‘ದೇವದಾಸ್’ಗೆ ಆಸ್ಕರ್ ಮನೆಯ ಕದ ತೆರೆಯಲಿಲ್ಲ
ಮುಂಬಯಿ : ಕಳೆದ ವರ್ಷ ಲಗಾನ್ ಇಲೆವೆನ್ ಆಸ್ಕರ್ ಆಟಕ್ಕೆ ಎಂಟ್ರಿ ಗಿಟ್ಟಿಸಿ ಫೈನಲ್ ಸುತ್ತಲ್ಲಿ ಸೋಲುಂಡಿತ್ತು. ಈ ಬಾರಿ ಭಾರೀ ಕುತೂಹಲ ಹುಟ್ಟಿಸಿದ್ದ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ದೇವದಾಸ್’ ವಿದೇಶೀ ಚಿತ್ರಗಳ ವಿಭಾಗದ ನಾಮಿನೆಷನ್ ಸುತ್ತಿನಲ್ಲೇ ಹೊರಬಿದ್ದಿದೆ. ಅರ್ಥಾತ್ ಆಸ್ಕರ್ ಸ್ಪರ್ಧೆಯ ಅಂಗಳಕ್ಕೆ ಈ ಚಿತ್ರ ಹೋಗುತ್ತಿಲ್ಲ.
ಮಂಗಳವಾರ (ಫೆ.11) ಆಸ್ಕರ್ ನಾಮಿನೇಷನ್ನ ಅಂತಿಮ ಪಟ್ಟಿ ಪ್ರಕಟವಾಯಿತು. ಅದರಲ್ಲಿ ತಮ್ಮ ಚಿತ್ರದ ಹೆಸರು ಇಲ್ಲವಾದ್ದರಿಂದ ನಿರ್ಮಾಪಕ ಭರತ್ ಷಾ ಬೇಸರದಲ್ಲಿದ್ದರು. ಶಾರುಖ್ ಕೂಡ ‘ಬ್ಯಾಡ್ಲಕ್’ ಅಂದರು. ಸಂಜಯ್ ಲೀಲಾ ಬನ್ಸಾಲಿ ಯಾರಿಗೂ ಫೋನಿಗೆ ಸಿಕ್ಕುತ್ತಿಲ್ಲ. ಅವರ ಮೊಬೈಲು ನಿರಂತರ ಸ್ವಿಚಾಫ್ ಆಗಿದೆ. ಪ್ರಾಯಶಃ ಆಸ್ಕರ್ ಮನೆಗೆ ಎಂಟ್ರಿ ಸಿಗದಿದ್ದಕ್ಕೆ ಇದೇ ಅವರ ಪ್ರತಿಕ್ರಿಯೆ.
‘ಬ್ರಿಟಿಷ್ ಅಕಾಡೆಮಿ ಆಫ್ ಟೆಲಿವಿಷನ್ ಅಂಡ್ ಫಿಲ್ಮ್ ಅವಾರ್ಡ್ಸ್’ ನ ವಿದೇಶೀ ಚಿತ್ರಗಳ ವಿಭಾಗಕ್ಕೆ ಈಗಾಗಲೇ ಪ್ರವೇಶ ಗಿಟ್ಟಿಸಿಕೊಂಡಿರುವ ‘ದೇವದಾಸ್’ ಅಲ್ಲಿ ಪ್ರಶಸ್ತಿ ಗಿಟ್ಟಿಸೀತೆ ಎಂಬ ಕುತೂಹಲವಷ್ಟೇ ಈಗ ಉಳಿದಿರುವುದು.
ಇಷ್ಟಕ್ಕೂ ‘ದೇವದಾಸ್’ಗೆ ಆಸ್ಕರ್ ಎಂಟ್ರಿ ಯಾಕೆ ಸಿಗಲಿಲ್ಲ ? ಚಿತ್ರ ತೀರಾ ಭಾರತೀಯಮಯವಾಯಿತು ಅನ್ನುವುದು ಸಿನಿಮಾ ವಿಮರ್ಶಕರ ಅಂಬೋಣ.
(ಇನ್ಫೋ ವಾರ್ತೆ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications