ಪುನೀತ್ ಹುಟ್ಟುಹಬ್ಬಕ್ಕೆ ಅನ್ನದಾಸೋಹ
ಅಂತೂ'ಹ್ಯಾಟ್ರಿಕ್ ಹೀರೋ" ಎನ್ನುವ ಯಶಸ್ಸಿನ ಗರಿ ಅಣ್ಣನಂತೆ ತಮ್ಮನಿಗೂ ದಕ್ಕುವ ದಿನ ಪಾಲಿಗೆ ಹತ್ತಿರವಾಗಿದೆ. ಪುನೀತ್ ರಾಜ್ಕುಮಾರ್ ಅಭಿನಯದ 'ವೀರ ಕನ್ನಡಿಗ" ದಿನ ಶತ ದಿನೋತ್ಸವದತ್ತ ಹೆಜ್ಜೆಯಿಟ್ಟಿದೆ.
ಭರ್ಜರಿ ಓಪನಿಂಗ್ನ ನಂತರ ಮಂಕಾಗಿದ್ದ 'ವೀರ ಕನ್ನಡಿಗ" ನಂತರದ ದಿನಗಳಲ್ಲಿ ಚೇತರಿಸಿಕೊಂಡಿದ್ದಾನೆ. ನೂರರ ಹೊಸ್ತಿಲಿಗೂ ಬಂದಿದ್ದಾನೆ. ಪುನೀತ್ ಖುಷಿಯಾಗಲಿಕ್ಕೆ ಇನ್ನೇನು ಬೇಕು. ಹ್ಞಾಂ, ಪುನೀತ್ ಖುಷಿಗೆ ಇನ್ನೂ ಒಂದು ಕಾರಣವಿದೆ. ಅದು ಹುಟ್ಟುಹಬ್ಬದ ಸಂಭ್ರಮ. ಮಾ.17ರಂದು ಪುನೀತ್ ಜನುಮದಿನ.
ಪುನೀತ್ ರಾಜ್ಕುಮಾರ್ ತಮ್ಮ ಹುಟ್ಟುಹಬ್ಬ ಹೇಗೆ ಆಚರಿಸುತ್ತಾರೋ ಗೊತ್ತಿಲ್ಲ . ಅವರ ಅಭಿಮಾನಿಗಳಿಗಂತೂ ನಾಯಕ ನಟನ ಹುಟ್ಟುಹಬ್ಬ ವಿಭಿನ್ನವಾಗಿರಬೇಕು ಅಂತ ನಿರ್ಧರಿಸಿಬಿಟ್ಟಿದ್ದಾರೆ.
'ರಾ-ಶಿ-ರಾ-ಪು" ಅಭಿಮಾನಿ ಬಳಗವು ಪುನೀತ್ರ 29ನೇ ಹುಟ್ಟುಹಬ್ಬದ ಸಲುವಾಗಿ ಮಾರ್ಚ್ ಹದಿನೇಳರ ಬುಧವಾರ ಮಲೆ ಮಹದೇಶ್ವರ ಸ್ವಾಮಿಗೆ ತಮ್ಮ ನೆಚ್ಚಿನ ನಟನ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಲಿದೆ. ಅಂದು ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಅನ್ನ ದಾಸೋಹವೂ ಇದೆ. ಬೆಳಗಿನಿಂದ ಸಂಜೆಯವರೆಗೆ ಈ ಅನ್ನ ದಾಸೋಹ ನಿರಂತರವಾಗಿ ನಡೆಯಲಿದೆ. ಅನ್ನದಾನ ಮಹಾದಾನ ಅಲ್ಲವೇ !
ಅಂತೆಯೇ, ಪುನೀತ್ ನಿವಾಸದ ಬಳಿ ಅಭಿಮಾನಿಗಳಿಗಾಗಿ ಸಿಹಿ ಹಂಚುವ ವ್ಯವಸ್ಥೆ ಕೂಡ ಮಾಡಲಾಗಿದೆ.
ಪುನೀತ್ಗೆ ಶುಭಾಶಯಗಳು. ಮಲೆ ಮಾದೇಶ್ವರ ಅವರಿಗೆ ಒಳ್ಳೆಯದು ಮಾಡಲಿ. ಅಂದಹಾಗೆ, ಪುನೀತ್ರ ಮುಂದಿನ ಸಿನಿಮಾ ಯಾವಾಗ ? ವಿವರಗಳನ್ನು ನಿರೀಕ್ಷಿಸಿ.


Click it and Unblock the Notifications