ರಮ್ಯಕೃಷ್ಣ - ಕೃಷ್ಣವಂಶಿ ಮದುವೆಯಾದರು !
*ದಟ್ಸ್ಕನ್ನಡ ಬ್ಯೂರೊ
ದಕ್ಷಿಣ ಭಾರತದ ಜನಪ್ರಿಯ ನಟಿ ರಮ್ಯಕೃಷ್ಣ ಕೊನೆಗೂ ಮದುವೆಯಾಗಿದ್ದಾರೆ. ಈ ಮೂಲಕ ತೆಲುಗು ನಿರ್ದೇಶಕ ಕೃಷ್ಣವಂಶಿ ಹಾಗೂ ರಮ್ಯಕೃಷ್ಣ ಅವರ ದೀರ್ಘಕಾಲಿಕ ಗೆಳೆತನ ವೈವಾಹಿಕ ಬಂಧನವಾಗಿ ಬದಲಾಗಿದೆ.
ಹೈದರಾಬಾದ್ನಲ್ಲಿ ಬುಧವಾರ (ಜೂ.11) ನಡೆದ ವಿವಾಹ ಸಮಾರಂಭದಲ್ಲಿ ರಮ್ಯಕೃಷ್ಣ ಹಾಗೂ ಕೃಷ್ಣವಂಶಿ ಸತಿಪತಿಗಳಾದರು. ಬಂಧುಮಿತ್ರರ ಹಾಜರಿಯಲ್ಲಿ ನಡೆದ ಖಾಸಗಿ ಸಮಾರಂಭದಿಂದ ಮಾಧ್ಯಮ ಪ್ರತಿನಿಧಿಗಳನ್ನು ದೂರವಿಡಲಾಗಿತ್ತು .
ವಿಷ್ಣುವರ್ಧನ್ಗೆ ನಾಯಕಿಯಾಗಿ ‘ಕೃಷ್ಣ ರುಕ್ಮಿಣಿ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ರಮ್ಯಕೃಷ್ಣ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದ್ದರು. ರವಿಚಂದ್ರನ್ ಜೊತೆಯಲ್ಲಿ ನಟಿಸಿದ ಗಡಿಬಿಡಿ ಗಂಡ ಹಾಗೂ ಮಾಂಗಲ್ಯಂ ತಂತುನಾನೇನ ಚಿತ್ರಗಳು ಬಾಕ್ಸಾಫೀಸ್ ಕೊಳ್ಳೆ ಹೊಡೆದಿದ್ದವು. ರವಿಚಂದ್ರನ್ರ ಮಹತ್ವಾಕಾಂಕ್ಷೆಯ ಸಿನಿಮಾ ‘ಏಕಾಂಗಿ’ಯಲ್ಲೂ ರಮ್ಯಕೃಷ್ಣ ನಟಿಸಿದ್ದರು.
ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಅಪಾರ ಜನಪ್ರಿಯತೆ ಗಳಿಸಿದ ರಮ್ಯಕೃಷ್ಣ ಅವರಿಗೆ ಇತ್ತೀಚೆಗೆ ಅವಕಾಶಗಳು ಕಡಿಮೆಯಾಗಿದ್ದವು.
ರಮ್ಯಕೃಷ್ಣ ಅವರ ಕೈ ಹಿಡಿದಿರುವ ಕೃಷ್ಣವಂಶಿ ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕರು. ಗುಲಾಬಿ ಹಾಗೂ ಅಂತಃಪುರಂ- ಕೃಷ್ಣವಂಶಿ ಅವರಿಗೆ ಹೆಸರು ತಂದುಕೊಟ್ಟ ಸಿನಿಮಾಗಳು. ಕೃಷ್ಣವಂಶಿ ಅವರ ಚಂದ್ರಲೇಖಾ ಸಿನಿಮಾದಲ್ಲಿ ರಮ್ಯಕೃಷ್ಣ ನಟಿಸಿದ್ದರು. ಶಕ್ತಿ ಎನ್ನುವ ಹಿಂದಿ ಸಿನಿಮಾವನ್ನು ಕೂಡ ಕೃಷ್ಣವಂಶಿ ನಿರ್ದೇಶಿಸಿದ್ದಾರೆ.
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications