆಲ್ಲಾ ವಿಷ್ಣು ಅಡ್ಡ ಬರುತ್ತಿದ್ದರು ಎಂದು ಜಯಮಾಲಾ ಪ್ರತಿಕ್ರಿಯಿಸಿದ್ದಾರೆ. ವಿಷ್ಣು ಅವರಿಗೆ ಪದ್ಮಭೂಷಣ, ಪದ್ಮಶ್ರೀ ಪ್ರಶಸ್ತಿಗಳು ದೊರೆಯುವಂತೆ ನಮ್ಮ ಸಂಸದರು ಸಂಸತ್ತಿನಲ್ಲಿ ಪ್ರಯತ್ನಿಸಬೇಕು ಎಂದು ಸರೋಜಾದೇವಿ ಬೆಳ್ಳಿಹೆಜ್ಜೆಯಲ್ಲಿ ಮನವಿ ಮಾಡಿದ್ದಾರೆ.
ಇದಕ್ಕೆ ದನಿಗೂಡಿಸಿದ ಜಯಮಾಲಾ ಅವರು, ಸೋನಿಯಾಗಾಂಧಿ ಅವರ ಜೊತೆಗೆ ನಿಮಗೆ ಉತ್ತಮ ಬಾಂಧವ್ಯ ಇದೆ. ಈ ನೆಪದಲ್ಲಾದರೂ ವಿಷ್ಣು ಅವರಿಗೆ ಪ್ರಶಸ್ತಿ ಬರುವಂತೆ ಮಾಡಿ ಎಂದು ವಿನಂತಿಸಿಕೊಂಡರು. ಈ ಹಿಂದೆ ವಿಷ್ಣು ಅವರು ಪ್ರಶಸ್ತಿಗೆ ಶಿಫಾರಸು ಮಾಡಿ ಎಂದಾಗಲೆಲ್ಲಾ ಸ್ವ ವಿವರಗಳುಳ್ಳ ಪತ್ರವನ್ನು ಸರಕಾರಕ್ಕೆ ಸಲ್ಲಿಸಲು ನಿರಾಕರಿಸುತ್ತಿದ್ದರು. ಒಬ್ಬರ ಶಿಫಾರಸ್ಸಿನ ಮೂಲಕ ಬರುವ ಪ್ರಶಸ್ತಿ ನನಗೆ ಬೇಡ ಎಂಬ ಮೌಲ್ಯಗಳಿಗೆ ವಿಷ್ಣು ಕಟ್ಟುಬಿದ್ದಿದ್ದರು.


Click it and Unblock the Notifications











