ಪಂಚಕೋಟಿ ಕನ್ನಡಿಗರ ಕಣ್ಮಣಿ ಡಾ.ರಾಜ್ ಅಸ್ತಂಗತ!!
ಬೆಂಗಳೂರು : ಕನ್ನಡ ಚಿತ್ರರಂಗದ ಜೀವಂತ ದಂತಕತೆ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ನಟ ಡಾ.ರಾಜ್ಕುಮಾರ್(77) ಇನ್ನಿಲ್ಲ.
ಹೃದಯಾಘಾತದಿಂದ ನಗರದ ರಾಮಯ್ಯ ಆಸ್ಪತ್ರೆಯಲ್ಲಿ ಅವರು ಬುಧವಾರ ಮಧ್ಯಾಹ್ನ 1.45ರ ಸುಮಾರಿನಲ್ಲಿ ನಿಧನರಾದರು. ಇತ್ತೀಚೆಗೆ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು. ತೀವ್ರ ಎದೆನೋವು ಮತ್ತು ಉಸಿರಾಟದ ಸಮಸ್ಯೆಯಿಂದ ಸೊರಗಿದ್ದ ರಾಜ್, ಕೆಲವು ವಾರಗಳ ಹಿಂದಷ್ಟೇ, ವೋಕ್ಹಾರ್ಟ್ ಆಸ್ಪತ್ರೆಯಲ್ಲಿ ಚೇತರಿಕೆ ಕಂಡಿದ್ದರು.
ತಮ್ಮ ಸಹೋದರ ವರದರಾಜು ನಿಧನದಿಂದ ರಾಜ್ಕುಮಾರ್ ಈಚಿನ ದಿನಗಳಲ್ಲಿ ತಲ್ಲಣಗೊಂಡಿದ್ದರು. ಹಿರಿಯ ನಟನ ನಿಧನದಿಂದ ಕನ್ನಡ ಚಿತ್ರರಂಗ ಯಜಮಾನನಿಲ್ಲದ ಮನೆಯಂತಾಗಿದೆ. ಸುಮಾರು 200ಕ್ಕೂ ಅಧಿಕ ಚಿತ್ರಗಳಲ್ಲಿ ಗಮನೀಯ ಪಾತ್ರಗಳಲ್ಲಿ ತಮ್ಮ ಕಲಾನೈಪುಣ್ಯತೆಯನ್ನು ಪ್ರದರ್ಶಿಸಿದ್ದ ರಾಜ್ ಅವರಿಗೆ ಪದ್ಮಭೂಷಣ ಸೇರಿದಂತೆ ಅನೇಕ ಪ್ರಶಸ್ತಿಗಳು ಮತ್ತು ಬಿರುದುಗಳು ಸಂದಾಯವಾಗಿದ್ದವು.
ಅವರ ನಿಧನದಿಂದ ಅಭಿಮಾನಿಗಳು ಮತ್ತು ರಾಜ್ ಕನಸಾದ ‘ಭಕ್ತ ಅಂಬರೀಷ’ ಕನಸಾಗಿಯೇ ಉಳಿದಿದೆ.
1929ರ ಏ.24ರಂದು ಗಾಜನೂರಿನಲ್ಲಿ ಜನಿಸಿದ್ದ ರಾಜ್, ತಮ್ಮ 45ವರ್ಷಗಳ ಬಣ್ಣದ ಬದುಕಿನಲ್ಲಿ ಎತ್ತರದ ಸ್ಥಾನವನ್ನು ತಲುಪಿದ್ದರು. ಬಂಗಾರದ ಮನುಷ್ಯ, ಕಸ್ತೂರಿನಿವಾಸ, ಜೀವನಚೈತ್ರ ಸೇರಿದಂತೆ ಅನೇಕ ಚಿತ್ರಗಳು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿವೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications