ಜೂ.14ರಿಂದ ಜೀ ಕುಣಿಯೋಣ ಬಾರಾ ಭಾಗ-4
ಬೆಂಗಳೂರು, ಜೂ.12: 'ಕುಣಿಯೋಣು ಬಾರಾ'ದ ನಾಲ್ಕನೇ ಭಾಗದ ಆಯ್ಕೆ ಪ್ರಕ್ರಿಯೆ ಮುಗಿದಿದ್ದು, ಕರ್ನಾಟಕದ ವಿವಿಧೆಡೆಯಿಂದ ಸಾವಿರಕ್ಕೂ ಹೆಚ್ಚು ಆಕಾಂಕ್ಷಿಗಳು ಭಾಗವಹಿಸಿದ್ದರು. ಇವರಲ್ಲಿ 58 ಪುಟಾಣಿಗಳನ್ನು ಮೊದಲ ಹಂತದ ಆಯ್ಕೆ ಪ್ರಕ್ರಿಯೆಯಲ್ಲಿ ಆರಿಸಲಾಗಿದೆ. ಇವರಲ್ಲಿ 24 ಪ್ರತಿಭಾವಂತರನ್ನು ಸ್ಫರ್ಧೆಗೆ ಅಂತಿಮವಾಗಿ ಆಯ್ಕೆ ಮಾಡಲಾಗಿದೆ. 30 ಸಂಚಿಕೆಗಳಲ್ಲಿ ಪ್ರಸಾರವಾಗುತ್ತಿರುವ ಹೊಸ ಸಂಚಿಕೆಯ ಪ್ರಸಾರ ಇದೇ ಜೂ.14ರಿಂದ ಪ್ರಾರಂಭವಾಗಲಿದೆ.
"ಕರ್ನಾಟಕದ ಪುಟಾಣಿಗಳಲ್ಲಿಯ ಸಂಗೀತ ಪ್ರತಿಭೆಯನ್ನು ಈಗಾಗಲೇ ಸರಿಗಮಪ ಲಿಟ್ಲ್ ಚಾಂಪ್ಸ್ ಕಾರ್ಯಕ್ರಮದಿಂದ ಗುರುತಿಸಿರುವ ಜೀ ಕನ್ನಡ ಈಗ ಮಕ್ಕಳಲ್ಲಿರುವ ನೃತ್ಯ ಪ್ರತಿಭೆಯ ಅನಾವರಣಕ್ಕೆ ಅಡಿಯಿಟ್ಟಿದೆ. ಇದೇ ಶನಿವಾರದಿಂದ ಪ್ರಾರಂಭವಾಗುತ್ತಿರುವ 'ಕುಣಿಯೋಣು ಬಾರಾ' ಕಿರುತೆರೆಯಲ್ಲಿ ಸಂಚಲನ ಉಂಟು ಮಾಡಲಿದೆ" ಎಂದು ಜೀ ಕನ್ನಡದ ವ್ಯವಹಾರ ಮುಖ್ಯಸ್ಥ ಅನೂಪ್ ಚಂದ್ರಶೇಖರನ್ ತಿಳಿಸಿದ್ದಾರೆ.
ಮಕ್ಕಳಿಗಾಗಿ ನಡೆವ ಈ ಕಾರ್ಯಕ್ರಮದ ನಿರೂಪಕರಾಗಿ ಜೀ ಕನ್ನಡ ಪುಟಾಣಿಗಳನ್ನೇ ಪರಿಚಯಿಸುತ್ತಿದೆ. ಸರಿಗಮಪ ಲಿಟ್ಲ್ ಚಾಂಪ್ಸ್ ಕಾರ್ಯಕ್ರಮದಲ್ಲಿ ತಮ್ಮ ಅದ್ಭುತ ಗಾಯನ ಹಾಗೂ ತಮ್ಮ ಶೈಲಿಯಿಂದ ವೀಕ್ಷಕರ ಮನಗೆದ್ದ ಸಹನಾ ಹೆಗಡೆ ಹಾಗೂ ಅನಿರುದ್ಧ 'ಕುಣಿಯೋಣು ಬಾರಾ' ನಿರೂಪಣೆಯನ್ನು ನಡೆಸಿಕೊಡಲಿದ್ದಾರೆ. ತೀರ್ಪುಗಾರರಾಗಿ ಛಾಯಾ ಸಿಂಗ್ ಹಾಗೂ ಮಾಲೂರು ಶ್ರೀನಿವಾಸ ಭಾಗವಹಿಸಲಿದ್ದಾರೆ.
ಭಾಗ 3ರ ವಿಜೇತರಿಗೆ ಬಹುಮಾನ:
ಜೀ ಕನ್ನಡದ ಕಾರ್ಯಕ್ರಮ 'ಕುಣಿಯೋಣು ಬಾರಾ' (ಭಾಗ 3) ಕಾರ್ಯಕ್ರಮದ ಅಂತಿಮ ಸುತ್ತಿನ ಸ್ಫರ್ಧೆಯಲ್ಲಿ ಮಮತಾ ಬಾಯಿ ವಿಜೇತರಾಗಿ ಆಯ್ಕೆಯಾಗಿದ್ದಾರೆ. ಜೂ.8ರಂದು ಸಂಜೆ 5.30ಕ್ಕೆ ಪ್ರಸಾರವಾದ ಈ ಸ್ಪರ್ಧೆಯ ಅಂತಿಮ ಸುತ್ತಿನ ಸಂಚಿಕೆಯಲ್ಲಿ ವಿಜೇತರಿಗೆ ನಗರದ ಮೈಸೂರು ರಸ್ತೆಯಲ್ಲಿಯ ಮುಖ್ಯ ಭಾಗದಲ್ಲಿ ಬೆಲೆ ಬಾಳುವ ನಿವೇಶನವೊಂದು ಬಹುಮಾನವಾಗಿ ಲಭಿಸಿದೆ. ಅಲ್ಲದೇ ಮೊದಲ ರನ್ನರ್ ಅಪ್ ಶಿವಶಂಕರ್ ಹಾಗೂ ಉಳಿದ ಇಬ್ಬರು ರನ್ನರ್-ಅಪ್ಗಳಾದ ನಾಗೇಂದ್ರ ಮತ್ತು ನರಸಿಂಹ ಅವರಿಗೆ ಕ್ರಮವಾಗಿ 50 ಸಾವಿರ ಹಾಗೂ ತಲಾ 25 ಸಾವಿರ ನಗದು ಹಣವನ್ನು ಬಹುಮಾನವಾಗಿ ನೀಡಲಾಯಿತು.
(ದಟ್ಸ್ಕನ್ನಡ ಸಿನಿವಾರ್ತೆ)
ಪೂರಕ ಓದಿಗೆ:
ಜೀ ಕನ್ನಡ ಕುಣಿಯೋಣು ಬಾರಾ ಅಂತಿಮ ಸ್ಪರ್ಧೆ


Click it and Unblock the Notifications